ಒಂದು ತಿಂಗಳ ಪೆರೋಲ್ ಮೇಲೆ ಹೊರ ಬಂದ ರಾಜೀವ್ ಗಾಂಧಿ ಹಂತಕಿ
ಚೆನ್ನೈ, ಜುಲೈ 25: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಆಜೀವ ಪರ್ಯಂತ ಜೈಲುಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಒಂದು ತಿಂಗಳ ಪೆರೋಲ್ ಮೇಲೆ ಹೊರಬಂದಿದ್ದಾಳೆ.
ನಳಿನಿ ಮಗಳು ಹರ್ಷಿತಾ ಅವರ ಮದುವೆ ಇರುವ ಕಾರಣ ಮದ್ರಾಸ್ ಹೈಕೋರ್ಟ್ 1 ತಿಂಗಳ ಪೆರೋಲ್ ನೀಡಿದೆ. ಬಿಡುಗಡೆ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು. ಇದೀಗ ಪೆರೋಲ್ ಮೂಲಕ ನಳಿನಿ ಹೊರ ಬಂದಿದ್ದಾರೆ.
ಇನ್ನು ಪೆರೋಲ್ ಮೇಲೆ ಹೊರಗಿರುವಷ್ಟು ದಿನಗಳ ಕಾಲ ನಳಿನಿ ಯಾವುದೇ ಸಂದರ್ಶನ ನೀಡುವಂತಿಲ್ಲ . ಹಾಗೂ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಬಾರದು ಅಂತಾನೂ ಕೋರ್ಟ್ ಸೂಚನೆ ನೀಡಿದೆ .
ವೆಲ್ಲೂರ್ ನ ಮಹಿಳೆಯರ ಜೈಲಿನಲ್ಲಿ ಕಳೆದ 27 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ , ತನ್ನ ಮಗಳ ಮದುವೆಯ ಕಾರ್ಯಕ್ಕೆ ಓಡಾಡಲು 6 ತಿಂಗಳ ರಜೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶ ಎಂ . ನಿರ್ಮಲ್ ಕುಮಾರ್ 1 ತಿಂಗಳ ಕಾಲ ಪೆರೋಲ್ ನೀಡಿದೆ .
1991 ರ ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರ್ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಎಲ್ಟಿಟಿಇ ಉಗ್ರರು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗಿದ್ದರು .
ಈ ಪ್ರಕರಣಕ್ಕೆ ಸಂಬಂಧಿಸಿ ನಳಿನಿ ಶ್ರೀಹರನ್ , ಆಕೆಯ ಪತಿ ಮುರುಗನ್ ಸೇರಿದಂತೆ ಒಟ್ಟು 6 ಮಂದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.