ಸರವಣ ಭವನ ರಾಜ್ ಗೋಪಾಲ್ ಗೆಲುವಿನ ದಿನಗಳಿಂದ ಜೈಲಿನ ಹಾದಿ ತನಕ
ಚೆನ್ನೈ, ಜುಲೈ 3: ತಮಿಳುನಾಡಿನ ಹಳ್ಳಿಯೊಂದರ ಕೆಳ ಜಾತಿಯ- ಈರುಳ್ಳಿ ವ್ಯಾಪಾರಿಯೊಬ್ಬರ ಮಗನಾದ ಪಿ.ರಾಜಗೋಪಾಲ್ ಜೀವನಗಾಥೆಯಲ್ಲಿ ಇನ್ನೇನು ಹೊಸ ಪುಟ ಶುರುವಾಗಲಿದೆ. ಅವರು ತಲುಪಿದ ಎತ್ತರ ಅದ್ಭುತವಾದದ್ದು. ಅದೇ ರೀತಿ ಕಾಲು ನಿಲ್ಲದೆ ಬಿದ್ದ ಪಾತಾಳ ಕೂಡ ಅಂಥದ್ದೇ.
ಎಪ್ಪತ್ತೊಂದು ವರ್ಷದ, ಸದಾ ಬಿಳಿ ಪಂಚೆ- ಬಿಳಿ ಷರಟಿನಲ್ಲಿ ಕಾಣಿಸಿಕೊಳ್ಳುವ, ಹಣೆಯಲ್ಲಿ ಶ್ರೀಗಂಧ ಪಟ್ಟೆ ಇಡುವ ಪಿ.ರಾಜಗೋಪಾಲ್ ಸರವಣ ಭವನ ಹೋಟೆಲ್ ಸಮೂಹದ ಮಾಲೀಕರು. ಭಾರತದ ವಿವಿಧೆಡೆ, ಸಿಂಗಾಪೂರ್, ಅಸ್ಟ್ರೇಲಿಯಾದಲ್ಲೆಲ್ಲ ಹಬ್ಬಿ ನಿಂತಿರುವ ಸರವಣ ಭವನ ಸಾಮ್ರಾಜ್ಯವನ್ನು ನೋಡುತ್ತಾ ಹೆಮ್ಮೆ ಪಡಬೇಕಿದ್ದ ವಯಸ್ಸಿನಲ್ಲಿ ರಾಜಗೋಪಾಲ್, ಬಾಕಿ ಜೀವನವನ್ನು ಜೈಲಿನಲ್ಲಿ ಕಳೆಯಬೇಕಿದೆ.
ರವಿ ಬೆಳಗೆರೆ ಹೊಸ ಪುಸ್ತಕ 'ಇಡ್ಲಿ ವಡ ಡೆಡ್ಲಿ ಮರ್ಡರ್' ಒಂದು ಅಧ್ಯಾಯ
ಮೂವತ್ತೆಂಟು ವರ್ಷಗಳ ಹಿಂದೆ ಆಗಿನ ಮದ್ರಾಸ್ ನಲ್ಲಿ (ಈಗ ಚೆನ್ನೈ) ತರಕಾರಿ ಆರಂಭಿಸಿದ್ದರು ರಾಜ್ ಗೋಪಾಲ್. ಭಾರತೀಯರಿಗೆ ಮನೆಯಿಂದ ಹೊರಗಿನ ತಿನಿಸು ಅಪರಿಚಿತ ಎಂದಿದ್ದ ಕಾಲದಲ್ಲಿ ರೆಸ್ಟೋರೆಂಟ್ ಆರಂಭಿಸಿದರು. ಕೈಗೆಟುಕುವ ಬೆಲೆಯಲ್ಲಿ, ಬಾಯಿಗೆ ರುಚಿಯಾಗಿ, ಮನೆಯಲ್ಲೇ ಮಾಡಿದಂತೆ ಇರುವ ದೋಸೆ, ಇಡ್ಲಿ, ವಡೆ ಮಾರಬೇಕು ಎಂಬುದು ಅವರ ಯಶಸ್ಸಿನ ಸೂತ್ರವಾಯಿತು.
ಮದುವೆ ಅದೃಷ್ಟ ತರುತ್ತದೆ ಎಂದಿದ್ದರಂತೆ ಜ್ಯೋತಿಷಿ
ಯಾವುದೇ ಕೆಳ ಮಧ್ಯಮ ತರಗತಿಯವರು ಮನೆಯಿಂದ ಹೊರಗೆ ಒಂದೊಳ್ಳೆ ತಿಂಡಿ- ಊಟ ಮಾಡಬೇಕು ಅಂದರೆ, ಸರವಣ ಭವನ್ ಹೋಟೆಲ್ ನೇ ಆಯ್ಕೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಖ್ಯಾತಿ ಬೆಳೆಯಿತು. ಇವತ್ತಿಗೆ ಭಾರತವನ್ನೂ ದಾಟಿ ಅಮೆರಿಕ, ಗಲ್ಫ್, ಯುರೋಪ್, ಆಸ್ಟ್ರೇಲಿಯಾ ಸೇರಿ ಸರವಣ ಭವನದ ಎಂಬತ್ತು ಶಾಖೆಗಳು ವಿದೇಶಗಳಲ್ಲಿವೆ. ರಾಜ್ ಗೋಪಾಲ್ ತನ್ನ ಸಿಬ್ಬಂದಿಯನ್ನು ನೋಡಿಕೊಳ್ಳುತ್ತಿದ್ದ ರೀತಿಗೆ ಹಾಗೂ ಉದಾರತೆಗೆ ಉದಾಹರಣೆ ಎಂಬಂತೆ ಅವರನ್ನು ಎಲ್ಲರೂ 'ಅಣ್ಣಾಚ್ಚಿ' (ಅಣ್ಣ) ಎಂದು ಕರೆಯುತ್ತಿದ್ದರು. ಆದರೆ ಜ್ಯೋತಿಷಿ ಸಲಹೆಯಂತೆ 'ಅಣ್ಣಾಚ್ಚಿ' ತನ್ನ ಉದ್ಯೋಗಿಯ ಮಗಳನ್ನೇ ಮೂರನೇ ಹೆಂಡತಿಯಾಗಿ ಸ್ವೀಕರಿಸಲು ಸಿದ್ಧರಾದರು. ಮದುವೆ ಅವರಿಗೆ ಅದೃಷ್ಟ ತರುತ್ತದೆ ಎಂದಿದ್ದರಂತೆ ಜ್ಯೋತಿಷಿ.
ಆಕೆ ಪತಿಯನ್ನು ಕೊಲೆ ಮಾಡುವಂತೆ ಆದೇಶ ನೀಡಿದ್ದರು
ಆದರೆ, ಅವರಿಗೆ ಆ ಮಹಿಳೆ ಮೇಲೆ ಕಣ್ಣಿತ್ತು ಎನ್ನುತ್ತಾರೆ ಮಾಹಿತಿ ಇರುವವರು. ಅದಾಗಲೇ ಮದುವೆ ಆಗಿದ್ದ ಮಹಿಳೆ ಆಕೆ. ರಾಜ್ ಗೋಪಾಲ್ ಆಹ್ವಾನವನ್ನು ತಿರಸ್ಕರಿಸಿದರು. ಆದರೆ ಅಷ್ಟೊತ್ತಿಗಾಗಲೇ 'ಅಣ್ಣಾಚ್ಚಿ' ವಿಪರೀತ ಬೆಳೆದಿದ್ದರು. 'ಇಲ್ಲ' ಎಂಬ ಉತ್ತರ ಕೇಳುವುದಕ್ಕೆ ಅವರು ಸಿದ್ಧರಿರಲಿಲ್ಲ. ಬೆದರಿಕೆ, ಹಲ್ಲೆ ಎಲ್ಲ ಬಗೆಯಲ್ಲೂ ಆ ಮಹಿಳೆ ಹಾಗೂ ಪತಿಯನ್ನು ಬಗ್ಗಿಸಲು ಪ್ರಯತ್ನ ಪಟ್ಟರು ರಾಜ್ ಗೋಪಾಲ್. ಅದ್ಯಾವುದೂ ಸಾಧ್ಯವಿಲ್ಲ ಅಂತಾದಾಗ ಆಕೆಯ ಪತಿಯನ್ನು ಕೊಲೆ ಮಾಡಿಸಲು ನಿರ್ಧರಿಸಿದರು. ಮೊದಲ ಯತ್ನ ವಿಫಲವಾಯಿತು. ಎರಡನೇ ಬಾರಿಗೆ ಆ ಮಹಿಳೆಯ ಪತಿ ಕೊಲೆಯಾಗಿಯೇ ಹೋದ.
ಜೀವಾವಧಿ ಜೈಲು ಅನುಭವಿಸಬೇಕು
ಅದಾಗಿ ಮೂರು ವರ್ಷಕ್ಕೆ, ಅಂದರೆ ಈಗ್ಗೆ ಹದಿನೈದು ವರ್ಷದ ಹಿಂದೆ, ಕೋರ್ಟ್ ನಿಂದ ರಾಜ್ ಗೋಪಾಲ್ ರನ್ನು ತಪ್ಪಿತಸ್ಥ್ ಎಂದು ಘೋಷಿಸಲಾಯಿತು. ಹತ್ತು ವರ್ಷ ಶಿಕ್ಷೆ ಎಂದೂ ಆಯಿತು. ಮೇಲ್ಮನವಿ ಸಲ್ಲಿಸಿದ ಕಾರಣಕ್ಕೆ ಶಿಕ್ಷೆಯ ಪ್ರಮಾಣವನ್ನು ಜೀವಾವಧಿಗೆ ಏರಿಕೆ ಮಾಡಲಾಯಿತು. ಆ ನಂತರ ಇದೇ ಮಾರ್ಚ್ ನಲ್ಲಿ ಸುಪ್ರೀಂ ಕೋರ್ಟ್ ಜೀವಾವಧಿ ಜೈಲು ಎಂಬುದನ್ನೇ ಎತ್ತಿ ಹಿಡಿಯಿತು. ಜುಲೈ ಏಳನೇ ತಾರೀಕು ರಾಜ್ ಗೋಪಾಲ್ ಶರಣಾಗಬೇಕು ಹಾಗೂ ಜೀವತಾವಧಿಯ ಬಾಕಿ ಸಮಯವನ್ನು ಜೈಲಿನಲ್ಲೇ ಕಳೆಯಬೇಕು. ಎರಡು ಕಾರಣಗಳಿಗೆ ಸಮಾಜಕ್ಕೆ ರಾಜ್ ಗೋಪಾಲ್ ಉದಾಹರಣೆಯಾಗಿ ನಿಲ್ಲುತ್ತಾರೆ.
ಕೊಲೆ ಮಾಡಿದರೂ ದಕ್ಕಿಸಿಕೊಳ್ಳಬಲ್ಲೆನೆಂಬ ಧೋರಣೆ
ಎಂಥದ್ದೇ ಸ್ಥಿತಿಯಿಂದ ಬೇಕಾದರೂ ಎತ್ತರಕ್ಕೆ ಏರಬಹುದು. ವಿಭಿನ್ನವಾದ ಆಲೋಚನೆ, ಅದಕ್ಕೆ ತಕ್ಕ ಶ್ರಮ ಹಾಕಿದರೆ ಗೆಲುವು ನಿಶ್ಚಿತ ಎಂಬುದಕ್ಕೆ ಸ್ಫೂರ್ತಿಯಾಗಿಯೂ ಇನ್ನು ಮಹಿಳೆ ವಿಚಾರದಲ್ಲಿನ ದೌರ್ಬಲ್ಯ ಹಾಗೂ ಕೊಲೆ ಮಾಡಿದರೂ ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ಎಂಥ ಹೀನ ಸ್ಥಿತಿಗೂ ದೂಡಬಹುದು ಎಂಬುದಕ್ಕೆ ರಾಜ್ ಗೋಪಾಲ್ ಉದಾಹರಣೆಯಾಗಿ ಕಾಣುತ್ತಾರೆ. ಸರವಣ ಭವನದಂಥ ದೊಡ್ಡ ಸಾಮ್ರಾಜ್ಯ ಕಟ್ಟುವುದು ಸಲೀಸಾದ ಸಂಗತಿಯಲ್ಲ. ಜೀವನದ ಇಳಿಸಂಜೆ ಕಾಲದಲ್ಲಿ ಉಳಿದ ಕಾಲವನ್ನು ಜೈಲಿನಲ್ಲೇ ಅನುಭವಿಸಬೇಕಾಗಿದೆ ಪಿ.ರಾಜ್ ಗೋಪಾಲ್.