3 ದಿನದಲ್ಲಿ ಆಮರಣಾಂತ ಜೈಲು ವಾಸಕ್ಕೆ ತೆರಳಲಿರುವ ಸರವಣ ಭವನ ಮಾಲೀಕ
ಚೆನ್ನೈ, ಜುಲೈ 04: ವಿದೇಶಗಳಲ್ಲೂ ಹೊಟೆಲ್ ಗಳನ್ನು ಹೊಂದಿರುವ ಖ್ಯಾತ ಹೊಟೆಲ್ ಸಮೂಹ ಸಂಸ್ಥೆ 'ಸರವಣ ಭವನ'ದ ಮಾಲೀಕ ಇನ್ನು ಮೂರು ದಿನಗಳಲ್ಲಿ ಜೈಲು ಸೇರಲಿದ್ದಾರೆ.
ಸಣ್ಣ ಹೊಟೆಲ್ನಿಂದ ಪ್ರಾರಂಭಿಸಿ ಸಾವಿರಾರು ಕೋಟಿಗಳನ್ನು ಗಳಿಸಿದ ಸರವಣ ಭವನ ಮಾಲೀಕ ಪಿ.ರಾಜಗೋಪಾಲ್ ಕ್ಷಣಿಕ ಸುಖಕ್ಕೆ ಆಸೆಪಟ್ಟು ಸಾಯುವವರೆಗೆ ಜೈಲಿನಲ್ಲಿ ಕೊಳೆಯು ಸ್ಥಿತಿ ಎದುರಾಗಿದೆ.
ಸರವಣ ಭವನ ರಾಜ್ ಗೋಪಾಲ್ ಗೆಲುವಿನ ದಿನಗಳಿಂದ ಜೈಲಿನ ಹಾದಿ ತನಕ
ಪಿ.ರಾಜಗೋಪಾಲ್ ಮೊದಲಿಗೆ ಚೆನ್ನೈನಲ್ಲಿ ಸಣ್ಣ ಹೊಟೆಲ್ ಪ್ರಾರಂಭ ಮಾಡಿದ್ದರು, ಕೇವಲ ಮೂರು ದಶಕದಲ್ಲಿ ಅದನ್ನು ಬೃಹತ್ ಆಗಿ ಬೆಳೆಸಿದರು. ಇಂದು ದೇಶದಾದ್ಯಂತ 33 ಕಡೆ ಸರವಣ ಭವನ ಹೊಟೆಲ್ ಇದೆ. ವಿದೇಶದಲ್ಲಿರುವ ಹೊಟೆಲ್ ಸೇರಿ ಒಟ್ಟು 47 ಹೊಟೆಲ್ಗಳು ಪಿ.ರಾಜಗೋಪಾಲ್ ಒಡೆತನದಲ್ಲಿದೆ. ಆದರೆ ಏನಿದ್ದರೇನು ಇದಾವುದನ್ನೂ ಅನುಭವಿಸುವ ಅವಕಾಶವನ್ನು ಅವರೇ ಕಳೆದುಕೊಂಡಿದ್ದಾರೆ.
ಯುವತಿಯ ಮೇಲೆ ಕಣ್ಣು ಹಾಕಿದ್ದ ರಾಜಗೋಪಾಲ್
ಸರವಣ ಭವನ ಮಾಲೀಕ ಪಿ.ರಾಜಗೋಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಪ್ರಮುಖ ಅಪರಾಧಿಯಾಗಿ ಜುಲೈ 7 ರಂದು ಜೈಲು ಸೇರಲಿದ್ದಾರೆ. ಪಿ.ರಾಜಗೋಪಾಲ್, ತಮ್ಮದೇ ಹೊಟೆಲ್ ಸಮೂಹಲದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರ ಮಗಳ ಗಂಡನನ್ನು ಹತ್ಯೆ ಮಾಡಿರುವುದು ಸಾಬೀತಾಗಿದ್ದು, ಅವರಿಗೆ ಆಮರಣಾಂತ ಜೈಲುವಾಸದ ಶಿಕ್ಷೆ ಆಗಿದೆ.
ಜ್ಯೋತಿಷಿ ಮಾತು ಕೇಳಿ ಹಾಳಾದ ರಾಜಗೋಪಾಲ್
ಜ್ಯೋತಿಷಿ ಒಬ್ಬರ ಮಾತು ಕೇಳಿ ರಾಜಗೋಪಾಲ್, ತಮ್ಮ ಸಮೂಹದಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರ ಮಗಳನ್ನು ಮೂರನೇ ಮದುವೆ ಆಗಲು ಯತ್ನಿಸಿದ್ದರು, ಆದರೆ ಆಕೆಗೆ ಈಗಾಗಲೇ ಮದುವೆ ಆಗಿತ್ತು. ಅವರ ಕುಟುಂಬಕ್ಕೆ ಬಹುವಾಗಿ ಕಾಟ ಕೊಟ್ಟ ಪಿ.ರಾಜಗೋಪಾಲ್ ಅಂತಿಮವಾಗಿ 2001 ರಲ್ಲಿ ಆಕೆಯ ಪತಿಯನ್ನು ಹತ್ಯೆ ಮಾಡಿಸಿದ.
ಶಿಕ್ಷೆ ಎತ್ತಿ ಹಿಡಿದ ಸುಪ್ರಿಂಕೋರ್ಟ್
2004 ರವರೆಗೆ ನಡೆದ ವಿಚಾರಣೆಯಲ್ಲಿ ಪಿ.ರಾಜಗೋಪಾಲ್ ಅಪರಾಧಿ ಎಂಬುದು ಸಾಬೀತಾಗಿ, ಹತ್ತು ವರ್ಷ ಜೈಲು ಶಿಕ್ಷೆ ಆಗುತ್ತದೆ, ನಂತರ ಅದೇ ಅಮರಣಾಂತ ಜೈಲು ಶಿಕ್ಷೆ ಆಗಿ ಬದಲಾಯಿತು, ಪಿ.ರಾಜಗೋಪಾಲ್ ಪ್ರಕರಣವನ್ನು ಸುಪ್ರಿಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದರು, ಆದರೆ ಈಗ ಸುಪ್ರಿಂ ಕೋರ್ಟ್ ಸಹ ಆದೇಶವನ್ನು ಎತ್ತಿ ಹಿಡಿದಿದೆ.
ಜುಲೈ 7 ರಂದು ಪೊಲೀಸರಿಗೆ ಶರಣಾಗಲಿದ್ದಾರೆ
ಪಿ.ರಾಜಗೋಪಾಲ್ ಗೆ ನೀಡಿರುವ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರಿಂಕೋರ್ಟ್, ಜುಲೈ 7 ರ ವರೆಗೆ ರಾಜಗೋಪಾಲ್ಗೆ ಗಡುವು ನೀಡಿದ್ದು, ಅಷ್ಟರ ಒಳಗಾಗಿ ಅವರು ಪೊಲೀಸರಿಗೆ ಶರಣಾಗಿ ಜೈಲು ವಾಸ ಅನುಭವಿಸಬೇಕಾಗಿದೆ. ಮೂಲಗಳ ಮಾಹಿತಿಯಂತೆ ರಾಜಗೋಪಾಲ್ ಜುಲೈ 7 ರಂದು ಪೊಲೀಸರಿಗೆ ಶರಣಾಗಲಿದ್ದಾರೆ.