ಅಪನಗದೀಕರಣ ತಪ್ಪು ನಡೆ ಎಂದು ಮೋದಿ ಒಪ್ಪಿಕೊಳ್ಳಲಿ: ಕಮಲ್
ಚೆನ್ನೈ, ಅಕ್ಟೋಬರ್ 19: ರಾಜಕೀಯ ರಂಗ ಪ್ರವೇಶಕ್ಕೆ ಸಿದ್ಧರಾಗಿರುವ ಕಮಲ್ ಹಾಸನ್ ಅವರಿಗೆ ದಿಢೀರ್ ಜ್ಞಾನೋದಯವಾಗಿದೆಯಂತೆ. ಅಪನಗದೀಕರಣ ಹಾಗೂ ಆರ್ಥಿಕತೆ ಬಗ್ಗೆ ಪ್ರಧಾನಿ ಮೋದಿ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಮಲ್ ಈಗ ಉಲ್ಟಾ ಹೊಡೆದಿದ್ದಾರೆ.
ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರವನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ತಪ್ಪು ಮಾಡಿದೆ.ನೋಟ್ ಬ್ಯಾನ್ ವಿಚಾರವಾಗಿ ನಾನು ತರಾತುರಿಯಲ್ಲಿ ಈ ಹೇಳಿಕೆ ನೀಡಿದ್ದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ತಮಿಳು ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಮಲ್, ಕಳೆದ ವರ್ಷ ನವೆಂಬರ್ನಲ್ಲಿ ಹಳೆಯ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಈ ವೇಳೆ ಕಮಲ್ ಹಾಸನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.
ಆದರೆ, ನಂತರ ಆರ್ಥಿಕ ತಜ್ಞರು, ಸಮಾನ ಮನಸ್ಕ ಗೆಳೆಯರ ಜತೆ ಚರ್ಚಿಸಿದ ಬಳಿಕ ಮೋದಿ ಅವರು ತಪ್ಪು ನಡೆ ಇಟ್ಟಿದ್ದಾರೆ ಎಂಬುದು ಕಮಲ್ ಗೆ ಮನವರಿಕೆಯಾಗಿದೆಯಂತೆ.
'ಅಪನಗದೀಕರಣ ವ್ಯವಸ್ಥೆ ಒಳ್ಳೆಯದೇ ಆದರೆ, ಅದನ್ನು ಜಾರಿಗೊಳಿಸಿರುವ ವಿಧಾನ ಸರಿಯಿಲ್ಲ. ಯೋಜನೆಯಲ್ಲಿರುವ ಲೋಪ ದೋಷಗಳ ಬಗ್ಗೆ ಸಾರ್ವಜನಿಕರಿಗೆ ತಿಳಿದಿಲ್ಲ' ಎಂದು ಕಮಲ್ ಹೇಳಿದ್ದಾರೆ.