ಪೇರರಿವಾಳನ್ ಬಿಡುಗಡೆ: ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಸ್ಟಾಲಿನ್
ಚೆನ್ನೈ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಎ.ಜಿ. ಪೇರರಿವಾಳನ್ರನ್ನು ಸುಪ್ರೀಂ ಕೋರ್ಟ್ ಬಿಡಗಡೆ ಮಾಡಿರುವ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸ್ವಾಗತಿಸಿದ್ದು, ಈ ತೀರ್ಪು ರಾಜ್ಯ ಸರ್ಕಾರದ ಹಕ್ಕನ್ನು ಗುರುತಿಸಿದೆ ಎಂದು ಹೇಳಿದ್ದಾರೆ.
ಈ ತೀರ್ಪು ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯ ಸ್ವಾಯತ್ತತೆಯ ತತ್ವಗಳಿಗೆ ಸಿಕ್ಕಂತಹ ಬಹುದೊಡ್ಡ ಜಯವಾಗಿದೆ ಎಂದು ಅವರು ಸ್ಟಾಲಿನ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿಗೂ ಮುನ್ನ ಪೆರಾರಿವಾಲನ್ ಪ್ರಕರಣದ ವಿಚಾರಣೆಯನ್ನು ನೆನಪಿಸಿಕೊಂಡ ಸ್ಟಾಲಿನ್, ರಾಜ್ಯ ಸರ್ಕಾರಕ್ಕೆ ಈ ವಿಷಯದ ಮೇಲೆ ವಾದ ಮಾಡುವ ಹಕ್ಕುಗಳನ್ನು ಹೊಂದಿತ್ತು. ಐಪಿಸಿ ಸೆಕ್ಷನ್ 302 ಸಂವಿಧಾನದ ರಾಜ್ಯಪಟ್ಟಿಯಲ್ಲಿ ಒಳಗೊಂಡಿರುವ ಸಾರ್ವಜನಿಕ ಆದೇಶದ ಅಡಿಯಲ್ಲಿ ಬರುವುದಿರಂದ ಪೇರರಿವಾಳನ್ ಅವರನ್ನು ಬಿಡುಗಡೆ ಮಾಡುವ ಅಧಿಕಾರವಿದೆ ಎಂದು ಸರ್ಕಾರ ವಾದಿಸಿದೆ ಎಂದು ತಿಳಿಸಿದ್ದಾರೆ.
ರಾಜೀವ್ಗಾಂಧಿ ಹಂತಕರ ಬಿಡುಗಡೆಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಪೇರರಿವಾಲನ್ ಬಿಡುಗಡೆಯನ್ನು ಸ್ವಾಗತಿಸಿದ ಸ್ಟಾಲಿನ್, ರಾಜ್ಯ ಸರ್ಕಾರದ ನೀತಿ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವ ಹಕ್ಕು ರಾಜ್ಯಪಾಲರಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟಪಡಿಸಿದೆ. ಇದು ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಅಲ್ಲದೆ, ರಾಜ್ಯಪಾಲರು ಕ್ರಮಕೈಗೊಳ್ಳದಿದ್ದರೆ ನ್ಯಾಯಾಲಯ ಮಧ್ಯಪ್ರವೇಶಿಸಲಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದ್ದು, ಇಂತಹ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಬಾಗಿಲು ಬಡಿಯುವ ಅಗತ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯ ಬಿಡುಗಡೆಗೆ ಕಾಂಗ್ರೆಸ್ ಪ್ರತಿಕ್ರಿಯೆ
ಪೇರಾರಿವಾಳನ್ಗೆ ಶುಭಕೋರಿದ ಸಿಎಂ
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಪೇರರಿವಾಳನ್ ಮನೆಗೆ ಬೇಟಿ ನೀಡಿದ್ದಾರೆ. 31 ವರ್ಷಗಳ ತಮ್ಮ ಯೌವನವನ್ನು ಜೈಲಿನಲ್ಲೇ ಕಳೆದಿರುವ ಪೇರರಿವಾಳನ್ ಅವರಿಗೆ ಕೊನೆಗೂ ಸ್ವಾತಂತ್ರ್ಯ ಲಭಿಸಿದೆ. ಈ ಸಂದರ್ಭದಲ್ಲಿ ಅವರಿಗೆ ಶುಭಾಶಯ ತಿಳಿಸಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ,
ತನ್ನ ಮಗನ ಬಿಡುಗಡೆಗಾಗಿ ಸುದೀರ್ಘ ಹೋರಾಟ ನಡೆಸಿದ ಪೇರರಿವಾಳನ್ ತಾಯಿಯನ್ನು ಶ್ಲಾಘಿಸಿದ ಸ್ಟಾಲಿನ್, ಆಕೆ ತಾಯ್ತನವನ್ನು ಸಾಬೀತುಪಡಿಸಿದ್ದಾರೆ. ನಿಜವಾದ ಕಣ್ಣೀರಿಗೆ ನ್ಯಾಯ ಸಿಗಲಿದೆ ಎಂದು ಈ ಘಟನೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಇವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಎಐಡಿಎಂಕೆಯಿಂದಲೂ ಬಿಡುಗಡೆಗೆ ಶಿಫಾರಸ್ಸು
ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಆರೋಪಿಗಳನ್ನು ಬಿಡುಗಡೆ ಮಾಡಬೇಕೆಂಬುದು ಡಿಎಂಕೆ ಮತ್ತು ಎಐಡಿಎಂಕೆ ನಡುವಿನ ಪ್ರ,ಮುಖ ರಾಜಕೀಯ ವಿಷಯಗಳಲ್ಲಿ ಒಂದಾಗಿತ್ತು. ಹಾಗಾಗಿ 2018ರಲ್ಲಿ ಮುಖ್ಯಯಮಂತ್ರಿಯಾಗಿದ್ದ ಪಳನಿಸ್ವಾಮಿ ಅವರ ಸಂಪುಟ ಅಪರಾಧಿಗಳ ಬಿಡುಗಡೆ ಶಿಪಾರಸು ಮಾಡಿತ್ತು. ಆದರೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ಗೆ ನೀಡಲಾಗಿರುವ ಪರಮಾಧಿಕಾರವನ್ನು ಚಲಾಯಿಸಿ ನ್ಯಾಯಾಮೂರ್ತಿಗಳು ಪೇರರಿವಾಳನ್ರನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದರು.
ಬಂಧನಕ್ಕೆ ಕಾರಣ
ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಹತ್ತೊಂಬತ್ತು ವರ್ಷ ವಯಸ್ಸಿನವನಾಗಿದ್ದ ಪೇರರಿವಾಳನ್ ರಾಜೀವ್ ಹತ್ಯೆಯ ಮಾಸ್ಟರ್ಮೈಂಡ್ನ ಎಲ್ಟಿಟಿಇ ವ್ಯಕ್ತಿ ಶಿವರಸನ್ಗಾಗಿ ಎರಡು 9-ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ್ದನೆಂದು ಆರೋಪಿಸಲಾಗಿತ್ತು. ರಾಜೀವ್ ಗಾಂಧಿ ಹತ್ಯೆಗೆ ಬಳಸಿದ್ದ ಬಾಂಬ್ ನಲ್ಲಿ ಈ ಬ್ಯಾಟರಿಗಳನ್ನು ಉಪಯೋಗಿಸಲಾಗಿತ್ತು. ಹಾಗಾಗಿ 1991 ಜೂನ್ 19ರಂದು ಬಂಧಿಸಲಾಗಿತ್ತು. 1998 ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಪೆರಾರಿವಾಲನ್ಗೆ ಮರಣದಂಡನೆ ವಿಧಿಸಿತು. ಮುಂದಿನ ವರ್ಷ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದರೆ 2014ರಲ್ಲಿ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಈ ವರ್ಷದ ಮಾರ್ಚ್ನಲ್ಲಿ, ಉನ್ನತ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.
ಬ್ಯಾಸ್ಟ್ನಲ್ಲಿ ಮೃತಪಟ್ಟ ಕುಟುಂಬ ಆಕ್ರೋಶ
ಪೇರರಿವಾಳನ್ ಬಿಡುಗಡೆಯನ್ನು ಇಡೀ ತಮಿಳುನಾಡು ಸಂಭ್ರಮಿಸುತ್ತಿದೆ. ಆದರೆ ಈ ಘಟನೆಯಲ್ಲಿ ರಾಜೀವ್ ಗಾಂಧಿ ಜೊತೆ ಬ್ಲಾಸ್ಟ್ನಲ್ಲಿ ಮೃತಪಟ್ಟ ಮಾಜಿ ಕಾಂಗ್ರೆಸ್ ಎಂಎಲ್ಸಿ ಲೀಗ್ ಮುನ���ಸ್ವಾಮಿ ಅವರ ಮಗ ಮೋಹನ್ ಸುಪ್ರೀಂ ಕೋರ್ಟ್ ತೀರ್ಪಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೊಲೆಗಾರನನ್ನು ಬಿಡುಗಡೆ ಮಾಡಿದ್ದಾರೆ. ಇದರರ್ಥ ಅವರು ಪ್ರಕರಣದ ಎಲ್ಲಾ ಅಪರಾಧಿಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆಯೇ? ದೇಶದ ಪ್ರಧಾನಿಯನ್ನು ಕೊಂದಿದ್ದ, ಅವರು ತಮ್ಮ ಬಿಡುಗಡೆ ಸಂಭ್ರಮವನ್ನು ಸಿಹಿ ಹಂಚಿ ಆಚರಿಸುತ್ತಿದ್ದಾರೆ. ಇದು ದೇಶಕ್ಕೆ ಅವಮಾನ. ಈ ಏಳುಜನ ಮಾತ್ರ ತಮಿಳಿಗರಾ? ಅಂದು ಸತ್ತವರು ತಮಿಳಿಗರಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.