"ತಮಿಳುನಾಡು ಸಂಸ್ಕೃತಿ ಬಗ್ಗೆ ಕೇಂದ್ರಕ್ಕೆ ಕಿಂಚಿತ್ತೂ ಗೌರವವಿಲ್ಲ, ಆದರೂ..."
ಚೆನ್ನೈ, ಮಾರ್ಚ್ 01: ಮೋದಿ ಹೇಳಿದಂತೆ ತಮಿಳುನಾಡು ಸಿಎಂ ಪಳನಿಸ್ವಾಮಿ ಕುಣಿಯುತ್ತಿದ್ದಾರೆ. ಮೋದಿ ನಿರ್ದೇಶನದಂತೆ ಕೆಲಸ ಮಾಡುತ್ತಾ ರಾಜ್ಯವನ್ನೇ ಮರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪಳನಿಸ್ವಾಮಿ ವಿರುದ್ಧ ಟೀಕೆ ಮಾಡಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿ, ಸೋಮವಾರ ಕನ್ಯಾಕುಮಾರಿಯಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಟೀಕಿಸಿ, "ತಮಿಳುನಾಡು ಸಂಸ್ಕೃತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತು ಗೌರವವೂ ಇಲ್ಲ. ಆದರೂ ಸಿಎಂ ಮೋದಿ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ" ಎಂದು ದೂರಿದರು. ಮುಂದೆ ಓದಿ...
"ತಮಿಳಿನ ಇತಿಹಾಸ ಭಾರತದ ಇತಿಹಾಸವಲ್ಲವೇ?"
ತಮಿಳುನಾಡು ಸಂಸ್ಕೃತಿಗೆ ಅವಮಾನ ಮಾಡಿರುವ ಆರ್ಎಸ್ಎಸ್ ನಾಯಕರನ್ನು ರಾಜ್ಯದ ಮುಖ್ಯಮಂತ್ರಿಯಾದವರು ಸುಮ್ಮನೆ ಬಿಡಬಾರದಿತ್ತು. ಮೋದಿ ಯಾವಾಗಲೂ, ಏಕ ರಾಷ್ಟ್ರ, ಏಕ ಸಂಸ್ಕೃತಿ, ಏಕೈಕ ಇತಿಹಾಸ ಎಂದು ಹೇಳುತ್ತಿರುತ್ತಾರೆ. ತಮಿಳು ಭಾರತೀಯ ಭಾಷೆಯಲ್ಲವೇ? ತಮಿಳಿನ ಇತಿಹಾಸ ಭಾರತದ ಇತಿಹಾಸ ಎನಿಸಿಕೊಳ್ಳುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?
"ಕೇಂದ್ರಕ್ಕೆ ತಮಿಳರ ಸಂಸ್ಕೃತಿ ಬಗ್ಗೆ ಗೌರವವಿಲ್ಲ"
ದೆಹಲಿಯಲ್ಲಿ ಕುಳಿತಿರುವ ಸರ್ಕಾರಕ್ಕೆ ತಮಿಳರ ಸಂಸ್ಕೃತಿ ಬಗ್ಗೆ ಗೌರವವಿಲ್ಲ. ಅವರು ಹೇಳಿದ ಹಾಗೆ ಕೇಳುವ ಸಿಎಂಗಳು ಅವರ ಬಳಿ ಇದ್ದಾರೆ. ತಮಿಳುನಾಡು ಸಿಎಂ ಪಳನಿಸ್ವಾಮಿ ಕೂಡ ರಾಜ್ಯವನ್ನು ಪ್ರತಿನಿಧಿಸುತ್ತಿಲ್ಲ. ಮೋದಿ ಹೇಳಿದ್ದನ್ನಷ್ಟೇ ಅವರು ಪ್ರತಿನಿಧಿಸುತ್ತಿದ್ದಾರೆ. ಮೋದಿ ಮುಂದಷ್ಟೇ ತಲೆಬಾಗುವ ಸಿಎಂ ತಮಿಳುನಾಡನ್ನು ಪ್ರತಿನಿಧಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಕಾಮರಾಜ್ ಕಾರ್ಯ ಸ್ಮರಿಸಿದ ರಾಹುಲ್ ಗಾಂಧಿ
ಮೆರವಣಿಗೆಯಲ್ಲಿ ತಮಿಳುನಾಡು ಮಾಜಿ ಸಿಎಂ ಕುಮಾರಸ್ವಾಮಿ ಕಾಮರಾಜ್ ಅವರ ನಾಯಕತ್ವ ಗುಣ, ರಾಜ್ಯದ ಕಲ್ಯಾಣದೆಡೆಗೆ ಅವರಿಗಿದ್ದ ಬದ್ಧತೆಯನ್ನು ಸ್ಮರಿಸಿಕೊಂಡ ರಾಹುಲ್ ಗಾಂಧಿ, ತಮಿಳುನಾಡಿನ ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು, ನೌಕರರ ಕಲ್ಯಾಣಕ್ಕೆ ದುಡಿಯುವ ಸರ್ಕಾರವನ್ನು ಕಾಂಗ್ರೆಸ್ ಎದುರು ನೋಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಬಲಪಡಿಸುವ ರಾಹುಲ್, ಪ್ರಿಯಾಂಕ ಪ್ರಯತ್ನವೆಲ್ಲಾ ನೀರಲ್ಲಿ ಹೋಮ!
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಚುನಾವಣೆ
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ಚಟುವಟಿಕೆಗಳು ಬಿರುಸುಗೊಂಡಿವೆ. ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ 12ನೇ ಮಾರ್ಚ್ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಹಾಗೂ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟಗಳು ಪ್ರಮುಖವಾಗಿ ಸೆಣಸಾಟ ನಡೆಸುವ ನಿರೀಕ್ಷೆಯಿದೆ. ಕಮಲ ಹಾಸನ್ ಅವರ ಪಕ್ಷ ಸೇರಿದಂತೆ ಇತರೆ ಪಕ್ಷಗಳೂ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.