ತಮಿಳುನಾಡಿನ ಜನರಿಗಾಗಿ ಜೀವ ಕೊಡಲೂ ಸಿದ್ಧ: ರಜನಿಕಾಂತ್
ಚೆನ್ನೈ, ಡಿಸೆಂಬರ್ 3: ಹಲವು ದಶಕಗಳ ಊಹಾಪೋಹಗಳಿಗೆ ಅಂತ್ಯ ಹಾಡಿರುವ ನಟ ರಜನಿಕಾಂತ್, ಕೊನೆಗೂ ತಮ್ಮ ರಾಜಕೀಯ ಪಕ್ಷ ಸ್ಥಾಪನೆಯನ್ನು ಖಚಿಪಡಿಸಿದ್ದಾರೆ. 2021ರ ಜನವರಿಯಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ, ಅದಕ್ಕೆ ಪೂರಕ ಪ್ರಕಟಣೆಯನ್ನು ಡಿ. 31ರಂದು ಹೊರಡಿಸುವುದಾಗಿ ತಿಳಿಸಿದ್ದಾರೆ.
'ತಮಿಳುನಾಡಿನಲ್ಲಿ ಬದಲಾವಣೆ ತರುವ ಸಲುವಾಗಿ ನಾನು ರಾಜಕೀಯಕ್ಕೆ ಬರಲು ನಿರ್ಧರಿಸಿದ್ದೇನೆ. ಈ ಯೋಜನೆಯಲ್ಲಿ ನಾನು ಸಣ್ಣ ಸಾಧನವಷ್ಟೇ. ನಾನು ಯಶಸ್ವಿಯಾದರೆ ಅದು ಜನರ ಯಶಸ್ಸಾಗಲಿದೆ. ನನ್ನ ಪ್ರಯತ್ನದಲ್ಲಿ ನಾನು ಸೋಲು ಕಂಡರೆ ಅದು ನಿಮ್ಮ ಸೋಲಾಗಲಿದೆ. ಈ ಪರಿವರ್ತನೆಯ ಪ್ರಯತ್ನದಲ್ಲಿ ನೀವು ನನ್ನ ಜತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ಎಲ್ಲವನ್ನೂ ಪರಿವರ್ತನೆ ಮಾಡೋಣ. ಅದು ಈಗ ಸಾಧ್ಯವಾಗದಿದ್ದರೆ, ಎಂದಿಗೂ ಸಾಧ್ಯವಾಗಲಾರದು' ಎಂದು ರಜನಿ ಹೇಳಿದ್ದಾರೆ.
ಜನವರಿಯಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ: ಪಕ್ಷ ಸ್ಥಾಪನೆ ಘೋಷಣೆ
ಪೊಯೆಸ್ ಗಾರ್ಡನ್ನ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜಿನಿ, ಪ್ರತಿಯೊಬ್ಬರಿಗೂ ಹಣೆಬರಹ ಎಂಬುದು ಇರುತ್ತದೆ. ಅದೇ ರೀತಿ ದೇಶಕ್ಕೂ ಹಣೆಬರಹ ಇರುತ್ತದೆ. ಹೀಗಾಗಿ ಈಗ ತಮಿಳುನಾಡಿನ ಹಣೆಬರಹವನ್ನು ಬದಲಿಸುವ ಸಮಯ. ಖಂಡಿತವಾಗಿಯೂ ತಮಿಳುನಾಡಿನ ರಕ್ಷಣೆ ಮತ್ತು ಅದರ ರಾಜಕೀಯ ಚಿತ್ರಣದಲ್ಲಿ ಬದಲಾವಣೆಯಾಗಲಿದೆ ಎಂದರು. ಮುಂದೆ ಓದಿ.
ಜನವರಿಯಲ್ಲಿ ಪಕ್ಷ ಸ್ಥಾಪನೆಗೆ ನೀವು ರೆಡಿನಾ?: ರಜನಿಕಾಂತ್ ಪ್ರಶ್ನೆ
ಬಿಜೆಪಿ ಮುಖಂಡನ ನೆರವು
ರಜನಿಕಾಂತ್ ಅವರು ಬಿಜೆಪಿ ಕಡೆಗೆ ವಾಲುತ್ತಿದ್ದು, ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಹರಡಿದ್ದವು. ಈಗ ರಜನಿಕಾಂತ್ ಅವರು ರಜನಿ ಮಕ್ಕಳ್ ಮಂಡ್ರಮ್ ಸಂಘಟನೆಯ ಮುಖ್ಯ ಸಂಯೋಜಕರನ್ನಾಗಿ ಬಿಜೆಪಿ ರಾಜ್ಯ ಬೌದ್ಧಿಕ ಘಟಕದ ಅಧ್ಯಕ್ಷರಾಗಿದ್ದ ರಾ. ಅರ್ಜುನ್ ಮೂರ್ತಿ ಅವರನ್ನು ನೇಮಿಸಿದ್ದಾರೆ. ತಮ್ಮ ರಾಜಕೀಯ ಪಕ್ಷದ ಸ್ಥಾಪನೆಯ ಪ್ರಯತ್ನಗಳನ್ನು ತಮಿಳರುವಿ ಮಣಿಯನ್ ಅವರು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ರಜನಿ ತಿಳಿಸಿದ್ದಾರೆ.
ವೈದ್ಯರ ಸಲಹೆ
2021ರ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಮತ್ತು 234 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ 2017ರಲ್ಲಿ ತಾವು ಹೇಳಿದ್ದನ್ನು ನೆನಪಿಸಿಕೊಂಡ ರಜನಿ, ತಮಿಳುನಾಡಿನ ಜನರಲ್ಲಿ ವಿಮೋಚನೆಯ ಆಕಾಂಕ್ಷೆಯನ್ನು ಮೂಡಿಸಲು ತಾವು ರಾಜ್ಯದಾದ್ಯಂತ ಪ್ರವಾಸ ಮಾಡಬೇಕಿತ್ತು. ಆದರೆ ಕೊರೊನಾ ಸೋಂಕಿನ ಕಾರಣದಿಂದ ವೈದ್ಯರು ಪ್ರವಾಸ ಮಾಡದಂತೆ ಮತ್ತು ಜನರನ್ನು ಭೇಟಿಯಾಗದಂತೆ ಸೂಚಿಸಿದ್ದರಿಂದ ಅದು ಸಾಧ್ಯವಾಗಿಲ್ಲ ಎಂದರು.
ಜೀವ ನೀಡಲು ಸಿದ್ಧ
'ಸಿಂಗಪುರದಲ್ಲಿ ಚಿಕಿತ್ಸೆ ಪಡೆದ ಬಳಿಕ ನಾನು ತಮಿಳುನಾಡಿನ ಜನತೆಯ ಪ್ರಾರ್ಥನೆಯಿಂದಾಗಿ ಮಾತ್ರವೇ ಗುಣಮುಖನಾದೆ. ಹೀಗಾಗಿ ಅವರ ಸಲುವಾಗಿ ನಾನು ಜೀವವನ್ನು ನೀಡಲು ಸಂತೋಷ ಪಡುತ್ತೇನೆ. ತಮಿಳುನಾಡಿನ ಜನತೆಗೆ ನೀಡಿದ ಮಾತಿನಿಂದ ನಾನು ಹಂದೆ ಸರಿಯುವುದಿಲ್ಲ. ಇದು ಸಮಯದ ಅಗತ್ಯ ಮತ್ತು ಅದು ಈಡೇರಲೇಬೇಕು. ಅದು ಈಗ ಸಾಧ್ಯವಾಗದೆ ಹೋದರೆ ಎಂದೆಂದಿಗೂ ಸಾಧ್ಯವಾಗುವುದಿಲ್ಲ. ಎಲ್ಲವನ್ನೂ ಪರಿವರ್ತನೆ ಮಾಡೋಣ' ಎಂದು ರಜನಿ ಹೇಳಿದರು.
|
ಅನ್ನಾತೆ ಬಳಿಕ ರಾಜಕೀಯ ಯಾನ
ತಾವೀಗ 'ಅನ್ನಾತೆ' ಚಿತ್ರದ ಚಿತ್ರೀಕರಣ ಮುಗಿಸಬೇಕಿದ್ದು, ಬಳಿಕ ತಮ್ಮ ರಾಜಕೀಯ ಪಯಣವನ್ನು ಆರಂಭಿಸುವುದಾಗಿ ತಿಳಿಸಿದರು. ರಜನಿಕಾಂತ್ ಅವರು ಮುಂದಿನ ವರ್ಷದ ಆರಂಭದಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ ಬಳಿಕ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಅವರ ನಿವಾಸದ ಹೊರಭಾಗದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.