ಕುಡಿತ ಬಿಡು ಎಂದ ಇಬ್ಬರು ಹೆಣ್ಣು ಮಕ್ಕಳನ್ನು ಹೊಡೆದು ಕೊಂದ ಕುಡುಕ ತಂದೆ
ಚೆನ್ನೈ, ಮೇ 23: ಕುಡಿತಕ್ಕೆ ದಾಸನಾಗಿದ್ದ ತಂದೆಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊಡೆದು ಕೊಂದಿರುವ ದಾರುಣ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಹೇಳಿಕೆಯ ಪ್ರಕಾರ ಗೋವಿಂದ ರಾಜು ನಿರುದ್ಯೋಗಿಯಾಗಿದ್ದ, ಈತನ ಪತ್ನಿ ಕಸ ವಿಂಗಡಣೆ ಘಟಕದಲ್ಲಿ ಉದ್ಯೋಗಿಯಾಗಿದ್ದಾರೆ. ಈ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದವು. ದಿನ ನಿತ್ಯ ಕುಡಿದು ಬರುತ್ತಿದ್ದ ಈತ ಹೆಂಡತಿ ಮಕ್ಕಳೊಂದಿಗೆ ಜಗಳ ಮಾಡುತ್ತಿದ್ದ, ಈ ಜಗಳದಲ್ಲಿ ಅವರ ಮೂರು ಮಕ್ಕಳು ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.
ವಿವಾಹದ ಆರಂಭದಲ್ಲಿ ಸುಖ ಸಂಸಾರ
ತಮಿಳುನಾಡಿನ ಕಾಂಚೀಪುರಂ ಬಳಿಯ ಓರಗಡಂ ಪ್ರದೇಶದಲ್ಲಿ ಗೋವಿಂದರಾಜ್ ಮತ್ತು ಕುಟುಂಬ ವಾಸವಾಗಿತ್ತು. ಕೆಲವು ವರ್ಷಗಳ ಹಿಂದೆ ಗೋವಿಂದರಾಜು ಸೆಲ್ವಿ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಗೋವಿಂದರಾಜು ಮತ್ತು ಸೆಲ್ವಿ ಕೆಲ ವರ್ಷಗಳ ಕಾಲ ಸಂತೋಷದಿಂದ ಸಂಸಾರ ನಡೆಸಿದ್ದರು.
ಕುಡಿತಕ್ಕೆ ದಾಸನಾದ ಗೋವಿಂದರಾಜು
ಗೋವಿಂದರಾಜು ಮತ್ತು ಸೆಲ್ವಿ ದಂಪತಿಗೆ ನಂದಿನಿ(16), ನದಿಯಾ(14), ದೀನಾ(11) ಮತ್ತು ದೀಪಾ(9) ಎಂಬ ನಾಲ್ಕು ಹೆಣ್ಣುಮಕ್ಕಳಿದ್ದರು. ಗೋವಿಂದರಾಜು ಕುಡಿತಕ್ಕೆ ದಾಸಗಾಗಿದ್ದರಿಂದ ಪತ್ನಿ ಉತುಂಕಾಡು ಎಂಬಲ್ಲಿ ಕಸ ವಿಂಗಡನೆ ಘಟಕದಲ್ಲಿ ಕೆಲಸ ಮಾಡುತ್ತಾ ಸಂಸಾರ ನೌಕೆ ಸಾಗಿಸುತ್ತಿದ್ದರು. ಪ್ರತಿದಿನ ಕುಡಿದು ಬಂದು ತನ್ನ ಹೆಂಡತಿ ಮಕ್ಕಳೊಂದಿಗೆ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ತಂದೆಯ ಹೊಡೆತ ತಾಳಲಾರದೆ ಆತ್ಮಹತ್ಯೆ
ದಿನನಿತ್ಯ ಕುಡಿಯುತ್ತಿದ್ದ ಗೋವಿಂದರಾಜು ಹೆಂಡತಿ ಮಕ್ಕಳಿಗೆ ದಿನನಿತ್ಯ ಹೊಡೆಯುತ್ತಿದ್ದ. ಮೇ 4ರಂದು ನಡೆದ ಜಗಳದಲ್ಲಿ 3ನೇ ಮಗಳು 14 ವರ್ಷದ ನದಿಯಾ ತನ್ನ ತಂದೆಯ ಚಿತ್ರಹಿಂಸೆ ತಾಳಲಾರದೆ ತಾನಾಗಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆ ಘಟನೆ ನಂತರ ಗೋವಿಂದರಾಜು ಕುಡಿಯುವುದನ್ನು ಹೆಚ್ಚು ಮಾಡಿದ್ದ. ಕುಡಿದ ಮತ್ತಿನಲ್ಲಿ ಮಕ್ಕಳು ಮತ್ತು ಪತ್ನಿಗೆ ನರಕ ತೋರಿಸುತ್ತಿದ್ದ ಎಂದು ತಿಳಿದಬಂದಿದೆ.
ಕುಡಿದ ಮತ್ತಿನಲ್ಲಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ
ಶುಕ್ರವಾರದಂದು ಗೋವಿಂದ ರಾಜು ಮನೆಯಲ್ಲಿ ಕುಡಿತ ಆರಂಭಿಸಿದ್ದ. ಈ ವೇಳೆ ಶಾಲೆಯಿಂದ ಬಂದ ದೀಪ ಮತ್ತು ನಂದಿನಿ ಗೋವಿಂದರಾಜು ಮನೆಯಲ್ಲಿ ಕುಡಿಯುತ್ತಿದ್ದದ್ದನ್ನು ನೋಡಿ ಹತಾಶರಾಗಿದ್ದಾರೆ. ನಂತರ ತಂದೆ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಗೋವಿಂದ ರಾಜು ದೊಣ್ಣೆಯಿಂದ ರಕ್ತಬರುವವರೆಗೆ ತಲೆ ಮತ್ತು ಎದೆ ಭಾಗಕ್ಕೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಬಾಗಿಲು ಹಾಕಿ ತನ್ನ ಉಳಿದಿದ್ದ ಮದ್ಯವನ್ನು ಕುಡಿಯಲು ಆರಂಭಿಸಿದ್ದಾನೆ. ನಂದಿನಿ 11 ಮತ್ತು ದೀಪ 4 ತರಗತಿ ಓದುತ್ತಿದ್ದರೆಂದು ತಿಳಿದುಬಂದಿದೆ.
3ನೇ ಮಗಳಾದ ಧೀನಾ ಶಾಲೆ ಮುಗಿಸಿ 4 ಗಂಟೆಗೆ ಮನೆಗೆ ಬಂದಾಗ ಒಳಗಿನಿಂದ ಬಾಗಿಲು ಹಾಕಿರುವುದು ತಿಳಿದುಬಂದಿದೆ. ಸತತವಾಗಿ ಬಾಗಿಲು ಬಡಿದರೂ ಯಾರೂ ಪ್ರತಿಕ್ರಿಯಿಸದಿದ್ದಾಗ, ಆಕೆ ತನ್ನ ಅಜ್ಜಿ ಮತ್ತು ಪಕ್ಕದ ಮನೆಯವರನ್ನು ಕರೆದಿದ್ದಾಳೆ. ಬಾಗಿಲನ್ನು ಹೊಡೆದು ಒಳಗೆ ಪ್ರವೇಶಿಸಿದಾಗ ಇಬ್ಬರು ಮಕ್ಕಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಗೋವಿಂದರಾಜು ಮನೆಯಿಂದ ಓಡಿಹೋಗಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗದುಕೊಂಡು ಹೋಗಿದ್ದಾರೆ ಮತ್ತು ಗೋವಿಂದರಾಜುನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.