ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರಿಲ್ಲ; ಚುನಾವಣಾಧಿಕಾರಿಗೆ ದೂರು
ಚೆನ್ನೈ, ಏಪ್ರಿಲ್ 6: ಮಾಜಿ ಸಿಎಂ ದಿ. ಜಯಲಲಿತಾ ಅವರ ಆಪ್ತೆ, ಶಶಿಕಲಾ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದ್ದು, ಇದು ಅನ್ಯಾಯ ಎಂದು ಅವರ ಕಾನೂನು ಸಲಹಾಗಾರರು ಆರೋಪಿಸಿದ್ದಾರೆ.
ಈ ಕುರಿತು ಶಶಿಕಲಾ ಅವರಿಗೆ ಬೇಸರವಾಗಿದೆ. ಇದಕ್ಕೆ ಜವಾಬ್ದಾರರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಎಐಎಡಿಎಂಕೆ ಮಣ್ಣು ಮುಕ್ಕಿದಾಗ ಶಶಿಕಲಾ ವಾಪಸ್ ಬಂದೇ ಬರುತ್ತಾರೆ; ತಮಿಳುನಾಡಿನಲ್ಲಿ ಚಿನ್ನಮ್ಮ ಪರ ಅಲೆ
ಇಂದು ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ. ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿದ್ದ ಶಶಿಕಲಾ ಹೆಸರನ್ನು ಅಳಿಸಿಹಾಕಲಾಗಿದೆ. ಶಶಿಕಲಾ ಅವರು ಈ ಮುನ್ನ ಜಯಲಲಿತಾ ಅವರ ಪೋಸ್ ಗಾರ್ಡನ್ ನಿವಾಸದಲ್ಲಿದ್ದು, ಆನಂತರ ಎಐಎಡಿಎಂಕೆ ಸರ್ಕಾರ ಆ ಸ್ಥಳವನ್ನು ಸ್ಮಾರಕವಾಗಿಸಲು ಸುಪರ್ದಿಗೆ ತೆಗೆದುಕೊಂಡಿದೆ ಎಂದು ಎನ್ ರಾಜಾ ಸೆಂತೂರು ಪಾಂಡಿಯನ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಸಮಯ ಜನವರಿ 31, 2019ರಲ್ಲಿ ಶಶಿಕಲಾ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ರಾಜಾ ಅವರು ಆರೋಪಿಸಿದ್ದಾರೆ. ಈ ವಿಷಯ ಕಳೆದ ತಿಂಗಳು ಗಮನಕ್ಕೆ ಬಂದಿದ್ದು, ಹೆಸರು ಅಳಿಸುವ ಮುನ್ನ ಯಾವುದೇ ನೋಟೀಸ್ ನೀಡಿಲ್ಲ. ಇದು ಅನ್ಯಾಯ ಎಂದು ಮುಖ್ಯ ಚುನಾವಣಾಧಿಕಾರಿ ಸತ್ಯಬ್ರಾತ ಸಾಹೂ ಅವರಿಗೆ ಪತ್ರ ಬರೆದಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು, ಅಳಿಸಲು ಕೊನೆಯ ದಿನಾಂಕವು ಮುಗಿದಿದೆ ಎಂದು ಸಾಹೂ ಅವರು ತಿಳಿಸಿದ್ದಾರೆ. ಆದರೆ ಯಾಕೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೊದಲು ನೋಟೀಸ್ ನೀಡಿಲ್ಲ ಎಂದು ರಾಜಾ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಯಾರು ಹೊಣೆಗಾರರು ತಿಳಿದಿಲ್ಲ. ಚುನಾವಣೆ ನಡೆದ ನಂತರ ಈ ವಿಷಯದ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಉತ್ತರಿಸಿದ್ದಾರೆ.