ಜಯಲಲಿತಾ ಸಾವಿನ ತನಿಖೆ ಆರಂಭವಾಗಿದೆ: ಪನ್ನೀರ್ ಸೆಲ್ವಂ
ಬಹಳಷ್ಟು ಜನರು ಜಯಲಲಿತಾ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದರಿಂದ ಸತ್ಯಾಂಶ ಹೊರಬೀಳಲು ತನಿಖೆಗೆ ಆದೇಶಿಸಲಾಗಿದೆ ಎಂದು ಪನ್ನೀರ್ ಸೆಲ್ವಂ ತಿಳಿಸಿದ್ದಾರೆ.
ಚೆನ್ನೈ, ಫೆಬ್ರವರಿ 12: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆಯನ್ನು ತಮ್ಮ ಸರ್ಕಾರ ಈಗಾಗಲೇ ಆರಂಭಿಸಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಚೆನ್ನೈನಲ್ಲಿ ಭಾನುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯಲಲಿತಾ ಅವರ ಸಾವಿನ ತನಿಖೆಯಾಗಬೇಕೆಂದು ಬಹಳಷ್ಟು ಅಭಿಮಾನಿಗಳು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ, ಅವರ ಸಾವಿನ ತನಿಖೆಯನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಅಮ್ಮ (ಜಯಲಲಿತಾ) ಅವರ ಸಾವಿನ ಬಗ್ಗೆ ತಮಗೂ ಅನುಮಾನಗಳಿದ್ದವು ಎಂದ ಅವರು, ಅಮ್ಮ ಆಸ್ಪತ್ರೆಯಲ್ಲಿದ್ದಾಗ ಅವರ ಸಂಬಂಧಿ ದೀಪಾ ಅವರನ್ನು ಭೇಟಿ ಮಾಡಲು ಯಾಕೆ ಬಿಡಲಿಲ್ಲ ಎಂಬುದು ಇಂದಿಗೂ ಅರ್ಥವಾಗದ ವಿಚಾರ ಎಂದರು.
ಇದೇ ವೇಳೆ, ಶಶಿಕಲಾ ವಿಚಾರದಲ್ಲಿ ಕಿಡಿಕಾರಿದ ಅವರು, ಕಳೆದ ಚುನಾವಣೆಯಲ್ಲಿ ಜನರು ಅಮ್ಮನ ಮುಖ ನೋಡಿ ಮತ ಹಾಕಿದ್ದಾರೆ ಎಂಬುದನ್ನು ತಮ್ಮ ಪಕ್ಷದ ಎಲ್ಲಾ ಎಂಎಲ್ಎಗಳಿಗೆ ಗೊತ್ತಿದೆ. ಹಾಗಾಗಿ, ಅಮ್ಮನ ಪಕ್ಷಕ್ಕೆ ಅನ್ಯಾಯವಾಗದಂತೆ ಅವರು ನೋಡಿಕೊಳ್ಳಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.