'ಸರ್ಕಾರ್' ಚಿತ್ರದಲ್ಲಿ ಜಯಲಲಿತಾ ವಿಲನ್, ಎಐಎಡಿಎಂಕೆ ಕಿಡಿ
ಚೆನ್ನೈ, ನವೆಂಬರ್ 07: ತಮಿಳಿನ ಜನಪ್ರಿಯ ನಟ ವಿಜಯ್ ಅಭಿಯನದ ಸರ್ಕಾರ್ ಚಿತ್ರದಲ್ಲಿ ಜಯಲಲಿತಾ ಅವರನ್ನು ಕೆಟ್ಟದಾಗಿ ಬೆಂಬಿಸಲಾಗಿದೆ ಎಂದು ಎಐಎಡಿಎಂಕೆ ಕಿಡಿಕಾರಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಆ ಪಾತ್ರ, ಸನ್ನಿವೇಶ ಬದಲಾಯಿಸಬೇಕು ಎಂದು ತಮಿಳುನಾಡಿನ ಸಚಿವ ಕಡಂಬೂರ್ ರಾಜು ಅವರು ಆಗ್ರಹಿಸಿದ್ದಾರೆ.
ತಮಿಳುನಾಡಿನ ವಾರ್ತಾ ಹಾಗೂ ಪ್ರಸಾರ ಸಚಿವ ಕೆ ರಾಜು ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಜೆ ಜಯಲಲಿತಾ ಅವರ ನೇತೃತ್ವದ ಸರ್ಕಾರವನ್ನು ಕೆಟ್ಟದಾಗಿ ತೋರಿಸಲಾಗಿದೆ. ಚಿತ್ರದ ವಿಲನ್ ಪಾತ್ರಧಾರಿಗೆ ಕೋಮಲವಲ್ಲಿ ಎಂದು ಹೆಸರಿಡಲಾಗಿದೆ. ಇದು ದಿವಂಗತ ಜೆ ಜಯಲಲಿತಾ ಅವರ ಮೂಲ ಹೆಸರಾಗಿದೆ.
ವಿಜಯ್ ಅವರ ಇತ್ತೀಚಿನ ಚಿತ್ರಗಳು ಸಾಮಾಜಿಕ ಕಳಕಳಿಯ ಹೆಸರಿನಲ್ಲಿ ನೇರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧವೇ ಮೂಡಿ ಬಂದಿವೆ. ಈ ಚಿತ್ರಗಳ ಯಶಸ್ಸಿನ ಮೂಲಕ ವಿಜಯ್ ಅವರು ರಾಜಕೀಯ ಪ್ರವೇಶಿಸುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರದ ಅಡಿಯಲ್ಲಿ ಸೆನ್ಸಾರ್ ಬೋರ್ಡ್ ಇದ್ದು, ಅವರಿಗೆ ಇಲ್ಲಿನ ರಾಜಕೀಯ ಸೂಕ್ಷ್ಯತೆಯ ಅರಿವಿಲ್ಲ. ಚಿತ್ರತಂಡವು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕದಿದ್ದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ರಾಜು ಹೇಳಿದ್ದಾರೆ.
ನವೆಂಬರ್ 06ರಂದು ತೆರೆ ಕಂಡಿರುವ ಸರ್ಕಾರ್ ಚಿತ್ರವನ್ನು ಎಆರ್ ಮುರಗದಾಸ್ ನಿರ್ದೇಶಿಸಿದ್ದು, ಡಿಎಂಕೆ ಒಡೆತನ ಸನ್ ನೆಟ್ವರ್ಕ್ ನ ಚೇರ್ಮನ್ ಕಲಾನಿಧಿ ಮಾರನ್ ಅವರು ನಿರ್ಮಾಣ ಮಾಡಿದ್ದಾರೆ.