ಶಶಿಕಲಾ ಮುಂದಿರುವ ಅಂತಿಮ 4 ಆಯ್ಕೆಗಳಿವು..
ಜೆ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಶಶಿಕಲಾರನ್ನು ದೋಷಿ ಎಂದು ತೀರ್ಪು ನೀಡಿದೆ. ಇನ್ನೇನು ಚಿನ್ನಮ್ಮ ಪರಪ್ಪನ ಅಗ್ರಹಾರ ಸೇರಲಿದ್ದಾರೆ. ಇದರ ಮಧ್ಯೆಯೂ ಒಂದಷ್ಟು ಬೆರಳೆಣಿಕೆಯ ಆಯ್ಕೆಗಳು ಬಾಕಿ ಉಳಿದಿದ್ದು ವಿ.ಕೆ ಶಶಿಕಲಾ
ಚೆನ್ನೈ, ಫೆಬ್ರವರಿ 14: ಜೆ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಶಶಿಕಲಾರನ್ನು ದೋಷಿ ಎಂದು ತೀರ್ಪು ನೀಡಿದೆ. ಇನ್ನೇನು ಚಿನ್ನಮ್ಮ ಪರಪ್ಪನ ಅಗ್ರಹಾರ ಸೇರಲಿದ್ದಾರೆ. ಇದರ ಮಧ್ಯೆಯೂ ಒಂದಷ್ಟು ಬೆರಳೆಣಿಕೆಯ ದಾರಿಗಳು ಆಕೆಗೆ ಬಾಕಿ ಉಳಿದಿವೆ. ಈ ಆಯ್ಕೆಗಳು ವಿ.ಕೆ ಶಶಿಕಲಾ ಭವಿಷ್ಯ ನಿರ್ಧರಿಸಲಿವೆ.[20 ವರ್ಷಗಳ ನಂತರ ಸತ್ಯಕ್ಕೆ ಗೆಲುವು: ಸ್ವಾಮಿ]
ಈಗಾಗಲೇ ಚಿನ್ನಮ್ಮ ತಮ್ಮ ದಾಳ ಉರುಳಿಸುವ ಸೂಚನೆಗಳನ್ನು ನೀಡಿದ್ದಾರೆ. ತಮ್ಮ ನಂಬಿಕಸ್ಥ ಆಪ್ತ ಎಡಪ್ಪಡಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಲು ಪ್ಲಾನ್ ಹಾಕಿಕೊಂಡಿದ್ದಾರೆ. ಜತೆಗೆ 'ಕಾನೂನಿನಲ್ಲಿ ಧರ್ಮಕ್ಕೆ ಜಯವಾಗಲಿದೆ' ಎಂದು ಹೇಳಿದ್ದು ಮೇಲ್ಮನವಿ ಸಲ್ಲಿಸುವ ಸೂಚನೆಗಳನ್ನೂ ಬಿಟ್ಟು ಕೊಟ್ಟಿದ್ದಾರೆ. ವಿ.ಕೆ ಶಶಿಕಲಾ ಮುಂದಿರುವ ಅಂತಿಮ ಆಯ್ಕೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.[ಪನ್ನೀರ್ ಸೆಲ್ವಂ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ]
ಮರು ಪರಿಶೀಲನೆ
ತಕ್ಷಣಕ್ಕೆ ಸುಪ್ರಿಂ ಕೋರ್ಟಿಗೆ ಶಶಿಕಲಾ ಮೇಲ್ಮನವಿ ಸಲ್ಲಿಸಬಹುದು. ತೀರ್ಪಿನಲ್ಲಿ ನನಗೆ ಅನ್ಯಾಯವಾಗಿದೆ ಎಂದು ಮೇಲ್ಮನವಿ ಸಲ್ಲಿಸುವ ಅವಕಾಶ ಅವರಿಗಿದೆ. ಆದರೆ 30 ದಿನದ ಒಳಗೆ ಈ ಮೇಲ್ಮನವಿ ಸಲ್ಲಿಸಲೇಬೇಕು.
ಅರ್ಜಿ ಸಲ್ಲಿಸಿದರೆ ವಾದಿಸಲು ಅವಕಾಶ ಇಲ್ಲ. ಕೇವಲ ದಾಖಲೆಗಳಲ್ಲಿರುವ ತಪ್ಪುಗಳ ಆಧಾರದ ಮೇಲೆ ಮೇಲ್ಮನವಿ ಸಲ್ಲಿಸಬಹುದು. ಆದರೆ ಸದ್ಯದ ಮಟ್ಟಿಗೆ ಮೇಲ್ಮನವಿ ಅರ್ಜಿಯನ್ನು ಸುಪ್ರಿಂ ಕೋರ್ಟ್ ಪುರಸ್ಕರಿಸುವ ಸಾಧ್ಯತೆಗಳು ತೀರಾ ಕಡಿಮೆ.
ಕ್ಯುರೇಟಿವ್ ಅರ್ಜಿ
ಒಂದೊಮ್ಮೆ ಮೇಲ್ಮನವಿ ಅರ್ಜಿ ತಿರಸ್ಕೃತವಾದರೆ, ನನಗೆ ಆದೇಶದಲ್ಲಿ ನ್ಯಾಚುರಲ್ ಜಸ್ಟೀಸ್ ಸಿಕ್ಕಿಲ್ಲ ಎಂದು ಕ್ಯುರೇಟಿವ್ ಪಿಟಿಷನ್ ಸಲ್ಲಿಸಬಹುದು. ಆದರೆ ಅದನ್ನು ಸುಪ್ರಿಂ ಕೋರ್ಟ್ ಒಪ್ಪಿಕೊಳ್ಳುವ ಸಾಧ್ಯತೆ ತೀರಾ ತೀರಾ ಕಡಿಮೆಯಾಗಿದೆ.
ಜೈಲು ಪಾಲು
ಈಗಾಗಲೇ ಶಶಿಕಲಾ ಜೈಲು ಶಿಕ್ಷೆಯನ್ನು ಅನುಭವಿಸಿದ್ದರೆ ಆ ಅವಧಿ 4 ವರ್ಷದ ಶಿಕ್ಷೆಯಲ್ಲಿ ಕಡಿತವಾಗಲಿದೆ. ಇದಲ್ಲದೇ ಜೈಲು ಪಾಲಾದ ನಂತರ ಸಾಮಾನ್ಯ ಖೈದಿಗಳಿರುವ ಆಯ್ಕೆಯಂತೆ ಬಂಧ ವಿಮೋಚನೆ (ಅವಧಿಗೂ ಮುನ್ನ ಬಿಡುಗಡೆ)ಗೆ 'ಅಪರಾಧಿಗಳ ಬಂಧ ವಿಮೋಚನಾ ಕಾಯ್ದೆ-1958' ರಂತೆ ಅರ್ಜಿ ಸಲ್ಲಿಸಿ ಸ್ವಲ್ಪ ಬೇಗ ಹೊರ ಬರಬಹುದು.
ಬದಲಿ ಮುಖ್ಯಮಂತ್ರಿ
ಇಂಥಹದ್ದೊಂದು ಆಯ್ಕೆ ಶಶಿಕಲಾ ಮುಂದಿದೆ. ತಾವು ಮುಖ್ಯಮಂತ್ರಿಯಾಗದಿದ್ದರೇನಂತೆ ತಮ್ಮ ನಂಬಿಕಸ್ಥರೊಬ್ಬರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು. ಈಗಾಗಲೇ ಶಶಿಕಲಾ ಪಾಳಯದಲ್ಲಿ ಬಹುಮತ ಇರುವುದರಿಂದ ಆ ಆಯ್ಕೆ ಇದೆ. ಆದರೆ ಈಗಾಗಲೇ ಒಬ್ಬೊಬ್ಬರಾಗಿ ಒ ಪನ್ನೀರ್ ಸೆಲ್ವಂ ಬಣ ಸೇರುತ್ತಿರುವುದರಿಂದ ಆ ಆಯ್ಕೆಯೂ ಮುಂದಿನ ಕೆಲವು ಗಂಟೆಗಳಲ್ಲಿ ಇಲ್ಲವಾಗಬಹುದು.
ಉತ್ತರಾಧಿಕಾರಿ
ಈಗಾಗಲೇ ಶಶಿಕಲಾ ಎಡಪ್ಪಡಿ ಪಳನಿಸ್ವಾಮಿ ಅವರನ್ನು ತಮ್ಮ ಉತ್ತರಾಧಿಕಾರಿ ಹಾಗೂ ಪಕ್ಷದ ನಾಯಕರಾಗಿ ಸೂಚಿಸಿದ್ದಾರೆ ಎಂಬ ವರದಿಗಳು ಬರುತ್ತಿವೆ. ಇಂಥಹದ್ದೊಂದು ದಾಳ ಉರುಳಿಸಿಯೂ, ತಮ್ಮ ಬಣದಲ್ಲೇ ಮುಖ್ಯಮಂತ್ರಿ ಹುದ್ದೆಯನ್ನು ಶಶಿಕಲಾ ಉಳಿಸಿಕೊಳ್ಳುವ ಸಾಧ್ಯತೆಗಳು ಮಾತ್ರ ಕಡಿಮೆ ಎಂದೇ ಹೇಳಬಹುದು.