ಜಲ್ಲಿಕಟ್ಟು ವೀಕ್ಷಿಸಲು ತಮಿಳುನಾಡಿಗೆ ಬರಲಿರುವ ರಾಹುಲ್ ಗಾಂಧಿ
ಚೆನ್ನೈ, ಜನವರಿ 12: ಕೊರೊನಾವೈರಸ್ ಸಾಂಕ್ರಾಮಿಕದ ನಡುವೆ ಪೊಂಗಲ್ (ಮಕರ ಸಂಕ್ರಾಂತಿ) ಸಂದರ್ಭದಲ್ಲಿ ಜಲ್ಲಿಕಟ್ಟು ಆಚರಣೆಗೆ ಸಜ್ಜಾಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ 2021 ಹೊಸ್ತಿಲಲ್ಲಿ ಪ್ರಮುಖ ಹಬ್ಬ ಎದುರಾಗಿದ್ದು, ರಾಜಕೀಯ ಪಕ್ಷಗಳಿಗೆ ಹಬ್ಬಗಳು ಪ್ರಚಾರದ ಸರಕಗಳಾಗಿವೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಜನವರಿ 14ರಂದು ಪೊಂಗಲ್ ಅಂಗವಾಗಿ ನಡೆಯುವ ಜಲ್ಲಿಕಟ್ಟು ಆಚರಣೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆಎಸ್ ಅಳಗಿರಿ ಮಂಗಳವಾರದಂದು ಹೇಳಿದ್ದಾರೆ.
Oneindia explainer: ಜಲ್ಲಿಕಟ್ಟು ಏನು, ಎತ್ತ? ಸ್ವಾರಸ್ಯಕರ ಸಂಗತಿ!
ಮದುರೈ ಜಿಲ್ಲೆಯ ಅವನಿಯಾಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಆಟದಲ್ಲಿ ಪಾಲ್ಗೊಂಡು ಸ್ಥಳೀಯ ರೈತಾಪಿ ಜನರಿಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ. ದೇಶದ ರೈತರಿಗೆ ಮಾರಕವಾಗಿರುವ ನೂತನ ಕೃಷಿ ಕಾಯ್ದೆ ವಿರುದ್ಧ ದನಿಯೆತ್ತಲಿದ್ದಾರೆ ಎಂದರು.
ಜಲ್ಲಿಕಟ್ಟು ನಿರ್ಬಂಧಿತ ಅನುಮತಿ ನೀಡಲಾಗಿದ್ದು, 150 ಮಂದಿ ಮಾತ್ರ ಭಾಗವಹಿಸಬೇಕು, ಆಚರಣೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಸೇರಿದಂತೆ ಎಲ್ಲರೂ ಮುಂಚಿತವಾಗಿ ನೋಂದಣಿ ಮಾಡಿಕೊಂಡಿರಬೇಕು. ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು. ಪ್ರೇಕ್ಷಕರ ಸಂಖ್ಯೆ ಕೂಡಾ 50% ರಷ್ಟು ತಗ್ಗಿರಬೇಕು ಎಂದು ತಮಿಳುನಾಡು ಸರ್ಕಾರ ಆದೇಶದಲ್ಲಿ ಹೇಳಲಾಗಿದೆ.
ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟವಾಗಿದೆ. ತಮಿಳುನಾಡಿನ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆಗಾಗಿಯೇ ಗೂಳಿಗಳನ್ನು ಸಾಕಿ ಪಳಗಿಸಲಾಗುತ್ತದೆ. ವರ್ಷವಿಡೀ ಗೂಳಿಯನ್ನು ಉತ್ತಮವಾಗಿ ಆರೈಕೆ ಮಾಡಿ ದಷ್ಟ ಪುಷ್ಟವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಜಲ್ಲಿಕಟ್ಟು ದಿನದಂದು ಕೊಬ್ಬಿದ ಗೂಳಿಯನ್ನು ಹಿಡಿದು ನಿಲ್ಲಿಸುವವರಿಗೆ ವಿಶೇಷ ಮನ್ನಣೆ, ಗೌರವ ಸಿಗಲಿದೆ.
ಆದರೆ, ತಮಿಳುನಾಡು ಅಸೆಂಬ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಜಲ್ಲಿಕಟ್ಟು ಮುನ್ನೆಲೆಗೆ ತರಲಾಗಿದೆ. ಪ್ರಾಣಿಗಳಿಗೆ ಹಿಂಸೆ ನೀಡುವ ಆಚರಣೆ ಬೇಡ ಎಂದು ಪರಿಸರ ಹಾಗೂ ಪ್ರಾಣಿ ಪ್ರಿಯ ಸಂಘಟನೆಗಳು ಕಾನೂನು ಸಮರ ನಡೆಸುತ್ತಿವೆ.