ತಮಿಳುನಾಡಿನಲ್ಲಿ 15 ಲಕ್ಷದ ತುಂಬಿಸಿಟ್ಟಿದ್ದ ಎಟಿಎಂ ಯಂತ್ರವನ್ನೇ ಎಗರಿಸಿದ ಖದೀಮರು!
ಚೆನ್ನೈ, ಮಾರ್ಚ್.02: ತಮಿಳುನಾಡಿನಲ್ಲಿ ಎಟಿಎಂಗೆ ಹಣ ಬಿಡಿಸಿಕೊಳ್ಳುವುದಕ್ಕಾಗಿ ತೆರಳಿದ ಗ್ರಾಹಕರಿಗೆ ಶಾಕ್ ಆಗುವಂತಾ ಘಟನೆಯೊಂದು ವರದಿಯಾಗಿದೆ. ತಿರಪ್ಪೂರ್ ಎಂಬಲ್ಲಿ ಎಟಿಎಂ ಮಷಿನ್ಗೆ ಎಟಿಎಂ ಮಷಿನ್ನೇ ನಾಪತ್ತೆಯಾಗಿದೆ.
ಬೆಳ್ಳಂಬೆಳಗ್ಗೆ 4.30ರ ಸಮಯಕ್ಕೆ ಎಟಿಎಂಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡವು ಬ್ಯಾಂಕ್ ಆಫ್ ಬರೋಡಾದ ಎಟಿಎಂ ಮಷಿನ್ ಒಡೆದು ಹಣ ದೋಚುವುದಕ್ಕೆ ಪ್ರಯತ್ನಿಸಿದೆ. ಎಟಿಎಂ ಒಡೆಯುವುದಕ್ಕೆ ಆಗದಿದ್ದಾಗ ಇಡೀ ಮಷಿನ್ ಅನ್ನೇ ಕದ್ದುಕೊಂಡು ಹೋಗಿರುವುದು ಗೊತ್ತಾಗಿದೆ.
ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಹಿನ್ನೆಲೆ ನಾಲ್ವರು ಖದೀಮರು ರೋಪ್ ಬಳಸಿಕೊಂಡು ಇಡೀ ಎಟಿಎಂ ಮಷಿನ್ನ್ನು ತಮ್ಮ ವಾಹನದಲ್ಲಿ ತುಂಬಿಕೊಂಡು ಸಾಗಿಸಿರುವ ದೃಶ್ಯವು ಎಟಿಎಂನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
15 ಲಕ್ಷ ರೂಪಾಯಿ ತುಂಬಿದ ಎಟಿಎಂ ಕಳ್ಳತನ
ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಕಳೆದ ಫೆಬ್ರವರಿ.19ರಂದು ಎಟಿಎಂನಲ್ಲಿ 15 ಲಕ್ಷ ರೂಪಾಯಿ ಹಣವನ್ನು ತುಂಬಿಸಿಡಲಾಗಿತ್ತು. ಫೆಬ್ರವರಿ 28ರ ವೇಳೆಗೆ ಎಟಿಎಂನಲ್ಲಿ ಇನ್ನೂ 1.5 ಲಕ್ಷ ರೂಪಾಯಿ ಉಳಿದಿರಬಹುದು ಎಂದು ಬ್ಯಾಂಕ್ ಅಧಿಕಾರಿಗಳು ಅಂದಾಜಿಸಿದ್ದಾರೆ.
ಎಟಿಎಂ ಭದ್ರತೆಗೆ 2 ವರ್ಷಗಳಿಂದ ಸಿಬ್ಬಂದಿಯಿಲ್ಲ
ಎಟಿಎಂ ಮಷಿನ್ ಕಳ್ಳತನ ಪ್ರಕರಣದ ನಂತರದಲ್ಲಿ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಎಟಿಎಂ ರಕ್ಷಣೆಗೆ ಯಾವುದೇ ಸಿಬ್ಬಂದಿಯನ್ನು ನಿಯೋಜನೆ ಮಾಡದಿರುವುದೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗಿದೆ. ಕಳೆದ 2 ವರ್ಷಗಳಿಂದಲೂ ರಾತ್ರಿ ಪಹರಿಯಲ್ಲಿ ಎಟಿಎಂ ಭದ್ರತೆಗೆ ಸಿಬ್ಬಂದಿ ನಿಯೋಜಿಸಿರಲಿಲ್ಲ ಎಂದು ಗೊತ್ತಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ತನಿಖೆ
ಬ್ಯಾಂಕ್ ಆಫ್ ಬರೋಡಾ ಎಟಿಎಂ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದ ದಿನ ಎಟಿಎಂ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ತೆಲಂಗಾಣದಲ್ಲೂ ಇದೇ ರೀತಿ ಪ್ರಕರಣಗಳು
ತಮಿಳುನಾಡಿನಲ್ಲಿ ನಡೆದ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣವನ್ನೇ ಹೋಲುವಂತಾ ಘಟನೆಗಳು ನೆರೆಯ ತೆಲಂಗಾಣದಲ್ಲೂ ನಡೆದಿದ್ದವು. ಇತ್ತೀಚಿನ ದಿನಗಳಲ್ಲಿ ತೆಲಂಗಾಣದ ಹಲವೆಡೆ ಖದೀಮರ ತಂಡವು ಇಡೀ ಎಟಿಎಂ ಮಷಿನ್ಗಳನ್ನೇ ಕದ್ದು ಪರಾರಿ ಆಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.