ಹಾಜಿ ಮಸ್ತಾನ್ ಕುರಿತು ಚಿತ್ರ : ರಜನಿಗೇ ಬೆದರಿಕೆ ಪತ್ರ
ಹಾಜಿ ಮಸ್ತಾನ್ ಒಬ್ಬ ಯಶಸ್ವಿ ವ್ಯಾಪಾರಿ, ಭಾರತೀಯ ಅಲ್ಪಸಂಖ್ಯಾತ ಸುರಕ್ಷಾ ಮಹಾಸಂಘದ ಸಂಸ್ಥಾಪಕ. ಇಂಥವರನ್ನು ಭೂಗತದೊರೆ ಅಂತ ಕರೆದರೆ ಮಾನಹಾನಿ ಮಾಡಿದಂತಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾನೆ ಮಸ್ತಾನ್ ದತ್ತುಮಗ.
ಚೆನ್ನೈ, ಮೇ 13 : ತೆರೆಯ ಮೇಲೆ ಕೇವಲ ಒಂದೇ ಒಂದು ಚಿಟಿಕೆ ಹೊಡೆಯುವ ಮೂಲಕ ಶತ್ರುಗಳ ದಮನ ಮಾಡುವ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಭೂಗತ ದೊರೆಯಿಂದ ಬೆದರಿಕೆ ಪತ್ರ ಬಂದಿದೆ.
"ಹಾಜಿ ಮಸ್ತಾನ್ ಅವರನ್ನು ಸ್ಮಗ್ಲರ್, ಭೂಗತ ದೊರೆ ಎಂದು ಚಿತ್ರೀಕರಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ. ಈ ಸಿನೆಮಾ ಮಾಡುವ ಮುನ್ನ ಹಾಜಿ ಮಸ್ತಾನ್ ಜೀವನದ ಬಗ್ಗೆ ಚರ್ಚೆ ಮಾಡಿ. ನನಗೂ ಅವರ ಬಯೋಪಿಕ್ ಮಾಡಲು ಆಸಕ್ತಿಯಿದೆ" ಎಂಬ ಬೆದರಿಕೆಯ ಪತ್ರ ರಜನಿಕಾಂತ್ ಅವರಿಗೆ ರವಾನಿಸಲಾಗಿದೆ.
ಹಾಜಿ ಮಸ್ತಾನ್ ಅವರನ್ನು ಯಾವುದೇ ಕಾರಣಕ್ಕೂ ಸ್ಮಗ್ಲರ್ ಎಂದು ಬಿಂಬಿಸಬಾರದು. ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹಾಜಿ ಮಸ್ತಾನ್ ಅವರ ದತ್ತು ಪುತ್ರ ಎಂದು ತನ್ನನ್ನು ಕರೆದುಕೊಳ್ಳುವ ಸುಂದರ್ ಶೇಖರ್ ಅತ್ಯಂತ ಸ್ಪಷ್ಟವಾಗಿ ಪತ್ರ ಬರೆದಿದ್ದಾನೆ. [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]
ರಜನಿಕಾಂತ್ ಹೊಸ ಸಿನೆಮಾ ಮಾಡುತ್ತಿದ್ದು, ಅದರಲ್ಲಿ ಅವರು ಒಂದಾನೊಂದು ಕಾಲದ ಭೂಗತ ದೊರೆ ಹಾಜಿ ಮಸ್ತಾನ್ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ರಾಷ್ಟ್ರಪತಿ ಹುದ್ದೆಗೆ ರಜನಿ ಅವರ ಹೆಸರೂ ಕೇಳಿಬಂದಿತ್ತು. [ಸುದ್ದಿಸ್ವಾರಸ್ಯ : ರಜನಿ ಭಾರತದ ಮುಂದಿನ ರಾಷ್ಟ್ರಪತಿ?]
ಹಾಜಿ ಮಸ್ತಾನ್ ಒಬ್ಬ ಯಶಸ್ವಿ ವ್ಯಾಪಾರಿ, ಭಾರತೀಯ ಅಲ್ಪಸಂಖ್ಯಾತ ಸುರಕ್ಷಾ ಮಹಾಸಂಘದ ಸಂಸ್ಥಾಪಕ. ಇಂಥವರನ್ನು ಭೂಗತದೊರೆ ಅಂತ ಕರೆದರೆ ಮಾನಹಾನಿ ಮಾಡಿದಂತಾಗುತ್ತದೆ. ಅವರನ್ನು ಭೂಗತ ಚಟುವಟಿಕೆಗಾಗಿ ಯಾವುದೇ ಕೋರ್ಟ್ ಶಿಕ್ಷೆ ನೀಡಿಲ್ಲ ಎಂದು ಸುಂದರ್ ಶೇಖರ್ ಬರೆದಿದ್ದಾನೆ.