ಮಾಟ ಮಂತ್ರ ನಿವಾರಣೆಯಾಗುತ್ತೆ ಅಂತ ಮಹಿಳೆಯರಿಗೆ ಚಾಟಿಯಿಂದ ಥಳಿತ
ಚೆನ್ನೈ, ಮೇ 28: ವಿಜ್ಞಾನ ಎಷ್ಟೇ ಮುಂದುವರೆಯುತ್ತಿದ್ದರು, ಜನರಲ್ಲಿನ ಮೂಢನಂಬಿಕೆ ಮಾತ್ರ ಕಡಿಮೆಯಾಗುತ್ತಿಲ್ಲ. ದೇವರು, ದೆವ್ವದ ಹೆಸರಿನಲ್ಲಿ ಅನೇಕ ಆಚರಣೆಗಳು ನಡೆಯುತ್ತಲೇ ಇದೆ. ಅದರಲ್ಲೂ ಗ್ರಾಮೀಣ ಜನರಲ್ಲಿ ಇಂದಿಗೂ ದೆವ್ವ, ಮಾಟದ ಕುರಿತು ನಂಬಿಕೆಗಳು ಗಾಢವಾಗಿದೆ.
ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆಯಾದಾಗ ಸಾಮಾನ್ಯವಾಗಿ ದೆವ್ವ ಹಿಡಿದಿದೆ ಎಂದೋ ಮಾಟ ಮಾಡಿಸಿದ್ದಾರೆ ಎಂದೋ ಎಷ್ಟೋ ಜನ ಅವರನ್ನು ದೇವಸ್ಥಾನಗಳಿಗೆ, ಮಂತ್ರವಾದಿಗಳ ಬಳಿ ಕರೆದೊಯ್ದು ಪೂಜೆ ಮಾಡಿಸುವುದು, ತಡೆ ಒಡೆಯುವುದು ಇಂದಿಗೂ ಚಾಲನೆಯಲ್ಲಿದೆ. ಅಂತಹದ್ದೇ ಇಂದು ಘಟನೆ ತಮಿಳುನಾಡಿನ ನಾಮಕ್ಕಲ್ನಲ್ಲಿ ನಡೆದಿದೆ.
ವಿಶೇಷ: ಹುಲಿ ಮುಟ್ಟಿದರೆ ಆಪತ್ತು! ಕಾಪು ಪಿಲಿಕೋಲದ ವೈಭವ
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಮಾಟ ಮಾಡಲಾಗಿದೆ ಎಂದು ಹೇಳಿ ದೇವಸ್ಥಾನ ಅರ್ಚಕನೊಬ್ಬ ಚಾಟಿಯಿಂದ ಹೊಡೆದಿರುವ ಘಟನೆ ವರದಿಯಾಗಿದೆ. ಚಾಟಿಯಲ್ಲಿ ಹೊಡೆಯುವುದರಿಂದ ಮಾಟ, ಮಂತ್ರ ಮಾಡಿದ್ದರೆ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಅವರಲ್ಲಿದೆ ಎನ್ನಲಾಗಿದೆ.
ದುಷ್ಟ ಶಕ್ತಿಗಳು ಮಹಿಳೆಯರ ದೇಹವನ್ನು ಪ್ರವೇಶಿಸುತ್ತವೆ, ದೇವರ ಪೂಜಾರಿ ಅಥವಾ ದೈವಾಂಶ ಸಂಭೂತನೆಂದು ನಂಬುವ ವ್ಯಕ್ತಿಯೊಬ್ಬ ಚಾವಟಿಗೆಯಿಂದ ಮಹಿಳೆಯರಿಗೆ ಥಳಿಸಿದರೆ ಅವರಿಗೆ ಹಿಡಿದಿರುವ ದುಷ್ಟಶಕ್ತಿಗಳು ದೂರವಾಗುತ್ತದೆ ಎನ್ನುವ ನಂಬಿಕೆಯಿಂದ ಈ ರೀತಿ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಮಹಿಳೆಯರೂ ಕೂಡ ವಿರೋಧಿಸುವುದಿಲ್ಲ.
ಒಂದು ತಿಂಗಳಿಂದ ನಡೆಯುತ್ತಿರುವ ಉತ್ಸವ
ನಾಮಕ್ಕಲ್ ಜಿಲ್ಲೆಯ ವರದರಾಜ ಪೆರುಮಾಳ್ ಚೆಲ್ಲಿಯಮ್ಮನ್ ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಒಂದು ತಿಂಗಳ ಕಾಲ ದೇವಸ್ಥಾನದ ಉತ್ಸವಗಳು ನಡೆಯುತ್ತವೆ. ಏಪ್ರಿಲ್ 29 ರಂದು ಪ್ರಾರಂಭವಾಗಿರುವ ಉತ್ಸವ ಮೇ 30 ರಂದು ಕೊನೆಗೊಳ್ಳುತ್ತದೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜಾರಿಯೊಬ್ಬ ಗ್ರಾಮಸ್ಥರು ಪ್ರಾರ್ಥಿಸುವ ದೇವತೆ ಕಾಟೇರಿ ವೇಷಭೂಷಣ ಧರಿಸಿ ಹಲವಾರು ಮಹಿಳೆಯರಿಗೆ ಚಾಟಿಯಿಂದ ಹೊಡೆದಿದ್ದಾರೆ. 20 ವರ್ಷಗಳ ನಂತರ ಅಲ್ಲಿ ಈ ಆಚರಣೆ ನಡೆಯುತ್ತಿದೆ. ಮಹಿಳೆಯರಿಗೆ ಈ ರೀತಿ ಚಾಟಿಯಿಂದ ಹೊಡೆದರೆ ಅವರ ಮೇಲೆ ನಡೆದಿದೆ ಎನ್ನಲಾಗುವ ಮಾಟ, ಮಂತ್ರ ಪ್ರಯೋಗ ನಿವಾರಣೆಯಾಗುತ್ತದೆ ಎಂದು ಅಲ್ಲಿನ ಜನ ನಂಬಿದ್ದಾರೆ.
ಕೊಳ್ಳೇಗಾಲ; ಪವಾಡ ಸೃಷ್ಟಿಯ ಸೀಗಮಾರಮ್ಮನ ನರಬಲಿ ಹಬ್ಬ
ಪೂಜಾರಿಯನ್ನು ಹುರಿದುಂಬಿಸಿದ ಭಕ್ತರು
ದೇವರ ವೇಷ ಧರಿಸಿದ ಪೂಜಾರಿಯೊಬ್ಬ ಮಾಟ, ಮಂತ್ರದಿಂದ ಪೀಡಿತಳಾಗಿದ್ದಾಳೆ ಎನ್ನಲಾಗಿರುವ ಮಹಿಳೆಯರನ್ನು ಥಳಿಸುತ್ತಿರಬೇಕಾದರೆ, ಸುತ್ತಮುತ್ತ ನೆರೆದಿದ್ದ ಭಕ್ತರೆಲ್ಲ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಪೂಜಾರಿಯನ್ನು ಹುರಿದುಂಬಿಸಿದ್ದಾರೆ.
ಕುತೂಹಲದಿಂದ ಈ ಆಚರಣೆಯನ್ನು ನೋಡುವ ಜನಸಮೂಹ "ಹೊಡಿ.. ಹೊಡಿ.." ಎಂದು ತಮಿಳು ಭಾಷೆಯಲ್ಲಿ ಘೋಷಣೆ ಕೂಗಿದ್ದಾರೆ. ಪೂಜಾರಿ ಮಹಿಳೆಗೆ ಹೊಡೆಯಲು ಮುಂದಾಗುತ್ತಿದ್ದಂತೆ, ಮಹಿಳೆ ಕೈ ಮುಗಿಯುತ್ತಾಳೆ, ಕೈಗಳನ್ನು ಮೇಲೆತ್ತಿ ಮುಗಿಯುತ್ತಿದ್ದಂತೆ ಪೂಜಾರಿ ಮಹಿಳೆಯನ್ನು ಚಾಟಿಯಿಂದ ಥಳಿಸುತ್ತಾನೆ. ಚಾವಟಿಯಿಂದ ಹೊಡೆಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.
20 ವರ್ಷಗಳ ನಂತರ ನಡೆದ ಉತ್ಸವ
ರಾಸಿಪುರಂ ಅಕ್ಕಪಕ್ಕದ 18 ಗ್ರಾಮಗಳ ಜನ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 20 ವರ್ಷಗಳ ನಡೆದ ಈ ಆಚರಣೆಯನ್ನು ನೋಡಲು ರಾಸಿಪುರಂ ಗ್ರಾಮಕ್ಕೆ ಜನಸಾಗರವೇ ಹರಿದುಬಂದಿತ್ತು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದ ಈ ಗ್ರಾಮದಲ್ಲಿ ಈ ಆಚರಣೆ 20 ವರ್ಷಗಳಿಂದ ನಡೆದಿರಲಿಲ್ಲ ಎಂದು ತಿಳಿದು ಬಂದಿದೆ.
20 ವರ್ಷಗಳ ನಡೆಯುತ್ತಿರುವ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಏಪ್ರಿಲ್ 29 ರಿಂದ ಪ್ರಾರಂಭವಾಗಿರುವ ಮಾರಿಯಮ್ಮನ್ ಉತ್ಸವ ಹಲವು ಧಾರ್ಮಿಕ ಆಚರಣೆಗಳು ನಡೆಯುತ್ತದೆ. ಅದ್ಧೂರಿ ಉತ್ಸವಕ್ಕೆ ಮೇ 30 ರಂದು ತೆರೆಬೀಳಲಿದೆ.
ಮೊದಲಿನಿಂದಲೂ ರೂಢಿಯಲ್ಲಿರುವ ಆಚರಣೆ
ತಮಿಳುನಾಡಿನಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲಲ್ಲ. ರಾಜ್ಯದ ಹಲವು ಹಲವು ಭಾಗಗಳಲ್ಲಿ ಈ ರೀತಿ ಆಚರಣೆ ರೂಢಿಯಲ್ಲಿದೆ. ವರ್ಷಕ್ಕೊಮ್ಮೆ ನಡೆಯುವ ಗ್ರಾಮದ ದೇವರ ಜಾತ್ರೆ ಸಂದರ್ಭದಲ್ಲಿ ದೆವ್ವ ಹಿಡಿದಿದೆ, ಮಾಟ ಮಂತ್ರ ಪ್ರಯೋಗ ಮಾಡಲಾಗಿದೆ ಎಂದು ಹಲವು ಮಹಿಳೆಯರನ್ನು ಈ ರೀತಿ ಚಾವಟಿಯಿಂದ ಹೊಡೆಯುವುದು ಸಾಮಾನ್ಯವಾಗಿದೆ. ಅದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ವೀಡಿಯೋಗಳು ಕೂಡ ಲಭ್ಯವಿದೆ.
ವೈಜ್ಞಾನಿಕವಾಗಿ ಇಷ್ಟೊಂದು ಮುಂದುವರೆದಿರುವ ಕಾಲದಲ್ಲೂ ದೈವದ ಹೆಸರಿನಲ್ಲಿ ಈ ರೀತಿ ಆಚರಣೆಗಳು ಸರಿಯಾ, ತಪ್ಪಾ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿಗಳನ್ನು ಸುಲಭವಾಗಿ ಕೊನೆಗಾಣಿಸಲಾಗದು.