Breaking News: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಎಂಟ್ರಿ ಇಲ್ಲ
ಚೆನ್ನೈ, ಡಿ. 29: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಮಂಗಳವಾರ(ಡಿ. 29) ಉತ್ತರ ಸಿಕ್ಕಿದೆ. ರಜನಿಕಾಂತ್ ಅವರು ಸುದೀರ್ಘ ಪತ್ರದ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ಈ ಮೂಲಕ 70 ವರ್ಷ ವಯಸ್ಸಿನ ನಟ ರಜನಿಕಾಂತ್ ಅವರು ಸಕ್ರಿಯ ರಾಜಕೀಯ ಪ್ರವೇಶಕ್ಕೆ ಮುನ್ನ ದೊಡ್ಡ ಬಾಂಬ್ ಹಾಕಿದ್ದಾರೆ. ಆರೋಗ್ಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ರಜನಿಕಾಂತ್ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ರಜನಿಕಾಂತ್ ಪಕ್ಷದ ಚಿಹ್ನೆ, ಹೆಸರು ಇದೇ ಇರಬಹುದೇ?
ಅಣ್ಣಾತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ಅವರಲ್ಲಿ ರಕ್ತದೊತ್ತಡದ ಏರಿಳಿತ ಮತ್ತು ಬಳಲಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಂದು ಹೈದರಾಬಾರಿನ ಜ್ಯುಬಿಲಿಹಿಲ್ಸ್ ನಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ(ಡಿ. 28) ದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.
'ತಮಿಳುನಾಡಿನಲ್ಲಿ ಬದಲಾವಣೆ ತರುವ ಸಲುವಾಗಿ ನಾನು ರಾಜಕೀಯಕ್ಕೆ ಬರಲು ನಿರ್ಧರಿಸಿದ್ದೇನೆ. ಈ ಯೋಜನೆಯಲ್ಲಿ ನಾನು ಸಣ್ಣ ಸಾಧನವಷ್ಟೇ. ನಾನು ಯಶಸ್ವಿಯಾದರೆ ಅದು ಜನರ ಯಶಸ್ಸಾಗಲಿದೆ. ನನ್ನ ಪ್ರಯತ್ನದಲ್ಲಿ ನಾನು ಸೋಲು ಕಂಡರೆ ಅದು ನಿಮ್ಮ ಸೋಲಾಗಲಿದೆ. ಈ ಪರಿವರ್ತನೆಯ ಪ್ರಯತ್ನದಲ್ಲಿ ನೀವು ನನ್ನ ಜತೆ ನಿಲ್ಲುವಂತೆ ಮನವಿ ಮಾಡುತ್ತೇನೆ. ಎಲ್ಲವನ್ನೂ ಪರಿವರ್ತನೆ ಮಾಡೋಣ. ಅದು ಈಗ ಸಾಧ್ಯವಾಗದಿದ್ದರೆ, ಎಂದಿಗೂ ಸಾಧ್ಯವಾಗಲಾರದು' ಎಂದು ರಜನಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.