ಲೈಂಗಿಕ ಹಗರಣದ ಸುನಾಮಿಗೆ ಸಿಕ್ಕ ಪೊಲ್ಲಾಚಿ ಈಗ ಮೊದಲಿನಂತಿಲ್ಲ!
ಆ ಊರಿನಲ್ಲಿ ಅಂಥ ಘಟನೆಯೇ!? ಆ ಊರಿನ ಬಗ್ಗೆ ಗೊತ್ತಿರುವ ಎಂಥವರಿಗೂ ಅಚ್ಚರಿ ಹುಟ್ಟಿಸುವ, ಗಾಬರಿ ಉಂಟು ಮಾಡುವ ಸನ್ನಿವೇಶ ಇದು. ಹೆಚ್ಚೇನಿಲ್ಲ, ತಮಿಳುನಾಡಿನ ಕೊಯಮತ್ತೂರಿನಿಂದ ದಕ್ಷಿಣಕ್ಕೆ ನಲವತ್ತೈದು ಕಿ.ಮೀ. ದೂರದಲ್ಲಿದೆ ಪೊಲ್ಲಾಚಿ. ಅಲ್ಲಿ ಒಂದು ಯುವಕರ ಗುಂಪು ಬಹಳ ವ್ಯವಸ್ಥಿತವಾಗಿ ಜಾಲ ರೂಪಿಸಿ, ಮಹಿಳೆಯರನ್ನು-ಯುವತಿಯರನ್ನು ಬಲೆಗೆ ಕೆಡವಿಕೊಳ್ಳುತ್ತಿತ್ತು.
ಆ ನಂತರ ಲೈಂಗಿಕ ದೌರ್ಜನ್ಯ ನಡೆಸಿ, ಅದರ ವಿಡಿಯೋ ಮಾಡುತ್ತಿತ್ತು. ಆ ವಿಡಿಯೋಗಳ ಮೂಲಕವೇ ಬ್ಲ್ಯಾಕ್ ಮೇಲ್ ಮಾಡಿ, ಅವರಿಂದ ಬೆಲೆ ಬಾಳುವ ಒಡವೆ, ಹಣ ವಸೂಲಿ ಮಾಡುತ್ತಿತ್ತು. ಆ ವಿಡಿಯೋ ಇದೆಯೆಂದು ಬೆದರಿಸಿ, ಹೆಣ್ಣುಮಕ್ಕಳನ್ನು ಸುಮ್ಮನಿರುವಂತೆ ಮಾಡುತ್ತಿತ್ತು. ಈ ದುಷ್ಕರ್ಮಿಗಳ ಕೆಲಸ ಹೀಗೆ, ಅವರು ಯೋಜನೆ ರೂಪಿಸುತ್ತಿದ್ದುದು ಹೀಗೆ ಅಂತ ಹೇಳಿದರೆ, ಹಲವರು- ಏನು ಪೊಲ್ಲಾಚಿಯಲ್ಲಿ ಹೀಗೆ ಮಾಡ್ತಿದ್ದರಾ? ಎಂದು ಪ್ರಶ್ನಿಸುವಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಹಿಳೆಯರು ಆರೋಪಿಗಳನ್ನು ಸುಲಭವಾಗಿ ನಂಬುವುದಕ್ಕೆ ಇದು ಕೂಡ ಕಾರಣ ಇರಬಹುದು. ಅಂಥ ಸಣ್ಣ ಊರಿನಲ್ಲಿ ಇಂಥ ಖತರ್ನಾಕ್ ಗ್ಯಾಂಗ್ ನ ಊಹಿಸಿರಲಿಕ್ಕಿಲ್ಲ. ಇಡೀ ಪ್ರಕರಣ ಆಚೆಗೆ ಬರಲು ಕಾರಣ ಆಗಿದ್ದು ಕಳೆದ ಫೆಬ್ರವರಿ ಹನ್ನೆರಡನೇ ತಾರೀಕು ಹತ್ತೊಂಬತ್ತು ವರ್ಷದ ಪೊಲ್ಲಾಚಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ.
ಆಕೆಯನ್ನು ಕಾರಿನಲ್ಲಿ ಕರೆದೊಯ್ದು, ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಸರ ಕಿತ್ತುಕೊಂಡಿದ್ದರು ನಾಲ್ವರು. ಹಾಗೂ ಆ ನಂತರ ಕೂಡ ಆಕೆ ಬಳಿ ಹಣಕ್ಕಾಗಿ ಪೀಡಿಸಿದ್ದರು. ಆ ನಾಲ್ವರ ಹೆಸರು ಶಬರಿರಾಜನ್, ತಿರುನಾವುಕ್ಕರಸು, ಸತೀಶ್ ಹಾಗೂ ವಸಂತ್ ಕುಮಾರ್. ಆ ವಿದ್ಯಾರ್ಥಿನಿಯು ಗತ್ಯಂತರ ಇಲ್ಲದೆ ಈ ವಿಚಾರ ತನ್ನ ಮನೆಯಲ್ಲಿ ತಿಳಿಸಿದ್ದಾಳೆ.
ತಮಿಳುನಾಡಿನ 'ಪೊಲ್ಲಾಚಿ ಲೈಂಗಿಕ ಹಗರಣ' ಏನು? ಎತ್ತ?
ಆ ಯುವತಿಯ ಸೋದರ ನಂತರ ತಿರುನಾವುಕ್ಕರಸು ಮತ್ತು ಶಬರಿರಾಜನ್ ನನ್ನು ಪತ್ತೆ ಮಾಡಿ, ಚೆನ್ನಾಗಿ ತದುಕಿದ ಮೇಲೆ ಭಯಾನಕವಾದ ಲೈಂಗಿಕ ಹಿಂಸೆ ಮತ್ತು ಹಫ್ತಾ ವಸೂಲಿ ದಂಧೆ ಬೆಳಕಿಗೆ ಬಂದಿದೆ. ಇವರೆಲ್ಲರ ಜತೆಗೆ ಎಐಎಡಿಎಂಕೆ ಸದಸ್ಯ 'ಬಾರ್' ನಾಗರಾಜ್ ಸಹ ಭಾಗಿ ಆಗಿರುವುದು ಪತ್ತೆ ಆಗಿದೆ.
ವಿಡಿಯೋ ಸೋರಿಕೆ ಮಾಡಬಹುದು ಎಂಬ ಭಯ
ಈ ಗುಂಪು ಹೇಗೆ ಯೋಜನೆ ರೂಪಿಸುತ್ತಿತ್ತು ಅಂದರೆ, ಕಾಲೇಜು ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಅಥವಾ ಗೃಹಿಣಿಯರೇ ಇವರ ಗುರಿಯಾಗುತ್ತಿದ್ದರು. ತಮ್ಮ ಸ್ನೇಹಿತರೋ ಅಥವಾ ಸಂಬಂಧಿಕರ ಮೂಲಕ ಪರಿಚಿತರಾಗಿದ್ದವರನ್ನೇ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದರು. ಈ ಆರೋಪಿಗಳಿಗೆ ಪೊಲ್ಲಾಚಿ ಬಗ್ಗೆ ಇಂಚಿಂಚೂ ತಿಳಿದಿದ್ದರಿಂದ ಬಲೆಗೆ ಬೀಳಿಸಿಕೊಳ್ಳುವುದು ಸಲೀಸಾಗಿರುತ್ತಿತ್ತು. ಆರೋಪಿಗಳಲ್ಲಿ ತಿರುನಾವುಕ್ಕರಸು ಎಂಬಿಎ ಮಾಡಿದ್ದಾನೆ. ಫೈನಾನ್ಸ್ ಸಂಸ್ಥೆ ನಡೆಸುತ್ತಾನೆ. ಸತೀಶನದು ಗಾರ್ಮೆಂಟ್ ಸ್ಟೋರ್ ಇದೆ. ಶಬರಿರಾಜನ್ ಎಂಜಿನಿಯರಿಂಗ್ ಮಾಡಿದ್ದಾನೆ. ಒಬ್ಬ ಮಹಿಳೆ ಹೇಳಿಕೆಯನ್ನು ಉದಾಹರಿಸಿರುವ ಪೊಲೀಸರು, ಆ ಮಹಿಳೆ ಬೆನ್ನು ಬಿದ್ದಿದ್ದ ಶಬರಿರಾಜನ್ ಆಕೆಯನ್ನು ಮದುವೆಯಾಗುವುದಾಗಿ ಹೇಳಿದ್ದನಂತೆ. ಆಕೆ ಒಪ್ಪಿಕೊಂಡ ನಂತರ ಫಾರ್ಮ್ ಹೌಸ್ ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ಅದನ್ನು ಉಳಿದ ಮೂವರು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತೆಯ ಸಂಬಂಧಿಕರು ಹೇಳಿದ್ದಾರೆ. ಎಲ್ಲಿ ವಿಡಿಯೋ ಸೋರಿಕೆ ಮಾಡುತ್ತಾರೋ ಎಂದು ಹೆದರಿ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಬಹುತೇಕ ಎಲ್ಲ ಸಂತ್ರಸ್ತೆಯರ ಸ್ಥಿತಿಯೂ ಇದೇ ಆಗಿದೆ.
ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?
ವಿಡಿಯೋ ಬಗ್ಗೆ ಯಾರೂ ದೂರು ನೀಡಿಲ್ಲ
ಇನ್ನು ಕೆಲವು ಪ್ರಕರಣಗಳಲ್ಲಿ ತಮಗೆ ಪರಿಚಯ ಇಲ್ಲದ ಮಹಿಳೆಯರಿಗೆ ಆಮಿಷವೊಡ್ಡಲು ನಕಲಿ ಐಡಿಗಳನ್ನು ಬಳಸಿದ್ದಾರೆ. ಅದೇ ರಿತಿ ಒಬ್ಬ ಮಹಿಳೆ ಜತೆ ಮಾತನಾಡಿ, ಭೇಟಿಗೆ ಜಾಗ ನಿಶ್ಚಿಯಿಸಿದ್ದಾರೆ. ಅ ಜಾಗವು ತಿರುನಾವುಕ್ಕರಸುಗೆ ಸೇರಿದ ಚಿನ್ನಪ್ಪಂಪಾಳ್ಯಂನ ಫಾರ್ಮ್ ಹೌಸ್ ಆಗಿತ್ತಂತೆ. ಆ ಜಾಗ ಪೊಲ್ಲಾಚಿಯಿಂದ ಇಪ್ಪತ್ತು ಕಿ.ಮೀ. ದೂರದಲ್ಲಿದೆ. ಒಬ್ಬನು ವಿವಾಹಕ್ಕೆ ಪ್ರಸ್ತಾವ ಇಟ್ಟು, ಅಲ್ಲಿಗೆ ಕರೆಸಿಕೊಂಡರೆ, ಉಳಿದವರು ಆತನ ಜತೆ ಸೇರಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಅದರ ವಿಡಿಯೋ ಮಾಡಿದ್ದಾರೆ. ಆ ನಂತರ ಹಣ ನೀಡುವುದಕ್ಕೆ ಹಾಗೂ ಮತ್ತೊಮ್ಮೆ ಲೈಂಗಿಕ ಸಂಪರ್ಕಕ್ಕೆ ಮಹಿಳೆಯನ್ನು ಒತ್ತಾಯಿಸಿದ್ದಾರೆ. ಯಾವುದೇ ಪ್ರಕರಣದಲ್ಲಿ ಎಫ್ ಐಆರ್ ದಾಖಲಾಗಿಲ್ಲ್. ಕಳೆದ ಫೆಬ್ರವರಿ ಹನ್ನೆರಡನೇ ತಾರೀಕಿನಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ ಕೂಡ ದೈಹಿಕ ಹಲ್ಲೆ, ಲೈಂಗಿಕ ಶೋಷಣೆ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸುವಾಗ ವಿಡಿಯೋ ಮಾಡಿಕೊಂಡ ಬಗ್ಗೆ ದೂರು ನೀಡಿಲ್ಲ. ಆದರೆ ಈ ನಾಲ್ವರು ಆರೋಪಿಗಳ ಬಗ್ಗೆ ಅಂಥ ನಾಲ್ಕು ವಿಡಿಯೋಗಳಿವೆ.
ಕರ್ನಾಟಕ ಸಂಸದರಿಗೆ ಅನುದಾನ ಸಿಕ್ಕಿದ್ದೆಷ್ಟು, ಅವರು ಕ್ಷೇತ್ರದಲ್ಲಿ ಖರ್ಚು ಮಾಡಿದ್ದೆಷ್ಟು, ಉಳಿಸಿಕೊಂಡಿದ್ದೆಷ್ಟು?
ಪೊಲ್ಲಾಚಿಯ ತುಂಬ ನಾನಾ ವದಂತಿ
ಯಾವಾಗ ಇಂಥ ಲೈಂಗಿಕ ಪ್ರಕರಣವೊಂದು ಬಯಲಿಗೆ ಬಂತೋ ಇಡೀ ಪೊಲ್ಲಾಚಿ ಗಾಬರಿ ಬಿದ್ದಿದೆ. ಇತರ ಮಹಿಳೆಯರು ಕೂಡ ಪೊಲೀಸರಿಗೆ ಕರೆ ಮಾಡಿ, ನಮ್ಮ ಮೇಲೂ ಇಂಥದ್ದೇ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ಹೇಳಿಕೊಳ್ಳುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಈ ರೀತಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ವಿಡಿಯೋಗಳು ನೂರರ ಹತ್ತಿರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ರೀತಿ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಗುಮಾನಿ ಬಂದಿದೆ. ಅರವತ್ತಕ್ಕೂ ಹೆಚ್ಚು ಸಂತ್ರಸ್ತೆಯರು ಈ ಜಾಲದಲ್ಲಿ ಸಿಲುಕಿಕೊಂಡಿರಬಹುದು ಎಂದು ಮಾಧ್ಯಮಗಳಲ್ಲಿ ದಿನಕ್ಕೊಂದು ಸುದ್ದಿ ಬರುತ್ತಿದೆ. ಆದರೆ ಇವೆಲ್ಲವನ್ನೂ ಪೊಲ್ಲಾಚಿಯ ಪೊಲೀರು ನಿರಾಕರಿಸಿದ್ದಾರೆ. "ನಮ್ಮ ತನಿಖೆ ಪ್ರಕಾರ ನಾಲ್ವರೇ ಇದರಲ್ಲಿ ಭಾಗಿ ಆಗಿದ್ದಾರೆ. ನಮಗೆ ನಾಲ್ಕು ವಿಡಿಯೋ ಮಾತ್ರ ಸಿಕ್ಕಿದೆ. ಅದು ನೂರರ ಸಂಖ್ಯೆಯಲ್ಲಿ ಅಲ್ಲ ಎಂದು ಕೊಯಮತ್ತೂರಿನ ಎಸ್ಪಿ ಆರ್.ಪಾಂಡಿರಾಜನ್ ತಿಳಿಸಿದ್ದಾರೆ.
ಕೇರಳದಲ್ಲಿ ಮತ್ತೆ ಬುಸುಗುಟ್ಟಿದ ರಾಜಕಾರಣಿಗಳ 'ಸೆಕ್ಸ್ ಸ್ಕ್ಯಾಂಡಲ್'
ತಮಿಳುನಾಡು ಗೃಹ ಇಲಾಖೆಯಿಂದ ಸಂತ್ರಸ್ತೆಯ ಗುರುತು ಬಹಿರಂಗ
ಮಾರ್ಚ್ ಹದಿಮೂರನೇ ತಾರೀಕಿನಂದು ತಮಿಳುನಾಡಿನ ಗೃಹ ಇಲಾಖೆಯು ಅಕ್ಷಮ್ಯವಾದ ತಪ್ಪೊಂದನ್ನು ಮಾಡಿದೆ. ಅದು ಹೊರಡಿಸಿದ ಆದೇಶದಲ್ಲಿ ಈ ಪ್ರಕರಣ ಹೊರಬರಲು ಕಾರಣಳಾದ ಯುವತಿಯ ನಿಜವಾದ ಹೆಸರು, ಕಾಲೇಜಿನ ಹೆಸರನ್ನು ಬಯಲು ಮಾಡಿದೆ. ಇದೀಗ ಆಕೆ ಯಾರನ್ನೂ ಭೇಟಿ ಮಾಡುತ್ತಿಲ್ಲ. ಅಸಲಿಗೆ ಮನೆ ಬಿಟ್ಟು ಹೊರಗೇ ಬರುತ್ತಿಲ್ಲ. "ದಯವಿಟ್ಟು ನಮ್ಮಷ್ಟಕ್ಕೆ ಬಿಟ್ಟುಬಿಡಿ" ಎಂದು ಆಕೆಯ ಸೋದರ ಮಾಧ್ಯಮಗಳಿಗೆ ಹೇಳುತ್ತಿದ್ದಾನೆ. ಒಟ್ಟಾರೆಯಾಗಿ ಪೊಲ್ಲಾಚಿಯ ಜನರು ಹಾಗೂ ಮಾಧ್ಯಮಗಳ ಗಮನ ಈ ಕುಟುಂಬದ ಮೇಲೆ ಬೀಳುವ ಮೂಲಕ ಅವರ ನೆಮ್ಮದಿಯೇ ಹಾಳಾದಂತೆ ಆಗಿದೆ. ಯಾವಾಗ ಆ ಯುವತಿಯ ಹೆಸರು ಬಹಿರಂಗ ಆಯಿತೋ ಆಗಿನಿಂದ ಇತರ ಸಂತ್ರಸ್ತೆಯರು ಎಫ್ ಐಆರ್ ದಾಖಲಿಸಲು ಧೈರ್ಯ ತೋರಿಸುತ್ತಿಲ್ಲ. ಇದೀಗ ಪ್ರಕರಣವನ್ನು ಸಿಬಿಸಿಐಡಿಗೆ ವಹಿಸಲಾಗಿದೆ. ಈ ಪ್ರಕರಣಕ್ಕೆ ರಾಜಕೀಯ ಬಣ್ಣವೂ ಸೇರಿಕೊಂಡಿದೆ. ಈಗಾಗಲೇ ಆರೋಪಿ ನಾಗರಾಜ್ ನನ್ನು ಎಐಎಡಿಎಂಕೆ ವಜಾ ಮಾಡಿದೆ. ಇದೀಗ ಪೊಲ್ಲಾಚಿಯೇ ಶಾಶ್ವತವಾಗಿ ಬದಲಾದಂತೆ ಕಾಣುತ್ತಿದೆ. ಭೂತವೊಂದು ಬಿಟ್ಟುಹೋದ ಆತ್ಮದಂತಾಗಿದೆ ಪೊಲ್ಲಾಚಿ ಎನ್ನುತ್ತಾರೆ ಸ್ಥಳೀಯರು. ಮುಂದೆ ಎಂದಾದರೂ ಒಂದು ದಿನ ನೊಂದ ಸಂತ್ರಸ್ತೆಯರು ದುಃಖ ಹೇಳಿಕೊಳ್ಳಲು ಮುಂದೆ ಬರಬಹುದು.