ತಮಿಳುನಾಡಿನಲ್ಲಿ ರೆಡ್ ಅಲರ್ಟ್: ಚೆನ್ನೈನಲ್ಲಿ ಮಳೆಯ ಮೇಘಸ್ಫೋಟ
ಚೆನ್ನೈ ಡಿಸೆಂಬರ್ 31: ಹೊಸ ವರ್ಷಾಚರಣೆಗೆ ಸಿದ್ಧತೆ ನಡೆಸಿದ್ದ ಚೆನ್ನೈ ಸೇರಿದಂತೆ ಇಡೀ ರಾಜ್ಯವೇ ಗುರುವಾರ ದಿಢೀರ್ ಸುರಿದ ಅಕಾಲಿಕ ಮಳೆಗೆ ತತ್ತರಿಸಿದೆ. ನಿನ್ನೆಯಿಂದ ಎಡಬಿಡದೇ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಏಕಾಏಕಿ ಮುನಿಸಿಕೊಂಡ ವರುಣ ಜನರಿಗೆ ಅಚ್ಚರಿ ಮೂಡಿಸಿದ್ದಾನೆ. ಸಾಮಾನ್ಯ ಜನರಂತೆ ಹವಾಮಾನ ಇಲಾಖೆ ಕೂಡ ಈ ಭಾರಿ ಮಳೆ ಕಂಡು ಬೆರಗಾಗಿದೆ. ನವೆಂಬರ್ನಲ್ಲಿ ಸುರಿದ ಭಾರಿ ಮಳೆಯಿಂದ ಚೇತರಿಸಿಕೊಂಡಿದ್ದ ಚೂಲೈಮೇಡು, ಟಿ ನಗರ, ಅಶೋಕ್ ನಗರ, ತೆನಾಂಪೇಟೆ, ಮೈಲಾಪುರ, ಬ್ರಾಡ್ವೇ ಮತ್ತೆ ಮಳೆಯ ಆರ್ಭಟಕ್ಕೆ ತುತ್ತಾಗಿದೆ. ಕಳೆದ ರಾತ್ರಿಯಿಂದ ಎಡಬಿಡದೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜೊತೆಗೆ ವಿದ್ಯುತ್ ಸ್ಥಗಿತಗೊಂಡಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಮೂವರು ಬಲಿ
ಸತತ ಮಳೆಯಿಂದಾಗಿ ಚೆನ್ನೈನ ಮೂರು ವಿಭಿನ್ನ ಸ್ಥಳಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ. ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಜನರಿನ್ನೂ ಚೇತರಿಸಿಕೊಳ್ಳಲಾಗಿಲ್ಲ. ಅದಾಗಲೇ ಮತ್ತೆ ಅಧಿಕ ಮಳೆಗೆ ಜನ ಕಂಗಾಲಾಗಿದ್ದಾರೆ. ಮೋಡ ಒಡೆದಿದೆಯೇ ಎಂದು ಜನ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಚ್ಚರಿಗೊಂಡ ಹವಾಮಾನ ಇಲಾಖೆ
'ಇಂತಹ ಮಳೆಯನ್ನು ಊಹಿಸುವುದು ಕಷ್ಟ' ಎಂದು ಚಂಡಮಾರುತ ಎಚ್ಚರಿಕೆ ಕೇಂದ್ರದ ನಿರ್ದೇಶಕ ಎನ್ ಪುವಿಯರಸನ್ ಹೇಳಿದ್ದಾರೆ. 'ಇಂತಹ ಮಳೆಯನ್ನು ಊಹಿಸುವುದು ಕಷ್ಟ. ಡಿಸೆಂಬರ್ 31 ರಂದು ಚೆಂಗಲ್ಪಟ್ಟು ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ನಾವು ಭವಿಷ್ಯ ನುಡಿದಿದ್ದೆವು. ಅಲ್ಲಿ ಕೊಂಚ ಮಳೆ ಗೋಚರಿಸಿದೆ. ಆದರೆ ಇದ್ದಕ್ಕಿದ್ದಂತೆ ಈ ಮಳೆ ಬದಲಾಗಿದೆ ಚೆನ್ನೈಗೆ ಸ್ಥಳಾಂತರಗೊಂಡಿದೆ. ಚೆನ್ನೈನಾದ್ಯಂತ ಭಾರೀ ಮಳೆಯಾಗಿದೆ. ಇದು ಶುಕ್ರವಾರವೂ ಸಕ್ರಿಯಗೊಳ್ಳಲಿದೆ' ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ರೆಡ್ ಅಲರ್ಟ್
ಮಳೆಯ ತೀವ್ರತೆಯಲ್ಲಿ ವ್ಯತ್ಯಾಸವಿದ್ದರೂ ಜನವರಿ 2ರವರೆಗೆ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎನ್ ಪುವಿಯರಸನ್ ಅವರು ಹೇಳಿದರು. ನಿನ್ನೆ ಸಂಜೆಯವರೆಗೆ ಹಲವು ಕೇಂದ್ರಗಳಲ್ಲಿ ಸುಮಾರು 150 ಮಿ.ಮೀ ಮಳೆ ದಾಖಲಾಗಿದೆ. ಸಂಜೆ 6ರವರೆಗೆ ಮೈಲಾಪುರದಲ್ಲಿ 207 ಮಿ.ಮೀ ಹಾಗೂ ರಾತ್ರಿ 8ರವರೆಗೆ ಎಂಆರ್ಸಿ ನಗರ (ಚೆನ್ನೈ) 198 ಮಿ.ಮೀ, ನುಂಗಂಬಾಕ್ಕಂ 177.2 ಮಿ.ಮೀ, ಮೀನಂಬಾಕ್ಕಂ 131.3 ಮತ್ತು ಅಣ್ಣಾ ವಿಶ್ವವಿದ್ಯಾಲಯದಲ್ಲಿ 121 ಮಿ.ಮೀ ಮಳೆ ದಾಖಲಾಗಿದೆ. ಇಂದು ಕೂಡ ರಾಜ್ಯದ ಹಲವು ನಗರಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚಿಂಗಲ್ಪೇಟೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ.
ಪ್ರಯಾಣಿಕರ ಪರದಾಟ
ಈ ಅಕಾಲಿಕ ಮಳೆಯಿಂದಾಗಿ ಹಲವು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಜೊತೆಗೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಅಡೆತಡೆಗಳಿಂದಾಗಿ ದ್ವಿಚಕ್ರ ವಾಹನ ಸವಾರರು ನಿರ್ದಿಷ್ಟ ತೊಂದರೆಯನ್ನು ಎದುರಿಸುತ್ತಿದ್ದಾರೆ. ಅನೇಕರು ಆಟೋ ಮತ್ತು ಕ್ಯಾಬ್ಗಳನ್ನು ಬುಕ್ ಮಾಡಲು ಸಹ ಕಷ್ಟಪಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಇಂದು ಕಂಡುಬಂದಿವೆ.
ತಾಪಮಾನ ಹೆಚ್ಚಾಗುವ ಸಾಧ್ಯತೆ
2021 ವರ್ಷವು 2005 ಮತ್ತು 1996 ರ ನಂತರ ಮೂರನೇ ಅಧಿಕ ತಾಪಮಾನದ ವರ್ಷವಾಗಿದೆ. ಈ ಬಾರಿ ಚೆನ್ನೈ ಸೇರಿದಂತೆ ಇಡೀ ತಮಿಳುನಾಡಿನಲ್ಲಿ ದಾಖಲೆ ಮಳೆಯಾಗಿದೆ. ಇಂದು ಕೂಡ ಇಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಅದನ್ನು ಎದುರಿಸಲು ಆಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಹೀಗಾಗಿ ಈ ಬಾರಿ ಮಳೆ ಹೆಚ್ಚಾಗಿದ್ದು ಮುಂದಿನ ವರ್ಷವೂ ತಮಿಳುನಾಡಿನ ಜನ ಅಧಿಕ ತಾಪಮಾನವನ್ನೂ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.