ಹೊಸ ರಾಜಕೀಯ ಪಕ್ಷ ಘೋಷಿಸಲಿರುವ ರಜನಿಕಾಂತ್
ಚೆನ್ನೈ, ಮಾರ್ಚ್ 12: ಸತತ 6 ದಿನಗಳ ಸಭೆ ನಂತರ ಹೊಸ ಪಕ್ಷ ಘೋಷಿಸಲು ನಟ ರಜನಿಕಾಂತ್ ಮುಂದಾಗಿದ್ದಾರೆ. ರಜನಿ ಮಕ್ಕಳ್ ಮಂಡ್ರಂ(ಆರ್ ಎಂಎಂ) ಸದಸ್ಯರ ಜೊತೆ ಸತತ ಸಭೆ, ಚರ್ಚೆ ಬಳಿಕ ಮಹತ್ವದ ನಿರ್ಧಾರ ಘೋಷಿಸಲಿದ್ದು, ಮಾರ್ಚ್ 12ರಂದು ಸುದ್ದಿಗೋಷ್ಠಿ ನಡೆಯಲಿದೆ.
ಚೆನ್ನೈಮ ಲೀಲಾ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಹೊಸ ಪಕ್ಷದ ಬಗ್ಗೆ ರಜನಿಕಾಂತ್ ತಿಳಿಸಲಿದ್ದಾರೆ.ಸಿನಿಮಾ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಸೂಪರ್ ಸ್ಟಾರ್ ಬಿರುದಾಂಕಿತ ರಜನಿಕಾಂತ್ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು ನೆನಪಿರಬಹುದು.
ಪ್ರಧಾನಿ ಮೋದಿ ಹಾಗೂ ಅವರ ಅನೇಕ ಯೋಜನೆಗಳನ್ನು ಆಗಾಗ ಹೊಗಳುವ ರಜನಿ ಮುಂದಿನ ನಡೆ ಏನು ಎಂಬುದು ಭಾರಿ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ. ತಮಿಳುನಾಡಿನಲ್ಲಿ 2021ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
2021ರಲ್ಲಿ ತಮಿಳುನಾಡಿನ ಜನರೆ ರಾಜಕೀಯವಾಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದಾರೆ ಎಂದು ರಜನಿ ಕಾಂತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಶಿವಾಜಿರಾವ್ ಗಾಯಕ್ವಾಡ್ ಅಲಿಯಾಸ್ ರಜನಿ ಅವರು ಈಗಾಗಲೇ ರಜಿನಿ ಮಕ್ಕಳ್ ಮಂಡ್ರಂ ಹೆಸರಿನ ರಾಜಕೀಯ ಸಂಘಟನೆ ಸ್ಥಾಪಿಸಿದ್ದಾರೆ. ಆದರೆ, ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಏಪ್ರಿಲ್ 14ರಂದು ಅಥವಾ ಅಷ್ಟರೊಳಗೆ ಘೋಷಿಸಲಾಗುತ್ತದೆ. ಪಕ್ಷದ ಹೆಸರು, ಧ್ಯೇಯೋದ್ದೇಶ, ಲಾಂಛನ ಇನ್ನಿತರ ವಿವರಗಳು ಇನ್ನು ಲಭ್ಯವಾಗಿಲ್ಲ.
2021ರ ಚುನಾವಣೆಯಲ್ಲಿ ಜನರಿಂದ ಪವಾಡ ಸೃಷ್ಟಿ: ರಜನಿಕಾಂತ್
ತಮಿಳ್ ಅರುವಿ ಮಣಿಯನ್ ಅವರು ರಾಜಕೀಯ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಪಕ್ಷದ ರೂಪುರೇಷೆ, ಉದ್ದೇಶ, ಚುನಾವಣೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಣಿಯನ್ ತಂತ್ರಗಾರಿಕೆ ರೂಪಿಸಲಿದ್ದಾರೆ. ರಜನಿ ಪಕ್ಷಕ್ಕೆ ಪಿಎಂಕೆ ಹಾಗೂ ಬಿಜೆಪಿ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆಯಿದೆ.
"ತಮಿಳುನಾಡು ಅಭಿವೃದ್ಧಿಗೆ ಅಗತ್ಯವಿದೆ ಎಂದಾದರೆ ನಾನು ಮತ್ತು ರಜನಿಕಾಂತ್ ಇಬ್ಬರೂ ಒಟ್ಟಾಗಿ ಪ್ರಯಾಣ ಮಾಡುತ್ತೇವೆ. ಮೊದಲು ಕೆಲಸ ಮುಖ್ಯ, ನಂತರ ಸಿದ್ಧಾಂತದ ಬಗ್ಗೆ ಮಾತು. ನಾವು ಕಳೆದ 43 ವರ್ಷಗಳಿಂದಲೂ ಒಂದಾಗಿಯೇ ಇದ್ದೇವೆ. ಈಗ ಇಬ್ಬರೂ ಒಟ್ಟಿಗೇ ಪ್ರಯಾಣ ಮಾಡುವುದರಲ್ಲಿ ಪವಾಡವೇನಿಲ್ಲ" ಎಂದು ಕಮಲ್ ಹಾಸನ್ ಹೇಳಿದ್ದರು.
ತಮಿಳು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ಗಳು ಈಗ ರಾಜಕೀಯ ರಂಗದಲ್ಲೂ ಒಟ್ಟಿಗೆ ಕೈಜೋಡಿಸಿ ತಮಿಳುನಾಡಿನ ಏಳಿಗೆಗಾಗಿ ಶ್ರಮಿಸಲಿದ್ದಾರೆ ಎಂಬ ಸುದ್ದಿಯಿದೆ.