ಸಕ್ರಿಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಶಶಿಕಲಾ ನಟರಾಜನ್
ಚೆನ್ನೈ, ಮೇ 30: ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ಶಶಿಕಲಾ ನಟರಾಜನ್ ಸಕ್ರಿಯ ರಾಜಕಾರಣಕ್ಕೆ ಮರಳುವ ಸುಳಿವನ್ನು ನೀಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಸಂಪೂರ್ಣವಾಗಿ ಕಡಿಮೆಯಾದ ಬಳಿಕ ಶಶಿಕಲಾ ನಟರಾಜನ್ ಸಕ್ರಿಯ ರಾಜಕಾರಣದಲ್ಲಿ ಮತ್ತೆ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾದ ದೂರವಾಣಿ ಸಂಭಾಷಣೆಯೊಂದು ವೈರಲ್ ಆಗಿದ್ದು ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ತಮಿಳುನಾಡು ರಾಜಕಾರಣ ಮತ್ತೆ ರಂಗು ಪಡೆಯುವ ಸುಳಿವು ನೀಡಿದೆ.
Recommended Video
ಶಶಿಕಲಾ ಮತ್ತು ಪಕ್ಷದ ಕಾರ್ಯಕರ್ತರೊಬ್ಬರು ಚರ್ಚಿಸಿರುವ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಾತುಕತೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳುವ ಇಂಗಿತವನ್ನು ಶಶಿಕಲಾ ಅವರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಶಿಕಲಾ ನಟರಾಜನ್ ಅವರು ರಾಜಕೀಯ ಪುನರಾಗಮನವನ್ನು ಕೆಲ ನಾಯಕರು ಖಚಿತಪಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಡಿಎಂಕೆ ವಿರುದ್ಧ ಸೋಲು ಕಂಡ ಬಳಿಕ ಈ ಬೆಳವಣಿಗೆಗಳು ನಡೆದಿದೆ. ಈ ದೂರವಾಣಿ ಸಂಭಾಷಣೆಯ ಬಗ್ಗೆ ಎಎಂಎಂಕೆ ಪಕ್ಷದ ಕಾರ್ಯದರ್ಶಿ ಟಿಟಿವಿ ದಿನಕರನ್ ಆಪ್ತ ಕಾರ್ಯದರ್ಶಿ ಜನಾರ್ಧನ್ ಖಚಿತಪಡಿಸಿದ್ದಾರೆ.
"ಎಲ್ಲರೂ ಧೈರ್ಯದಿಂದಿರಿ"
ಈ ದೂರವಾಣಿ ಸಂಭಾಷಣೆಯಲ್ಲಿ ಕಾರ್ಯಕರ್ತನ ಜೊತೆಗೆ ಶಶಿಕಲಾ "ಪಕ್ಷದ ಎಲ್ಲಾ ಗೊಂದಲಗಳು ಬಗೆಹರಿಯಲಿದೆ. ಎಲ್ಲರೂ ಧೈರ್ಯದಿಂದಿರಿ. ಕೊರೊನಾ ಸಾಂಕ್ರಾಮಿಕ ರೋಗ ಕಡಿಮೆಯಾದ ಬಳಿಕ ನಾನು ಬರುತ್ತೇನೆ" ಎಂದು ಶಶಿಕಲಾ ಹೇಳಿದ್ದಾರೆ. ಇದಕ್ಕೆ ಕಾರ್ಯಕರ್ತ ಪ್ರತಿಕ್ರಿಯಿಸಿದ್ದು "ನಾವು ನಿಮ್ಮ ಜೊತೆಗೆ ಇರುತ್ತೇವೆ ಅಮ್ಮ" ಎಂದಿರುವುದು ಈ ದೂರವಾಣಿ ಕರೆಯ ಸಂಭಾಷಣೆಯಲ್ಲಿ ರೆಕಾರ್ಡ್ ಆಗಿದೆ.
ಅಚ್ಚರಿ ಮೂಡಿಸಿತ್ತು ಶಶಿಕಲಾ ನಿರ್ಧಾರ
ಏಪ್ರಿಲ್ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಶಶಿಕಲಾ ನಟರಾಜನ್ ರಾಜಕೀಯದಿಂದ ನಿವೃತ್ತಿಯಾಗುವ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಶಶಿಕಲಾ ನಟರಾಜನ್ ಅವರ ಆಗಮನದಿಂದ ತಮಿಳುನಾಡು ರಾಜಕಾರಣದಲ್ಲಿ ಕೆಲ ಬದಲಾವಣೆಗಳು ಸಂಭವಿಸಬಹುದು ಎಂದು ನಿರೀಕ್ಷಿಸಿದ್ದ ಸಂದರ್ಭದಲ್ಲಿ ಶಶಿಕಲಾ ನಟರಾಜನ್ ತೆಗೆದುಕೊಂಡ ಈ ನಿರ್ಧಾರ ಅಚ್ಚರಿಯನ್ನು ಮೂಡಿಸಿತ್ತು. ಆದರೆ ಈಗ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವಂತಾ ಬೆಳವಣಿಗೆಗಳು ನಡೆದಿದೆ.
ಶಿಕ್ಷೆ ಮುಗಿಸಿ ಮರಳಿದ್ದ ಶಶಿಕಲಾ
ಭಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಶಶಿಕಲಾ ನಟರಾಜನ್ ಅದನ್ನು ಪೂರೈಸಿ ಇತ್ತೀಚೆಗಷ್ಟೇ ಮರಳಿದ್ದರು. ಈ ಬೆಳವಣಿಗೆ ತಮಿಳುನಾಡು ರಾಜಕಾರಣವನ್ನು ಮತ್ತಷ್ಟು ಕುತೂಹಲದಿಂದ ನೋಡುವಂತೆ ಮಾಡಿತ್ತು. ಅದರಲ್ಲೂ ಜೈಲಿನಿಂದ ಬಿಡುಗಡೆಯಾಗಿ ಚೆನ್ನೈಗೆ ಮರಳುವಾಗ ಶಶಿಕಲಾ ನಟರಾಜನ್ಗೆ ದೊರೆತ ಅದ್ದೂರಿ ಸ್ವಾಗತ ತಮಿಳುನಾಡು ರಾಜಕಾರಣದಲ್ಲಿ ಮತ್ತಷ್ಟು ಚಟುವಟಿಕೆಗಳು ಗರಿಗೆದರುವ ಸೂಚನೆ ನೀಡಿದ್ದವು. ಆದರೆ ಅನಾರೋಗ್ಯದ ಕಾರಣಕ್ಕೆ ಶಶಿಕಲಾ ನಟರಾಜನ್ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು.
ಕುತೂಹಲ ಮೂಡಿಸಿದ ಬೆಳವಣಿಗೆ
ಅಕ್ರಮ ಆಸ್ತಿ ಗಳಿಕೆ ಆರೋಪ ದೃಢಪಟ್ಟು ಜೈಲುಶಿಕ್ಷೆಗೆ ಗುರಿಯಾದ ನಂತರ ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಚಾಟಿಸಲಾಗಿತ್ತು. ಆನಂತರ ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ಎಎಂಎಂಕೆ ಪಕ್ಷವನ್ನು ಸ್ಥಾಪನೆಮಾಡಿದ್ದರು. ಹೀಗಾಗಿ ಸಕ್ರಿಯ ಚುನಾವಣೆಗೆ ಮರಳಿದರೆ ಶಶಿಕಲಾ ನಟರಾಜನ್ ಅವರ ಮುಂದಿನ ನಡೆ ಯಾವ ರೀತಿಯಲ್ಲಿರಲಿದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ.