'ರಾಜಕೀಯಕ್ಕೆ ಎಂದಿಗೂ ಬರುವುದೇ ಇಲ್ಲ ಎಂದು ರಜನಿಕಾಂತ್ ಹೇಳಿಲ್ಲ'
ಚೆನ್ನೈ, ಫೆಬ್ರವರಿ 4: ನಟ ರಜನಿಕಾಂತ್ ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿಯೇ ಇಲ್ಲ. ಪ್ರಸ್ತುತ ಚುನಾವಣಾ ಕಣಕ್ಕೆ ಧುಮುಕುವುದಿಲ್ಲ ಎಂದಿದ್ದಾರಷ್ಟೇ. ರಜನಿಕಾಂತ್ ತಮ್ಮ ರಜನಿ ಮಕ್ಕಳ್ ಮಂಡ್ರಮ್ (ಆರ್ಎಂಎಂ) ಸಂಘಟನೆಯನ್ನು ವಿಸರ್ಜಿಸಿಯೂ ಇಲ್ಲ ಎಂದು ಅವರ ಆಪ್ತ ಮತ್ತು ಗಾಂಧಿಯಾ ಮಕ್ಕಳ್ ಇಯಕ್ಕಂ ಸಂಸ್ಥಾಪಕ ತಮಿಳರುವಿ ಮಣಿಯನ್ ಹೇಳಿದ್ದಾರೆ.
'ನಾಳೆ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುವುದಾಗಿ ಹೇಳಿದರೆ, ಗಾಂಧಿಯಾ ಮಕ್ಕಳ್ ಇಯಕ್ಕಂ ಅವರೊಂದಿಗೆ ತಾನಾಗಿಯೇ ಅವರ ಪಯಣದಲ್ಲಿ ಸೇರಿಕೊಳ್ಳಲಿದೆ. ಒಂದು ವೇಳೆ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸದೆ ಇದ್ದರೂ ಅದು ಸಹೋದರಿ ಸಂಸ್ಥೆಯಾಗಿ ಕೆಲವು ಮುಂದುವರಿಸಲಿದೆ' ಎಂದು ಮಣಿಯನ್ ತಿಳಿಸಿದ್ದಾರೆ.
ಮತ್ತೆ ಮತ್ತೆ ನೋವು ಕೊಡಬೇಡಿ: ಅಭಿಮಾನಿಗಳಿಗೆ ರಜನಿಕಾಂತ್ ಮನವಿ
ಮಣಿಯನ್ ಅವರು ಕಳೆದ ಡಿಸೆಂಬರ್ 30ರಂದು, ತಾವು ರಾಜಕೀಯವನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ ಮತ್ತು ಸತ್ತರೂ ರಾಜಕೀಯದ ಕಡೆಗೆ ತಲೆಹಾಕುವುದಿಲ್ಲ ಎಂದು ಹೇಳಿದ್ದರು. ಅದರ ಬಳಿಕ ಇದೇ ಮೊದಲ ಬಾರಿ ಅವರು ರಾಜಕೀಯದ ಕುರಿತು ಮಾತನಾಡಿದ್ದಾರೆ.
'ರಾಜಕೀಯ ಶಕ್ತಿಗಳು ಆರ್ಎಂಎಂ ಪದಾಧಿಕಾರಿಗಳನ್ನು ಚೆಲ್ಲಾಪಿಲ್ಲಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಕೆಲವು ಬೇರೆ ಪಕ್ಷಗಳನ್ನು ಸೇರಿದ್ದರೆ, ಇನ್ನು ಕೆಲವರು ವಲಸೆ ಹಕ್ಕಿಗಳಂತೆ ಪಕ್ಷಿಧಾಮಗಳನ್ನು ಹುಡುಕುತ್ತಿದ್ದಾರೆ. ನಾನು ಕದಡಿದ ನೀರಿನಲ್ಲಿ ಮೀನು ಹಿಡಿಯಲು ಪ್ರಯತ್ನಿಸುವುದಿಲ್ಲ. ಪಕ್ಷದ ಪ್ರಧಾನ ಸಮಿತಿಯು ಮಾರ್ಚ್ 7ರಂದು ಸಭೆ ಸೇರಲಿದೆ' ಎಂದು ತಿಳಿಸಿದ್ದಾರೆ.