ಪೆರಿಯಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಲ್ಲ: ರಜನಿಕಾಂತ್
ಚೆನ್ನೈ, ಜನವರಿ 21: ತಮಿಳು ಸಿನಿಪ್ರಿಯರ ಆರಾಧ್ಯದೈವ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಇವಿ ರಾಮಸ್ವಾಮಿ (ಪೆರಿಯಾರ್) ಕುರಿತು ಇತ್ತೀಚೆಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ನಾಂದಿ ಹಾಡಿತ್ತು. ರಜನಿ ಕ್ಷಮೆಯಾಚಿಸಬೇಕು ಎಂದು ಡಿವಿಕೆ ಸೇರಿದಂತೆ ವಿವಿಧ ಪಕ್ಷ, ಸಂಘಟನೆಗಳು ಆಗ್ರಹಿಸಿದ ಘಟನೆ ನಡೆದಿತ್ತು. ಆದರೆ ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ರಜನಿಕಾಂತ್, ಈ ಕುರಿತಂತೆ ಯಾವುದೇ ರೀತಿ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಜನವರಿ 17ರಂದು ತಮಿಳು ಮ್ಯಾಗಜೀನ್ ''ತುಘಲಕ್" 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ರಜನಿಕಾಂತ್, 1971ರಲ್ಲಿ ಸೇಲಂನಲ್ಲಿ ಪೆರಿಯಾರ್ ಅವರು ಮೂಢನಂಬಿಕೆ ವಿರುದ್ಧ ನಡೆಸಿದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಶ್ರೀರಾಮಚಂದ್ರ ಮೂರ್ತಿ ಹಾಗೂ ಸೀತಾಮಾತೆಯ ನಗ್ನ ಚಿತ್ರಗಳನ್ನು ಪ್ರದರ್ಶಿಸಿ ಗಂಧದ ಹಾರ ಹಾಕಲಾಗಿತ್ತು. ಆದರೆ ಈ ಬಗ್ಗೆ ಯಾವ ಮಾಧ್ಯಮವೂ ಸುದ್ದಿ ಮಾಡಿರಲಿಲ್ಲ ಆದರೆ, ತುಘಲಕ್ ಮ್ಯಾಗಜೀನ್ ಸ್ಥಾಪಕ, ಸಂಪಾದಕ ಚೋ ರಾಮಸ್ವಾಮಿ ಅವರು ಮಾತ್ರ ಈ ಬಗ್ಗೆ ಸುದ್ದಿ ಮಾಡಿ, ಟೀಕಿಸಿದ್ದರು ಎಂದಿದ್ದರು.
ಅಂದಿನ ಡಿಎಂಕೆ ಸರ್ಕಾರ ಇದರಿಂದ ಮುಜುಗರ ಅನುಭವಿಸಿ, ಮ್ಯಾಗಜೀನ್ ಜಪ್ತಿ ಮಾಡಿತ್ತು. ಆದರೆ, ಛಲ ಬಿಡದ ಚೋ ರಾಮಸ್ವಾಮಿ ಮತ್ತೊಮ್ಮೆ ಲೇಖನವನ್ನು ಮರುಮುದ್ರಣ ಮಾಡಿದರು. ಮ್ಯಾಗಜೀನ್ ಬಿಸಿಬಿಸಿ ದೋಸೆಯಂತೆ ಮಾರಾಟವಾಗಿ ಸಂಚಲನ ಸೃಷ್ಟಿಸಿತ್ತು ಎಂದು ರಜನಿ ಹೇಳಿದ್ದರು.
ಆದರೆ, ರಜನಿ ಹೇಳಿಕೆಯನ್ನು ಖಂಡಿಸಿದ್ದ ದ್ರಾವಿಡರ್ ವಿಡುತಲೈ ಕಳಗಂ, ಕ್ಷಮೆಯಾಚನೆಗೆ ಆಗ್ರಹಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಜನಿ, ಪೆರಿಯಾರ್ ಬಗ್ಗೆ ನಾನು ಹೇಳಿದ್ದೆಲ್ಲ ಅಂದಿನ ಸುದ್ದಿ ಮಾಧ್ಯಮದ ವರದಿಯ ಆಧಾರದ ಮೇಲೆ ಮಾತ್ರ, ನಾನು ಓದಿದ್ದನ್ನು ಇಂದಿನ ಪೀಳಿಗೆ ಮುಂದಿಟ್ಟಿದ್ದೇನೆ. ಆ ಘಟನೆಯನ್ನು ಜನತೆ ಮರೆತಿರಬಹುದು ಆದರೆ, ತಳ್ಳಿಹಾಕುವಂತದ್ದಲ್ಲ ಎಂದು 69 ವರ್ಷ ವಯಸ್ಸಿನ ನಟ ತಿಳಿಸಿದರು.
ದ್ವೇಷಪೂರಿತ, ಅಶಾಂತಿ ಸೃಷ್ಟಿಸುವ ಭಾಷಣ ಮಾಡಿರುವ ರಜನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದ್ರಾವಿಡ ಕಳಗಂ ಎರಡು ದೂರು ದಾಖಲಿಸಿದೆ. ಕ್ಷಮೆಯಾಚಿಸದಿದ್ದರೆ ದರ್ಬಾರ್ ಸಿನಿಮಾ ಸ್ಥಗಿತಗೊಳಿಸಲಾಗುವುದು ಹಾಗೂ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.