ತಮಿಳುನಾಡಿನಲ್ಲಿ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಚೆನ್ನೈ, ಫೆಬ್ರವರಿ.14: ನೀರಿನ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ದಾಖಲೆ ಮಟ್ಟದಲ್ಲಿ ಬೆಳೆಯನ್ನು ಬೆಳೆಯುವ ತಮಿಳುನಾಡು ರೈತರ ಬಗ್ಗೆ ನಾನು ಪ್ರಶಂಸೆ ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಮೊದಲ ಹಂತದ ಮೆಟ್ರೋ ರೈಲ್ವೆ ಕಾಮಗಾರಿ ಯೋಜನೆಗೆ ಚೆನ್ನೈನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿ ಮಾತನಾಡಿದರು.
"ಅಮ್ಮಾ" ಸರ್ಕಾರದಿಂದ ರೈತರಿಗೆ 24 ಗಂಟೆ ವಿದ್ಯುತ್; ಚುನಾವಣೆ ಸಮೀಪದಲ್ಲಿ ಸಿಎಂ ಘೋಷಣೆ
ನೀರಿನ ಸಂರಕ್ಷಣೆಗೆ ಅಗತ್ಯವಿರುವ ಕಾರ್ಯವನ್ನು ನಾವು ಮಾಡಬೇಕಿದೆ. ಪ್ರತಿ ಹನಿಗೆ ಹೆಚ್ಚು ಬೆಳೆ( Per Drop, More Crop) ಮಂತ್ರವನ್ನು ಯಾವಾಗಲೂ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ಕರೆ ಕೊಟ್ಟರು.
ಮೆಟ್ರೋ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಚೆನ್ನೈನಲ್ಲಿ ಮೊದಲ ಹಂತದಲ್ಲಿ ಉತ್ತರ ಚೆನ್ನೈನಿಂದ ವಿಮಾನ ನಿಲ್ದಾಣ ಹಾಗೂ ಕೇಂದ್ರ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ 3770 ಕೋಟಿ ರೂಪಾಯಿ ವೆಚ್ಚದ 9.05 ಕಿಲೋ ಮೀಟರ್ ಮಟ್ರೋ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಚೆನ್ನೈ ನಗರವು ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ್ದು, ಇದು ಜ್ಞಾನ ಮತ್ತು ಸೃಜನಶೀಲತೆಯಿಂದ ಕೂಡಿದೆ. ಮೂಲಭೂತ ಸೌಕರ್ಯಗಳ ಯೋಜನೆ ಆರಂಭಿಸುತ್ತಿರುವುದು ಸ್ಥಳೀಯ ಅಭಿವೃದ್ಧಿ ಸಂಕೇತವಾಗಿರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಡಿಸ್ಕವರಿ ಕ್ಯಾಂಪಸ್ ಆರಂಭಕ್ಕೆ ಪ್ರಧಾನಿ ಮೋದಿ ಅಡಿಪಾಯ
ಚೆನ್ನೈನ ಥೈಯೂರ್ ಬಳಿ 2 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಐಐಟಿ ಐಐಟಿ ಮದ್ರಾಸ್ನ ಡಿಸ್ಕವರಿ ಕ್ಯಾಂಪಸ್ಗೆ ಆರಂಭದ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಡಿಪಾಯ ಹಾಕಿದರು. ಮೊದಲ ಹಂತದಲ್ಲಿ 1000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಈ ಕ್ಯಾಂಪಸ್ ನಿರ್ಮಿಸುವ ಗುರಿ ಹೊಂದಲಾಗಿದೆ.
ಚೆನ್ನೈ ಬೀಚ್ ಮತ್ತು ಅಟ್ಟಿಪಟ್ಟು 4ನೇ ರೈಲ್ವೆ ಮಾರ್ಗ
ಮೆಟ್ರೋ ಮತ್ತು ಡಿಸ್ಕವರಿ ಕ್ಯಾಂಪಸ್ ಜೊತೆಗೆ ಚೆನ್ನೈ ಬೀಚ್ ಮತ್ತು ಅಟ್ಟಿಪಟ್ಟು ನಡುವಿನ ನಾಲ್ಕನೇ ರೈಲ್ವೆ ಮಾರ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಚೆನ್ನೈ ಮತ್ತು ತಿರುವಳ್ಳೂರ್ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ 22.1 ಕಿಲೋ ಮೀಟರ್ ದೂರದ ರೈಲ್ವೆ ಯೋಜನೆಯ ಅಂದಾಜು ಮೊತ್ತವೇ 293.40 ಕೋಟಿ ರೂಪಾಯಿ ಆಗಿದೆ.
ಭಾರತದ ಯಾವುದೇ ಮೀನುಗಾರರು ಶ್ರೀಲಂಕಾ ವಶದಲ್ಲಿಲ್ಲ
ತಮಿಳು ಹಕ್ಕುಗಳ ವಿಷಯಕ್ಕೆ ಬಂದಾಗ ಕೇಂದ್ರ ಸರ್ಕಾರವು ಸದಾ ತನ್ನ ನಿಲುವಿಗೆ ಬದ್ಧವಾಗಿರುತ್ತದೆ. ನಾವು ಸಮಾನತೆ, ಶಾಂತಿ, ನ್ಯಾಯ ಹಾಗೂ ಗೌರವದಿಂದ ಬದುಕಲು ಬಯಸುತ್ತಾರೆ ಎಂದ ಸಂದೇಶವನ್ನು ಅವರಿಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತೇವೆ. ಪ್ರಸ್ತುತ ಭಾರತದ ಒಬ್ಬರೇ ಒಬ್ಬ ಮೀನುಗಾರರು ಶ್ರೀಲಂಕಾದ ವಶದಲ್ಲಿಲ್ಲ. 313 ಹಡಗುಗಳನ್ನು ಬಿಡುಗಡೆಗೊಳಿಸಲಾಗಿದೆ, ಇದೇ ಕಾರ್ಯದಲ್ಲಿ ಸರ್ಕಾರವು ತೊಡಗಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.