ರಾಜಕೀಯ ಜೀವನಕ್ಕಾಗಿ ಸಿನಿಮಾ ಬಿಡಲೂ ನಾನು ಸಿದ್ಧ; ಕಮಲ್ ಹಾಸನ್
ಕೊಯಮತ್ತೂರು, ಏಪ್ರಿಲ್ 5: ನನ್ನ ರಾಜಕೀಯ ಜೀವನಕ್ಕೆ ಅಡ್ಡಿಯಾಗುತ್ತದೆ ಎಂದಾದರೆ ನಾನು ಸಿನಿಮಾರಂಗ ಬಿಡಲೂ ಸಿದ್ಧನಾಗಿದ್ದೇನೆ ಎಂದು ನಟ ಹಾಗೂ ಮಕ್ಕಳನೀದಿ ಮಯ್ಯಂ ಮುಖಂಡ ಕಮಲ್ ಹಾಸನ್ ಹೇಳಿದ್ದಾರೆ.
"ನನ್ನ ರಾಜಕೀಯ ಜೀವನಕ್ಕೆ ಅಡ್ಡಿಯಾಗುತ್ತದೆ ಎಂದಾದರೆ ಸದ್ಯಕ್ಕಿರುವ ಎಲ್ಲಾ ಪ್ರಾಜೆಕ್ಟ್ಗಳನ್ನು ಮುಗಿಸಿ ಸಿನಿಮಾ ರಂಗವನ್ನು ಬಿಡುತ್ತೇನೆ" ಎಂದು ಘೋಷಿಸಿದ್ದಾರೆ.
"ಕಮಲ್ ಹಾಸನ್ 'ಸೂಪರ್ ನೋಟಾ'; ಒಂದೇ ಒಂದು ಸೀಟ್ ಕೂಡ ಗೆಲ್ಲಲ್ಲ"
ತಮ್ಮ ರಾಜಕೀಯ ಪ್ರವೇಶ ಐತಿಹಾಸಿಕ ಎಂದು ಹೇಳಿರುವ ಅವರು, ರಾಜಕೀಯದಿಂದ ದೂರ ಉಳಿಯಲು ಬಯಸುವ ಶೇ 30ರಷ್ಟು ಮಂದಿಯಲ್ಲಿ ನಾನೂ ಒಬ್ಬನಾಗಿದ್ದೆ. ಆದರೆ ಎಂಜಿಆರ್ ಅವರು ಸಿನಿಮಾಗಳಲ್ಲಿ ನಟಿಸುತ್ತಲೇ ತಮ್ಮ ಆದರ್ಶಗಳನ್ನು ಹಾಗೂ ಜನಸೇವೆ ಮಾಡುವ ಗುರಿಯನ್ನು ತಲುಪಿದರು. ಆ ಉದಾಹರಣೆ ನನ್ನ ಕಣ್ಣ ಮುಂದಿದೆ. ಆದರೆ ಸಿನಿಮಾ ನನ್ನ ರಾಜಕೀಯ ಗುರಿಗಳಿಗೆ ಅಡ್ಡಿಯಾದರೆ, ನನ್ನ ಜನರ ಸೇವೆ ಮಾಡಲು ಸಿನಿಮಾ ಬಿಟ್ಟುಬಿಡುತ್ತೇನೆ ಎಂದರು.
ನನ್ನ ಕೆಲವು ಸ್ನೇಹಿತರು, ನಾನು ರಾಜಕೀಯದಲ್ಲಿ ಕಣ್ಮರೆಯಾಗಿ ಸಿನಿಮಾದಲ್ಲಿ ಮತ್ತೆ ತೊಡಗಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಯಾರು ಕಣ್ಮರೆಯಾಗುತ್ತಾರೆ ನೋಡೋಣ, ಅದನ್ನು ಜನರೇ ನಿರ್ಧಾರ ಮಾಡಲಿ ಎಂದು ಸವಾಲು ಹಾಕಿದರು.
ಹಲವು ಕಡೆಗಳಿಂದ ತಮಗೆ ಬೆದರಿಕೆ ಬರುತ್ತಿದೆ. ಆದರೆ ಈ ಬಗ್ಗೆ ಹೆಚ್ಚು ಹೇಳುವುದಿಲ್ಲ ಎಂದ ಕಮಲ್ ಹಾಸನ್, ನನ್ನದು ಪ್ರಾಮಾಣಿಕ ಪಕ್ಷ. ಚುನಾವಣಾ ಸಮಾವೇಷಗಳಿಗೆ ಎಷ್ಟು ಹಣ ಖರ್ಚಾಗಿದೆ ಎನ್ನುವ ವರದಿಯನ್ನೂ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ 234 ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಿಗದಿಯಾಗಿದೆ. ರಾಜ್ಯದಲ್ಲಿ ಚುನಾವಣೆಗೆ ಭರದ ಸಿದ್ಧತೆ ಸಾಗಿದೆ.