ಜನವರಿಯಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ: ಪಕ್ಷ ಸ್ಥಾಪನೆ ಘೋಷಣೆ
ಚೆನ್ನೈ, ಡಿಸೆಂಬರ್ 3: ಸುದೀರ್ಘ ಕಾಲದಿಂದ ನಿರೀಕ್ಷೆ ಮೂಡಿಸಿರುವ ರಾಜಕೀಯ ಪಕ್ಷದ ಸ್ಥಾಪನೆಯನ್ನು ಜನವರಿಯಲ್ಲಿ ಮಾಡುವುದಾಗಿ ನಟ ರಜನಿಕಾಂತ್ ಘೋಷಿಸಿದ್ದಾರೆ. ಈ ಮೂಲಕ ಅನೇಕ ವರ್ಷಗಳ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಬಹು ನಿರೀಕ್ಷಿತ ರಾಜಕೀಯ ಪಕ್ಷದ ಘೋಷಣೆಯನ್ನು ಡಿ. 31ರಂದು ಮಾಡುವುದಾಗಿ ಅವರು ಗುರುವಾರ ತಿಳಿಸಿದ್ದಾರೆ.
Recommended Video
ರಜನಿ ಮಕ್ಕಳ ಮಂಡ್ರಮ್ ವೇದಿಕೆಯ ಪದಾಧಿಕಾರಿಗಳ ಜತೆಗೆ ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿದ್ದ ರಜನಿಕಾಂತ್ ಅವರು ಜನವರಿಯಲ್ಲಿ ಪಕ್ಷ ಘೋಷಣೆ ಮಾಡಿದರೆ ನೀವು ಸಿದ್ಧರಿರುತ್ತೀರಾ ಎಂದು ಪ್ರಶ್ನಿಸಿದ್ದರು. ಬಳಿಕ ಶೀಘ್ರದಲ್ಲಿಯೇ ಪಕ್ಷ ಸ್ಥಾಪನೆ ಕುರಿತಾದ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದರು.
ಈಗ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ. 'ಅಧ್ಯಾತ್ಮಿಕ ರಾಜಕೀಯದೊಂದಿಗೆ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ, ಪಾರದರ್ಶಕ ಮತ್ತು ಜಾತ್ಯತೀತ ಪಕ್ಷವನ್ನು ಸ್ಥಾಪಿಸುತ್ತಿದ್ದು, ಇದು ಮುಂದಿನ ಚುನಾವಣೆಯಲ್ಲಿ ಖಂಡಿತವಾಗಿಯೂ ಜಯಗಳಿಸಲಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಧ್ಯಾತ್ಮಿಕ ರಾಜಕೀಯ ಎಂದರೆ ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಎಂದು ಅವರು ಈ ಹಿಂದೆ ವಿವರಿಸಿದ್ದರು.ಆದರೆ, ರಜನಿಕಾಂತ್ ಅವರು ತಾವು 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅವರು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಪಕ್ಷ ಸ್ಥಾಪನೆಯ ಬಳಿಕ ಅವರು ಈ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.
2020ರ ಮಾರ್ಚ್ನಲ್ಲಿ ಹೇಳಿಕೆ ನೀಡಿದ್ದ ರಜನಿಕಾಂತ್ ಅವರು, ತಾವು ಮುಖ್ಯಮಂತ್ರಿ ಅಭ್ಯರ್ಥಿಯೂ ಅಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ ಎಂದು ಹೇಳಿಕೆ ನೀಡಿದ್ದರು. ಇದು ನಿಜವಾದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸಿರುವ ಅಭಿಮಾನಿಗಳಿಗೆ ನಿರಾಶೆಯಾಗಲಿದೆ. ಅಲ್ಲದೆ, ಅವರು ಪಕ್ಷ ಸ್ಥಾಪಿಸಿ ಚುನಾವಣಾ ರಾಜಕೀಯಕ್ಕೆ ಇಳಿಯದೆ ಇರುವುದು ಪಕ್ಷಕ್ಕೆ ಅಷ್ಟೇನೂ ಬಲ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಆರ್ಎಂಎಂ ಸಂಘಟನೆಯ ಮುಖಂಡರು ರಜನಿಕಾಂತ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೂ ಮುನ್ನ ರಜನಿಕಾಂತ್ ಅವರಿಗೆ ವೈದ್ಯರು ಬರೆದಿದ್ದರೆನ್ನಲಾದ ಪತ್ರ ವೈರಲ್ ಆಗಿತ್ತು. ಕೋವಿಡ್ ಸೋಂಕಿನ ಭೀತಿಯ ಕಾರಣದಿಂದ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ರಜನಿಕಾಂತ್ ಸಾರ್ವಜನಿಕವಾಗಿ ಓಡಾಡುವುದರಿಂದ ದೂರ ಇರಬೇಕು. ಹೀಗಾಗಿ ರಾಜಕೀಯ ಪ್ರವೇಶ ಬೇಡ ಎಂದು ವೈದ್ಯರು ಸಲಹೆ ನೀಡಿದ್ದರು.