ಪ್ರವೇಶಕ್ಕೂ ಮುನ್ನವೇ ನಿರ್ಗಮನ, ರಜನಿ ನಡೆಯಿಂದ ಯಾರಿಗೆ ಲಾಭ?
ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಕ್ರಿಯ ರಾಜಕೀಯ ಪ್ರವೇಶಿಸಿ, ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ಸ್ಪರ್ಧಿಸುತ್ತಾರೆ ಎಂಬ ಆಸೆಯಿಟ್ಟುಕೊಂಡಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ರಜನಿಕಾಂತ್ ಅವರು ಮೂರು ಪುಟಗಳ ಪತ್ರ ಬರೆದು ರಾಜಕೀಯ ರಂಗ ಪ್ರವೇಶಿಸುತ್ತಿಲ್ಲ ಎಂದಿದ್ದರೆ, ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.
ರಜನಿ ಅವರ ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದರಿಂದ ಅವರು ಹೆಚ್ಚು ಓಡಾಡುವುದು ಸೂಕ್ತವಲ್ಲ ಮತ್ತು ಕೋವಿಡ್ನಿಂದ ತೀವ್ರ ಅಪಾಯವಾಗಬಹುದು ಎಂದು ವೈದ್ಯರು ಈ ಹಿಂದಿಯೇ ಸಲಹೆ ನೀಡಿದ್ದರು. ಇತ್ತೀಚೆಗೆ ಅಣ್ಣಾತೆ ಚಿತ್ರೀಕರಣದಲ್ಲಿ ತೊಡಗಿದ್ದಾಗ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದ ರಜನಿಕಾಂತ್ ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ನಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದಾದ ಬಳಿಕ ಒಂದು ವಾರ ವಿಶ್ರಾಂತಿಯಲ್ಲಿರುವ ರಜನಿ ಪತ್ರದ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಹೊರಡಿಸಿದ್ದಾರೆ.
"ನನಗಷ್ಟೇ ಈ ನೋವು ಗೊತ್ತು"; ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ, ಸಣ್ಣ ಪುಟ್ಟ ಪಕ್ಷಗಳದ್ದೇ ಕಾರುಬಾರು. ಆಡಳಿತಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ನೇರ ಹಣಾಹಣಿಯಿದೆ. ಕಾಂಗ್ರೆಸ್, ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಿದೆ. ಸ್ಟಾರ್ ನಟ ಕಮಲ್ ಹಾಗೂ ರಜನಿ ರಾಜಕೀಯ ಪ್ರವೇಶದಿಂದ ಚುನಾವಣೆ ಕಣದಲ್ಲಿ ಭಾರಿ ಬದಲಾವಣೆ ಅಲ್ಲದಿದ್ದರೂ ಮತಗಳ ವಿಭಜನೆ ಸಾಧ್ಯತೆಯಂತೂ ಇತ್ತು. ಈಗ ರಜನಿ ಇಲ್ಲದಿರುವುದರಿಂದ ಯಾವ ಪಕ್ಷಕ್ಕೆ ಲಾಭ ಮುಂದೆ ಓದಿ..
ರಾಜಕೀಯ ಬದುಕು ಆರಂಭಕ್ಕೂ ಮುನ್ನವೇ ಹಿನ್ನಡೆ
70 ವರ್ಷ ವಯಸ್ಸಿನ ನಟ ರಜನಿಕಾಂತ್ ಅವರು ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ಈ ಹಿಂದೆ ಹೇಳಿದ್ದನ್ನು ಸ್ಮರಿಸಬಹುದು. ಚುನಾವಣೆಯಲ್ಲಿ ಸ್ಪರ್ಧೆಯಲ್ಲದೆ, ರಾಜಕೀಯದಿಂದಲೇ ಹಿಂದೆ ಸರಿದಿರುವುದು ಆಡಳಿತಾರೂಢ ಎಐಎಡಿಎಂಕೆಗೆ ಲಾಭವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಜನಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ತಮಿಳ್ ಅರುವಿ ಮಣಿಯನ್ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಹೊಸ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬಹುದು ಎಂದೇ ನಂಬಲಾಗಿತ್ತು. ಆದರೆ, ಸಂಪೂರ್ಣವಾಗಿ ರಾಜಕೀಯದಿಂದ ಹಿಂದೆ ಉಳಿದಿರುದುವುದು ಹಲವರಿಗೆ ಹಿನ್ನಡೆಯಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಎಂಟ್ರಿ ಇಲ್ಲ
ಕಮಲ್ ಹಾಸನ್ ಪ್ರತಿಕ್ರಿಯೆ
ನಾವು ಕಳೆದ 43 ವರ್ಷಗಳಿಂದಲೂ ಒಂದಾಗಿಯೇ ಇದ್ದೇವೆ. ಈಗ ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡುವುದರಲ್ಲಿ ಪವಾಡವೇನಿಲ್ಲ" ಎಂದು ಮಕ್ಕಳ್ ನೀತಿ ಮೈಯಂ ಸ್ಥಾಪಿಸಿರುವ ಸ್ಟಾರ್ ನಟ ಕಮಲ್ ಹಾಸನ್ ಹೇಳಿದ್ದರು. ಈಗ ರಜನಿಕಾಂತ್ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಕ್ಕಿಂತ ಆರೋಗ್ಯ ಮುಖ್ಯ, ಆದರೆ, ರಜನಿಕಾಂತ್ ಅವರ ಈ ನಿರ್ಧಾರದಿಂದ ನಿರಾಸೆ, ಬೇಸರವಾಗಿದೆ ಎಂದಿದ್ದಾರೆ. ನಗರ ಪ್ರದೇಶಗಳಲ್ಲಿ ಕಮಲ್ ಅವರು ಹೆಚ್ಚಿನ ಮತ ಸೆಳೆಯಬಹುದು ಎಂಬ ನಿರೀಕ್ಷೆಯಿದ್ದು, ರಜನಿ ಇಲ್ಲದಿರುವುದರಿಂದ ರಜನಿ ಫ್ಯಾನ್ಸ್ ಈಗ ಕಮಲ್ ಕಡೆಗೆ ತಿರುಗುವ ಸಾಧ್ಯತೆಯೂ ಇದೆ. ರಜನಿಗೆ ಬೆಂಬಲ ವ್ಯಕ್ತಪಡಿಸಿದ್ದ ಸಣ್ಣ ಪುಟ್ಟ ಪಕ್ಷಗಳು ಕಮಲ್ ಬೆನ್ನಿಗೆ ನಿಲ್ಲಬಹುದು.
ಎಐಎಡಿಎಂಕೆಗೆ ಭರ್ಜರಿ ಲಾಭ ಸಾಧ್ಯತೆ
ಎಐಎಡಿಎಂಕೆ ತಮ್ಮ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರ ಹೆಸರನ್ನು ಘೋಷಿಸಿದ್ದು, ಬಿಜೆಪಿ ಜೊತೆ ಮೈತ್ರಿ ಮುಂದುವರೆಸುವುದಾಗಿ ಅಮಿತ್ ಶಾ ಮುಂದೆ ಪ್ರಕಟಿಸಿದೆ. 1996ರಲ್ಲಿ ರಜನಿಕಾಂತ್ ಒಂದು ಡೈಲಾಗ್ ನಿಂದಾಗಿ ಜೆ ಜಯಲಲಿತಾ ಅವರು ಅಧಿಕಾರವನ್ನು ಕಳೆದುಕೊಳ್ಳುವಂತಾಯಿತು. ದೇವರು ಕೂಡಾ ಈ ಬಾರಿ ಜೆ ಜಯಲಲಿತಾ ಅವರನ್ನು ಕಾಪಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಯಾವುದೇ ಪಕ್ಷಕ್ಕೂ ನೇರವಾಗಿ ಬೆಂಬಲ ವ್ಯಕ್ತಪಡಿಸಿರಲಿಲ್ಲ. ಈ ಬಾರಿ ನೇರವಾಗಿ ಕಮಲ್ ಹಾಗೂ ರಜನಿ ಎದುರು ಹಾಕಿಕೊಂಡು ಪಳನಿಸ್ವಾಮಿ ಚುನಾವಣೆ ಎದುರಿಸಬೇಕಾಗಿತ್ತು. ಎಐಎಡಿಎಂಕೆ ವಿರುದ್ಧ ಈಗಾಗಲೇ ಕಮಲ್ ತಿರುಗಿಬಿದ್ದಿದ್ದು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ನಮ್ಮದು ಅಮ್ಮ ಎಂಬ ಮುಖವಾಣಿಯಲ್ಲಿ ಎಂಜಿ ರಾಮಚಂದ್ರನ್ ಹಾಗೂ ಪುರಚ್ಚಿ ತಲೈವಿ ಜಯಲಲಿತಾ ಬಗ್ಗೆ ಹೊಗಳಿಕೆಯ ಲೇಖನಗಳು ಬಂದಿದ್ದು, ಕಮಲ್ ಹಾಗೂ ರಜನಿಗೆ ತಿರುಗೇಟು ನೀಡಲಾಗಿದೆ.
ರಜನಿಕಾಂತ್ ನಿರ್ಧಾರಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ...
ಡಿಎಂಕೆಗೂ ಲಾಭ ಸಾಧ್ಯತೆ ಇಲ್ಲ
ಇನ್ನೊಂದೆಡೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡುವ ಕುರುಹು ತೋರಿದ ಡಿಎಂಕೆಯ ಸ್ಟಾಲಿನ್ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ವಿಧಾನಸಭೆ ಚುನಾವಣೆಯಲ್ಲೂ ಉತ್ತಮ ಪ್ರದರ್ಶನ ನೀಡಿ ಗದ್ದುಗೆ ಹಿಡಿಯುವ ಕನಸು ಕಾಣುತ್ತಿದ್ದಾರೆ. ಡಿಎಂಕೆ ಇನ್ನೂ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಹಂತದಲ್ಲಿದೆ. ಎಐಎಡಿಎಂಕೆ ಪ್ರಚಾರ ಜೋರಾಗಿ ಆರಂಭಿಸಿದೆ. ಎಐಎಡಿಎಂಕೆ ವಿರುದ್ಧ ರಜನಿ ತಿರುಗಿಬಿದ್ದಾಗ ಈ ಹಿಂದೆ ಡಿಎಂಕೆ ಲಾಭವಾಗಿತ್ತು ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಊಹಿಸಲಾಗಿತ್ತು. ಆದರೆ, ಈಗ ಎಐಎಡಿಎಂಕೆಗೆ ಭಾರಿ ಬಲ ಬಂದಂತಾಗಿದೆ. ಎಂಜಿಆರ್ ಮುಂದಿಟ್ಟುಕೊಂಡು ಕಮಲ್ ಹಾಗೂ ಎಐಎಡಿಎಂಕೆ ಚುನಾವಣಾ ತಂತ್ರ ರೂಪಿಸಿದ್ದರೆ, ಸ್ಟಾಲಿನ್ ಇನ್ನೂ ಕಾದುನೋಡುವ ತಂತ್ರ ಅನುಸರಿಸುತ್ತಿರುವಂತೆ ಇದೆ.