ಜಯಾ ಸ್ಮಾರಕ ಬಳಿ ಕರ್ತವ್ಯ ನಿರತ ಪೇದೆ ಆತ್ಮಹತ್ಯೆ
ಚೆನ್ನೈ, ಮಾರ್ಚ್ 04: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ ಜಯಲಲಿತಾ ಅವರ ಸ್ಮಾರಕದ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸ್ಮಾರಕದ ಭದ್ರತೆಗಾಗಿ ನಿಯೋಜನೆಗೊಂಡಿದ್ದ 28 ವರ್ಷ ವಯಸ್ಸಿನ ಪೊಲೀಸ್ ಪೇದೆಯೊಬ್ಬರು ಸ್ಮಾರಕದ ಸಮೀಪದಲ್ಲೇ .303 ಸರ್ವೀಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪೇದೆಯನ್ನು ಮಧುರೈ ಮೂಲದ ಅರುಣ್ ರಾಜ್ ಎಂದು ಗುರುತಿಸಲಾಗಿದೆ.
ಚೆನ್ನೈ ಸಿಟಿ ಪೊಲೀಸ್ ಇಲಾಖೆಯ ಶಸ್ತ್ರಾಸ್ತ್ರ ಪಡೆಯ ಪೇದೆಯಾಗಿದ್ದ ಅರುಣ್ ರಾಜ್ ಅವರನ್ನು ಮರೀನಾ ಬೀಚ್ನಲ್ಲಿರುವ ಜಯಲಲಿತಾ ಸ್ಮಾರಕದ ಭದ್ರತೆಗೆ ನಿಯೋಜಿಸಲಾಗಿತ್ತು.
ಭಾನುವಾರ ಬೆಳಗ್ಗೆ ಸ್ಮಾರಕದಲ್ಲಿ ಬಳಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಅರುಣ್ ಅವರು ಏಕಾಏಕಿ ಗುಂಡು ಹಾರಿಸಿಕೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಅರುಣ್ ಅವರನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಅರುಣ್ ಆತ್ಮಹತ್ಯೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಮರೀನಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎ.ಕೆ. ವಿಶ್ವನಾಥನ್ ಹೇಳಿದರು.