ಮದ್ಯದಂಗಡಿಗಳನ್ನು ತೆರೆಯಲು ಅನುಮತಿ, ರಜನಿಕಾಂತ್ ಗರಂ
ಚೆನ್ನೈ, ಮೇ 10: ತಮಿಳುನಾಡಿನಲ್ಲಿ ಲಾಕ್ಡೌನ್ ಜಾರಿಯಲ್ಲಿರುವಾಗಲೇ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವ ಎಐಎಡಿಎಂಕೆ ಸರ್ಕಾರದ ವಿರುದ್ಧ ಸೂಪರ್ ಸ್ಟಾರ್ ರಜನಿಕಾಂತ್ ಕಿಡಿಕಾರಿದ್ದಾರೆ.
ಕರ್ನಾಟಕದ ಮಾದರಿಯಲ್ಲೇ ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳನ್ನು ತೆರೆಯಲು ಆಡಳಿತಾರೂಢ ಎಐಎಡಿಎಂಕೆ ಅನುಮತಿ ನೀಡಿದೆ. ಇದನ್ನು ವಿರೋಧಿಸಿರುವ ರಜನಿಕಾಂತ್, ಮುಂದಿನ ವರ್ಷದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುವುದು ಬೇಡ ಎಂದು ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಸರ್ಕಾರಕ್ಕೆ ಆದಾಯ ಬರಲು ಬೇರೆ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಮದ್ಯ ಮಾರಾಟಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಿತ್ತು. ಮೇ 4 ರಂದು ಈ ಬಗ್ಗೆ ನಿರ್ಧಾರ ಕೈಗೊಂಡ ತಮಿಳುನಾಡು ಸರ್ಕಾರವು, ಮದ್ಯ ಮಳಿಗೆಗಳನ್ನು ಮೇ 7ರಿಂದ ತೆರೆಯಲು ಸೂಚಿಸಿತ್ತು.
ಸಿಎಂ ಆಗುವ ಬಗ್ಗೆ ನಾನು ಎಂದೂ ಯೋಚಿಸಿಲ್ಲ: ರಜನಿ
ಆದರೆ, ಮದ್ಯದಂಗಡಿ ಓಪನ್ ಆಗುತ್ತಿದ್ದಂತೆ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರ ವಿಧಿಸಿದ್ದ ಸಾಮಾಜಿಕ ಅಂತರ ನಿಯಮಗಳು ಗಾಳಿಗೆ ತೂರಲಾಗಿದೆ. ಇದರ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ನಟ ಕಮ್ ರಾಜಕಾರಣಿ ಮಕ್ಕಳ್ ನೀಧಿ ಮೈಯಂ ಮುಖಂಡ ಕಮಲ್ ಹಾಸನ್ ಕೂಡಾ ಆರೋಪಿಸಿದ್ದಾರೆ.
ಸಾರ್ವಜನಿಕರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ, ಮತ್ತೆ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಮದ್ಯ ಮಳಿಗೆಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದು, ಆನ್ ಲೈನ್ ಮಾರಾಟ ಹಾಗೂ ಹೋಂ ಡೆಲಿವರಿ ಮೂಲಕ ಮದ್ಯ ಪೂರೈಕೆ ಮಾಡುವಂತೆ ಸೂಚಿಸಿದೆ. ಆದರೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ತಮಿಳುನಾಡು ಸರ್ಕಾರವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.