ಕರುಣಾನಿಧಿ ಅನಾರೋಗ್ಯ: ಭೇಟಿಗೆಂದು ಚೆನ್ನೈಗೆ ಆಗಮಿಸಲಿರುವ ರಾಹುಲ್
ಚೆನ್ನೈ, ಜುಲೈ 31: ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರನ್ನು ಭೇಟಿ ಮಾಡುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಚೆನ್ನೈಗೆ ಆಗಮಿಸಲಿದ್ದಾರೆ.
ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ರಕ್ತದೊತ್ತಡ ಕಡಿಮೆಯಾದ ಕಾರಣ ಚೆನ್ನೈನ ಕಾವೇರಿ ಆಸ್ಪತ್ರೆಗೆ ಜು.28 ರಂದು ದಾಖಲಿಸಲಾಗಿದೆ. ಈಗಾಗಲೇ ಅವರನ್ನು ಹಲವು ಗಣ್ಯರು ಭೇಟಿ ಮಾಡಿದ್ದು, ಇಂದು ರಾಹುಲ್ ಗಾಂಧಿ ಅವರು ಸಹ ಭೇಟಿ ಮಾಡಿ, ಆರೋಗ್ಯ ವಿಚಾರಿಸಲಿದ್ದಾರೆ.
ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ: ಅಭಿಮಾನಿಗಳಲ್ಲಿ ಹರ್ಷ
ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲೇ ಚಿಕಿತಸೆ ಪಡೆಯುತ್ತಿರುವ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ಕರುಣಾನಿಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಎದುರು ಜಮಾಯಿಸಿರುವ ಅವರ ಸಾವಿರಾರು ಅಭಿಮಾನಿಗಳು, "ಗೋಬ್ಯಾಕ್ ಯಮರಾಜ, ನಮ್ಮ ತಲೈವಾ ಅವರನ್ನು ನಮಗೆ ಬಿಟ್ಟುಕೊಡಿ" ಎಂದು ಘೋಷಣೆ ಕೂಗುತ್ತಿದ್ದಾರೆ. ಎರಡು ದಿನಗಳಿಂದ ಊಟ, ನೀರಿಲ್ಲದೆ ಆಸ್ಪತ್ರೆ ಎದುರು ಕುಳಿತು, ನೆಚ್ಚಿನ ನಾಯಕನ ಚೇತರಿಕೆಗಾಗಿ,ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.