ಜನವರಿಯಲ್ಲಿ ಪಕ್ಷ ಸ್ಥಾಪನೆಗೆ ನೀವು ರೆಡಿನಾ?: ರಜನಿಕಾಂತ್ ಪ್ರಶ್ನೆ
ಚೆನ್ನೈ, ನವೆಂಬರ್ 30: ಖ್ಯಾತ ನಟ, ತಲೈವಾ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ತಳಹದಿ ಸಿದ್ಧವಾದ ಸೂಚನೆ ದೊರೆತಿದೆ. ಜನವರಿಯಲ್ಲಿ ರಾಜಕೀಯ ಪಕ್ಷ ಪ್ರಾರಂಭಿಸಲು ಸಿದ್ಧರಾಗಿದ್ದೀರಾ ಎಂದು ರಜನಿಕಾಂತ್ ತಮ್ಮ ಕಚೇರಿಯ ಪದಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ರಜನಿಕಾಂತ್ ಅವರ ಬೆಂಬಲಿಗರು 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಬಳಿಕ ರಜನಿಕಾಂತ್ ಈ ಪ್ರಶ್ನೆ ಮುಂದಿಟ್ಟಿದ್ದಾರೆ.
ಆರೋಗ್ಯದ ಕಾರಣದಿಂದ ರಾಜಕೀಯ ಪ್ರವೇಶಿಸದೆ ಇರುವುದು ಒಳಿತು ಎಂಬ ವೈದ್ಯರ ಸಲಹೆಗಳಿಗೆ ವಿರುದ್ಧವಾಗಿ ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶದ ಸಂಬಂಧ ಸೋಮವಾರ ಕಚೇರಿ ಪದಾಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದರು. ರಜನಿ ಮಕ್ಕಳ್ ಮಂಡ್ರಮ್ನ ಜಿಲ್ಲಾ ಕಾರ್ಯದರ್ಶಿಗಳ ಜತೆಗೆ ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಡಪಮ್ನಲ್ಲಿ ಈ ಸಭೆ ನಡೆಯಿತು.
ಸಕ್ರಿಯ ರಾಜಕೀಯಕ್ಕೆ ರಜನಿ ಎಂಟ್ರಿ ಬಗ್ಗೆ ನಿರ್ಧಾರ ನಾಳೆ ಪ್ರಕಟ?
2021ರ ತಮಿಳುನಾಡು ಚುನಾವಣೆಗೂ ಮುನ್ನ ರಾಜಕೀಯ ಪಕ್ಷವನ್ನು ಸ್ಥಾಪಿಸಲು ನೆರವಾಗುವಂತೆ ಅಗತ್ಯ ಸಿದ್ಧತೆಗಳನ್ನು ನಡೆಸಲು ರಜನಿಕಾಂತ್ ಅವರು ಮಕ್ಕಳ್ ಮಂಡ್ರಮ್ಅನ್ನು ರಚಿಸಿದ್ದರು. ಮಂಡ್ರಮ್ನ ಪದಾಧಿಕಾರಿಗಳು ರಜನಿಕಾಂತ್ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದರು. ಆದರೆ ಈ ಸಂಬಂಧ ತಾವು ನಿರ್ಧಾರ ಪ್ರಕಟಿಸುವವರೆಗೂ ತಾಳ್ಮೆಯಿಂದ ಕಾಯುವಂತೆ ರಜನಿ ಸೂಚಿಸಿದ್ದಾರೆ. ಮುಂದೆ ಓದಿ.
ಜಿಲ್ಲಾ ಮುಖ್ಯಸ್ಥರ ಬಗ್ಗೆ ಅತೃಪ್ತಿ
ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದೋ ಅಥವಾ ಬೇರೊಂದು ರಾಜಕೀಯ ಪಕ್ಷದೊಂದಿಗೆ ರಾಜಕೀಯ ಪ್ರವೇಶ ಮಾಡುವುದೋ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. 'ಕೆಲವು ಜಿಲ್ಲಾ ಮುಖ್ಯಸ್ಥರು ತೃಪ್ತಿಕರವಾಗಿ ಕೆಲಸ ಮಾಡುತ್ತಿಲ್ಲ. ನೀವು ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಿದರೆ ನಾವು ಮುಂದಿನ ಹಂತಕ್ಕೆ ಹೋಗಬಹುದು. ಬಳಿಕ ನಾನು ಪಕ್ಷ ಆರಂಭಿಸಬಹುದೇ ಎಂಬುದನ್ನು ನಿರ್ಧರಿಸುತ್ತೇನೆ' ಎಂದು ರಜನಿ ಹೇಳಿದರು.
ನೀವು ಸಿದ್ಧರಿದ್ದೀರಾ?
ತಾವು ಈಗ ರಾಜಕೀಯ ಪ್ರವೇಶಿಸಿದರೆ ಜನರ ಪ್ರತಿಕ್ರಿಯೆ ಹೇಗಿರಬಹುದು? ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಜನರ ಭಾವನೆಗಳೇನಿದೆ? ಎಂದು ಅವರು ಜಿಲ್ಲಾ ಮುಖ್ಯಸ್ಥರನ್ನು ಪ್ರಶ್ನಿಸಿದರು. 'ನಾವು ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸಬಹುದೇ? ನೀವು ಸಿದ್ಧರಿದ್ದೀರಾ? ಎಂದು ಪ್ರಶ್ನಿಸಿದರು.
ರಾಜಕೀಯಕ್ಕೆ ಇಳಿಯುವ ಮೊದಲೇ ಅದರಿಂದ ದೂರ ಸರಿಯುತ್ತಾರಾ ರಜನಿಕಾಂತ್?
ಶೀಘ್ರವೇ ನಿರ್ಧಾರ ಪ್ರಕಟ
'ನನ್ನ ತಂಡದ ಸದಸ್ಯರ ಜತೆಗೆ ಉತ್ತಮ ಚರ್ಚೆ ನಡೆಯಿತು. ಅವರು ನನಗೆ ತಮ್ಮ ಅಭಿಪ್ರಾಯ, ಉದ್ದೇಶಗಳನ್ನು ತಿಳಿಸಿದ್ದಾರೆ. ಮತ್ತು ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಆದಷ್ಟು ಶೀಘ್ರದಲ್ಲಿಯೇ ನಾನು ನನ್ನ ನಿರ್ಧಾರವನ್ನು ಪ್ರಕಟಿಸಲಿದ್ದೇನೆ' ಎಂದು ಸಭೆಯ ಬಳಿಕ ರಜನಿಕಾಂತ್ ತಿಳಿಸಿದರು.
ತಮಿಳುನಾಡಲ್ಲಿ ರಾಜಕೀಯ ಸಂಚಲನ
ರಜನಿಕಾಂತ್ ಅವರ ರಾಜಕೀಯ ಪ್ರವೇಶವು ಕೋವಿಡ್ 19ರ ಕಾರಣದಿಂದ ಅನುಮಾನವಾಗಿತ್ತು. ರಜನಿಕಾಂತ್ ಅವರು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಚಟುವಟಿಕೆಗಳಿಂದ ದೂರ ಇರುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಅವರು ರಾಜಕೀಯದಿಂದ ಹಿಂದೆ ಸರಿಯಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಅವರು ತಮ್ಮ ನಿಷ್ಠರೊಂದಿಗೆ ಸಭೆ ನಡೆಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.