ದೇಶದ್ರೋಹದ ಆರೋಪದಲ್ಲಿ ರಾಜಕಾರಣಿ ವೈಕೋಗೆ ಒಂದು ವರ್ಷ ಜೈಲು
ಚೆನ್ನೈ, ಜುಲೈ 5: ದೇಶದ್ರೋಹದ ಆರೋಪದಲ್ಲಿ ತಮಿಳುನಾಡಿನ ರಾಜಕಾರಣಿ ವಿ.ಗೋಪಾಲಸ್ವಾಮಿ ಅಥವಾ ವೈಕೋ ಅವರಿಗೆ ಚೆನ್ನೈ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ. ವೈಕೋ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಒಂದು ತಿಂಗಳ ತನಕ ಶಿಕ್ಷೆ ಜಾರಿ ಮಾಡುವುದನ್ನು ತಡೆ ಹಿಡಿದಿದೆ.
ಹತ್ತು ವರ್ಷದ ಹಿಂದೆ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಂಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ವೈಕೋ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ. "ಶ್ರೀಲಂಕಾದಲ್ಲಿ ಎಲ್ಟಿಟಿಇ ವಿರುದ್ಧ ಯುದ್ಧ ನಿಲ್ಲದಿದ್ದರೆ ಭಾರತವು ಒಂದು ದೇಶವಾಗಿ ಉಳಿಯುವುದಿಲ್ಲ" ಎಂದು ಅವರು ಹೇಳಿದ್ದರು.
ಭಾರತದ ಸಾರ್ವಭೌಮತ್ವದ ವಿರುದ್ಧವಾಗಿ ಮಾತನಾಡಿದ ಆರೋಪ ಅವರ ಮೇಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಡಿಎಂಕೆಯಿಂದ ದಾಖಲಿಸಲಾಗಿತ್ತು. ವಿಪರ್ಯಾಸ ಏನೆಂದರೆ, ವೈಕೋ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಡಿಎಂಕೆ ಮೈತ್ರಿಕೂಟದಿಂದ ಅಭ್ಯರ್ಥಿಯಾಗಿ ಮಾಡಲಾಗಿದೆ. ಶನಿವಾರದಂದು ನಾಮಪತ್ರ ಸಲ್ಲಿಸಲು ಎಲ್ಲ ಸಿದ್ಧತೆ ನಡೆದಿದೆ. ಹದಿನೈದು ವರ್ಷಗಳ ನಂತರ ವೈಕೋ ಸಂಸತ್ ಪ್ರವೇಶಕ್ಕೆ ಇದು ದಾರಿಯಾಗಬೇಕಿದೆ.
ವೈಕೋ ವಕೀಲರು. ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಅದ್ಭುತವಾಗಿ ಭಾಷಣ ಮಾಡಬಲ್ಲರು. ನಿಷೇಧಿತ ಎಲ್ಟಿಟಿಇ ಬೆಂಬಲಿಸಿ ಮಾಡಿದ ವಿವಾದಿತ ಭಾಷಣದಿಂದ ಜಯಲಲಿತಾ ಮುಖ್ಯಮಂತ್ರಿ ಆಗಿದ್ದಾಗ 'ಪೋಟಾ' ಕಾಯ್ದೆ ಅಡಿ ವೈಕೋ ಮೇಲೆ ಪ್ರಕರಣ ದಾಖಲಾಗಿತ್ತು. ವೆಲ್ಲೂರು ಜೈಲಿನಲ್ಲಿ ಹತ್ತಿರ ಹತ್ತಿರ ಒಂದು ವರ್ಷ ಕಳೆದಿದ್ದರು. ಆ ನಂತರ, ಐದು ವರ್ಷಗಳ ಹಿಂದೆ ಪ್ರಕರಣ ಹಿಂಪಡೆಯಲಾಯಿತು.