ಎಐಎಡಿಎಂಕೆ ಮಣ್ಣು ಮುಕ್ಕಿದಾಗ ಶಶಿಕಲಾ ವಾಪಸ್ ಬಂದೇ ಬರುತ್ತಾರೆ; ತಮಿಳುನಾಡಿನಲ್ಲಿ ಚಿನ್ನಮ್ಮ ಪರ ಅಲೆ
ಚೆನ್ನೈ, ಮಾರ್ಚ್ 5: ಶಶಿಕಲಾ ರಾಜಕೀಯಕ್ಕೆ ಸದ್ಯಕ್ಕೆ ವಿದಾಯ ಹೇಳಿರಬಹುದು. ಆದರೆ ಈಗಿನ ಆಡಳಿತ ಪಕ್ಷ ಮಣ್ಣು ಮುಕ್ಕಿದಾಗ ಅವರು ವಾಪಸ್ ಬಂದೇ ಬರುತ್ತಾರೆ. ಆ ಸಮಯವೂ ದೂರ ಉಳಿದಿಲ್ಲ ಎಂಬ ಮಾತುಗಳು ಈಗ ತಮಿಳುನಾಡಿನಲ್ಲಿ ಕೇಳಿ ಬರುತ್ತಿವೆ.
ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆ ಇನ್ನು ಕೆಲವೇ ದಿನಗಳು ಉಳಿದಿರುವಾಗ ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದರು.
ಅಚ್ಚರಿಯ ಬೆಳವಣಿಗೆ: ರಾಜಕೀಯ ಸನ್ಯಾಸತ್ವ ಪ್ರಕಟಿಸಿದ ಶಶಿಕಲಾ
ಅಮ್ಮಾ ಸರ್ಕಾರದ ಕನಸು ನನಸಾಗಲಿ. ನನ್ನ ನಿರ್ಗಮನದಿಂದ ಆ ಕನಸು ಈಡೇರಲಿ ಎಂದು ಹಾರೈಸಿ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದರು. ಈ ಬೆಳವಣಿಗೆಗಳ ನಂತರ ಶಶಿಕಲಾ ಪರ ತಮಿಳುನಾಡಿನಲ್ಲಿ ಮಾತುಗಳು ಕೇಳಿಬರುತ್ತಿವೆ. ಮುಂದೆ ಓದಿ...
ಶಶಿಕಲಾ ನಟರಾಜನ್ ಮರಳುವಿಕೆ ತಂದಿದ್ದ ರಾಜಕೀಯ ತಲ್ಲಣ
ಶಶಿಕಲಾ ನಟರಾಜನ್ 4 ವರ್ಷ ಜೈಲು ಶಿಕ್ಷೆ ಅನುಭವಿಸಿ ಈಚೆಗಷ್ಟೆ ತಮಿಳುನಾಡಿಗೆ ಮರಳಿದ್ದರು. ಅವರ ಈ ಆಗಮನ ತಮಿಳುನಾಡು ರಾಜಕೀಯವನ್ನೇ ತಲ್ಲಣಗೊಳಿಸಿತ್ತು. ಎಐಎಡಿಎಂಕೆಗೆ ಮತ್ತೆ ಶಶಿಕಲಾ ಪ್ರವೇಶಿಸುವ ಸಾಧ್ಯತೆ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿತ್ತು. ಆದರೆ ಚುನಾವಣೆ ಕೆಲವೇ ದಿನಗಳು ಇರುವಾಗ ರಾಜಕೀಯದಿಂದ ದೂರ ಸರಿಯುವ ಶಶಿಕಲಾ ಘೋಷಣೆ ಅಚ್ಚರಿಗೆ ಕಾರಣವಾಗಿತ್ತು.
ಚಿನ್ನಮ್ಮನಿಗೆ ತಮಿಳುನಾಡು ಜನರಿಂದ ಸಿಕ್ಕಿತ್ತು ಭರ್ಜರಿ ಸ್ವಾಗತ
ಜೈಲು ಶಿಕ್ಷೆ ಅನುಭವಿಸಿ ಶಶಿಕಲಾ ಮರಳುತ್ತಿದ್ದಂತೆ ತಮಿಳುನಾಡಿನಲ್ಲಿ ಭರ್ಜರಿ ಸ್ವಾಗತ ದೊರೆತಿತ್ತು. ಚಿನ್ನಮ್ಮನ ಆಗಮನಕ್ಕೆ ಲಕ್ಷಾಂತರ ಮಂದಿ ಸೇರಿ ಅವರ ರಾಜಕೀಯ ಪ್ರವೇಶಕ್ಕೆ ಬೆಂಬಲವನ್ನೂ ವ್ಯಕ್ತಪಡಿಸಿದ್ದರು. ಈ ಎಲ್ಲಾ ಚಿತ್ರಣಗಳು ಶಶಿಕಲಾ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ನೀಡಿತ್ತು.
ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?
ಎಐಎಡಿಎಂಕೆಗೆ ಸೇರಿಸಿಕೊಳ್ಳಲ್ಲ ಎಂದಿದ್ದ ಸಿಎಂ ಪಳನಿಸ್ವಾಮಿ
ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಶಶಿಕಲಾ ಜೈಲು ಸೇರುತ್ತಿದ್ದಂತೆ ಎಐಎಡಿಎಂಕೆಯಿಂದ ಶಶಿಕಲಾ ಅವರನ್ನು ಉಚ್ಚಾಟಿಸಲಾಗಿತ್ತು. ಆನಂತರ ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ಎಎಂಎಂಕೆ ಪಕ್ಷ ಸ್ಥಾಪಿಸಿದ್ದರು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಶಶಿಕಲಾ ಎಐಎಡಿಎಂಕೆಗೆ ಮತ್ತೆ ಬರುತ್ತಾರೆ ಇಲ್ಲವೇ ಎಎಂಎಂಕೆಯಿಂದ ಸ್ಪರ್ಧಿಸುತ್ತಾರೆ ಎಂದೇ ಜನ ನಿರೀಕ್ಷಿಸಿದ್ದರು. ಎಐಎಡಿಎಂಕೆಗೆ ಮರಳಿ ಶಶಿಕಲಾ ಅವರನ್ನು ಸೇರಿಸಿಕೊಳ್ಳುವ ಕುರಿತು ಅಥವಾ ಎಎಂಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಬಿಜೆಪಿ ಹಲವು ಸಭೆಗಳನ್ನು ನಡೆಸಿದ್ದರೂ ಎರಡೂ ಪಕ್ಷದವರು ತಮ್ಮ ನಿರ್ಧಾರದಿಂದ ಅಚಲರಾಗಿದ್ದರು.
"ಚಿನ್ನಮ್ಮನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ"
ಶಶಿಕಲಾ ಅವರ ರಾಜಕೀಯ ವಿದಾಯ ನಿರ್ಧಾರದ ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕರ ಮಾತುಕತೆ ನಡೆದಿದೆ ಎಂಬ ಶಂಕೆ ವ್ಯಕ್ತಗೊಂಡಿದೆ. ಬಿಜೆಪಿ ಶಶಿಕಲಾ ಅವರನ್ನು ರಾಜಕೀಯದಿಂದ ಹಿಂದೆ ಸರಿಯುವಂತೆ ಒತ್ತಾಯ ಹೇರಿದೆ ಎಂಬ ಮಾತುಗಳು ಕೇಳಿಬಂದಿವೆ.
ಶಶಿಕಲಾ ಪತಿ ದಿ. ನಟರಾಜನ್ ಅವರ ಸಂಬಂಧಿ ಎ.ರಾಜಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಚಿನ್ನಮ್ಮ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರ ಕುಟುಂಬ ಈಗ ಸುಮ್ಮನಿರಬಹುದು. ತನ್ನದೇ ಕಾರಣಗಳಿಂದ ಹಾಗೂ ಅಹಂಕಾರದ ನಡೆಯಿಂದ ಎಐಎಡಿಎಂಕೆ ಮಣ್ಣು ಮುಕ್ಕಿದಾಗ ಶಶಿಕಲಾ ಅವರನ್ನು ರಾಜಕೀಯದಿಂದ ದೂರ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಬಹುದೊಡ್ಡ ಅಂತರದಿಂದ ಎಐಎಡಿಎಂಕೆ ಸೋಲು ಕಂಡಾಗ ಶಶಿಕಲಾ ಮರಳುತ್ತಾರೆ. ಆಗ ಪಕ್ಷದ ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಭರವಸೆ ಹೊರಹಾಕಿದ್ದಾರೆ.