ನಾನು ಅಪ್ಪಟ್ಟ ತಮಿಳಿಗ : ಸ್ವಾಮಿಗೆ ತಿರುಗೇಟು ಕೊಟ್ಟ ರಜನಿ
ರಜನಿಗೆ ರಾಜಕೀಯದಲ್ಲಿ ಸೋಲು ಖಚಿತ ಎಂದು ಗೇಲಿ ಮಾಡಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಪರ್ ಸ್ಟಾರ್ ರಜನಿ ಅವರು ಶುಕ್ರವಾರದಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಚೆನ್ನೈ, ಮೇ 19 :ರಜನಿಕಾಂತ್ ತಮಿಳು ಮೂಲದವನಲ್ಲ, ಬೆಂಗಳೂರು ಮೂಲದ ಮರಾಠಿಗ, ರಾಜಕೀಯವಾಗಿ ಯಾವುದೇ ಸಿದ್ಧಾಂತವನ್ನು ಪಾಲಿಸದ ಗೊಂದಲದ ಗೂಡಾಗಿರುವ ರಜನಿಗೆ ರಾಜಕೀಯದಲ್ಲಿ ಸೋಲು ಖಚಿತ ಎಂದು ಗೇಲಿ ಮಾಡಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಪರ್ ಸ್ಟಾರ್ ರಜನಿ ಅವರು ಶುಕ್ರವಾರದಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಕರ್ನಾಟಕದಲ್ಲಿ 23 ವರ್ಷಗಳ ಕಾಲ ಜೀವಿಸಿದ್ದೆ. ಈಗಲೂ ಅಲ್ಲಿನವರ ಜತೆ ಒಡನಾಟ ಹೊಂದಿದ್ದೇನೆ. ತಮಿಳುನಾಡಿನಲ್ಲಿ ಬದುಕು ಕಟ್ಟಿಕೊಂಡು ಜನಪ್ರೀತಿ ಗಳಿಸಿ 43 ವರ್ಷ ಜೀವಿಸಿದ್ದೇನೆ. ನಾನು ಅಪ್ಪಟ ತಮಿಳಿಗ ಎಂದು ಅಭಿಮಾನಗಳ ಮುಂದೆ ರಜನಿಕಾಂತ್ ಘೋಷಿಸಿದರು.
66 ವರ್ಷ ವಯಸ್ಸಿನ ರಜನಿಕಾಂತ್ ಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ. ಸರಿಯಾಗಿ ಯಾವುದೇ ಸಿದ್ಧಾಂತ ಪಾಲಿಸುತ್ತಿಲ್ಲ. ಮೇಲಾಗಿ ಆತ ಮೂಲ ತಮಿಳಿಗನಲ್ಲ, ಬೆಂಗಳೂರು ಮೂಲದ ಮರಾಠಿಗ, ದೇವರ ಇಚ್ಛೆ ಇದ್ದರೆ ರಾಜಕೀಯಕ್ಕೆ ಬರುವುದಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವ ರಜನಿ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ವಾಮಿ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಜನಿ, ದೇವ ಇಚ್ಛೆ ಇದ್ದರೆ ಎಲ್ಲವೂ ನಡೆಯುತ್ತದೆ ಎಂದು ತಮ್ಮ ರಾಜಕೀಯ ಎಂಟ್ರಿ ಅರ್ಜಿಯನ್ನು ದೇವರ ಬಳಿಗೆ ಕಳಿಸಿದ್ದಾರೆ. ರಜನಿ ಅವರ ಆಪ್ತ ವಲಯದ ರಾಜ್ ಬಹದ್ದೂರ್, ನಟ ಶತ್ರುಘ್ನ ಸಿನ್ಹಾ ಕೂಡಾ ರಜನಿ ಅವರು ರಾಜಕೀಯಕ್ಕೆ ಬಂದರೆ ಒಳ್ಳೆಯದು ಎಂದಿದ್ದಾರೆ. ರಜನಿ ಮುಂದಿನ ನಡೆ ಹೇಗೋ ಏನೋ ಕಾದುನೋಡೋಣ.