ನಿಮ್ಮ ಬಳಿ ಹೇಳಿಕೊಳ್ಳಲು ಇನ್ನೇನು ಉಳಿದುಕೊಂಡಿದೆ?; ವಿಪಕ್ಷಗಳಿಗೆ ಮೋದಿ ಪ್ರಶ್ನೆ
ಚೆನ್ನೈ, ಮಾರ್ಚ್ 30: ಇನ್ನು ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮಿಳುನಾಡಿಗೆ ಆಗಮಿಸಿ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದರು.
ಧರ್ಮಾಪುರಂನ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಂಜಿಆರ್ ಹಾಗೂ ಜಯಲಲಿತಾ ಅವರ ಪರಂಪರೆಯನ್ನು ಸ್ಮರಿಸುತ್ತಾ, ಡಿಎಂಕೆ, ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು. ತಮಿಳುನಾಡಿನಲ್ಲಿ ವ್ಯವಹಾರ ಕ್ಷೇತ್ರವು ಅಭಿವೃದ್ಧಿಯಾಗದೇ ಇರಲು ಕಾಂಗ್ರೆಸ್ ಹಾಗೂ ಡಿಎಂಕೆ ಕಾರಣ. ಈ ಪಕ್ಷಗಳು ಹಣ ಮಾಡುವ ಕೆಲಸದಲ್ಲೇ ನಿರತವಾಗಿವೆ ಹೊರತು ಜನರ ಏಳಿಗೆ ಅವರಿಗೆ ಬೇಕಿಲ್ಲ ಎಂದು ದೂರಿದರು. ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೂ ಡಿಸಿಎಂ ಪನ್ನೀರ್ಸೆಲ್ವಂ ಅವರು ಮೋದಿ ಅವರೊಂದಿಗೆ ಭಾಗವಹಿಸಿದ್ದರು.
'ಗೋ ಬ್ಯಾಕ್ ಮೋದಿ' ಪ್ರತಿಭಟನೆ: 60 ಪ್ರತಿಭಟನಾಕಾರರು ವಶಕ್ಕೆ
ಇದೇ ಸಂದರ್ಭ ಮೋದಿ ಭೇಟಿ ವಿರೋಧಿಸಿ ಕೊಯಮತ್ತೂರಿನಲ್ಲಿ 'ಗೋ ಬ್ಯಾಕ್ ಮೋದಿ' ಫಲಕ ಹಿಡಿದು ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ನಡೆಸಿದ ಸಂಗತಿಯೂ ನಡೆಯಿತು. ಮುಂದೆ ಓದಿ...
"ಜಯಲಲಿತಾ ಅವರ ಆಲೋಚನೆ ಸ್ಫೂರ್ತಿ"
ಎಂಜಿಆರ್ ಹಾಗೂ ಜಯಲಲಿತಾ ಅವರ ಆಲೋಚನೆಗಳಿಂದ ಸ್ಫೂರ್ತಿ ಪಡೆಯಬೇಕು ಎಂದ ಪ್ರಧಾನಿ ಮೋದಿ, ರೈತರು, ಯುವಜನತೆ ಹಾಗೂ ತಮಿಳುನಾಡಿನ ಮಹಿಳೆಯರನ್ನು ಸಶಕ್ತಗೊಳಿಸಬೇಕು ಎಂದು ಹೇಳಿದರು. ಇದಕ್ಕಾಗಿ ಬಿಜೆಪಿ ಶ್ರಮಿಸುತ್ತಿದೆ. ತಮಿಳುನಾಡಿನ ವಿಶೇಷ ಸಂಸ್ಕೃತಿಯನ್ನು ಕೇಂದ್ರ ಗೌರವಿಸುತ್ತದೆ. ಇಲ್ಲಿನ ಜನರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಉದ್ದೇಶ ಹೊಂದಿದೆ ಎಂದು ಹೇಳಿದರು.
"ಸುಳ್ಳು ಹರಡಿಸುವುದಷ್ಟೇ ಈ ಪಕ್ಷಗಳ ಕೆಲಸ"
ಎನ್ಡಿಎ ಸರ್ಕಾರಕ್ಕೆ ಅಭಿವೃದ್ಧಿಯ ಕಾರ್ಯಸೂಚಿಯಿದೆ. ಆದರೆ ಡಿಎಂಕೆ ಕಾಂಗ್ರೆಸ್ಗೆ ತಮ್ಮ ಕುಟುಂಬ ರಾಜಕಾರಣದ ಕಾರ್ಯಸೂಚಿಯಿದೆ. ಈ ಎರಡೂ ಪಕ್ಷಗಳು ಕುಟುಂಬ ರಾಜಕಾರಣವನ್ನು ನಡೆಸುತ್ತಿವೆ. ಈ ಪಕ್ಷದ ನಾಯಕರ ಭಾಷಣದಲ್ಲಿ ಯಾವುದೇ ಧನಾತ್ಮಕ ಅಂಶಗಳಿಲ್ಲ. ತಮ್ಮ ದೃಷ್ಟಿಕೋನ ಹಾಗೂ ಕೆಲಸದ ಕುರಿತು ಮಾತನಾಡಲು ಅವರ ಬಳಿ ಏನೂ ಇಲ್ಲ. ಮತ್ತೊಬ್ಬರನ್ನು ಕಳಕ್ಕಿಳಿಸಲು ಸುಳ್ಳುಗಳನ್ನು ಹಬ್ಬಿಸುವುದಷ್ಟೇ ಅವರ ಕೆಲಸವಾಗಿದೆ ಎಂದು ದೂರಿದರು.
'ನಿಮ್ಮ ಲಾಠಿಗಳಿಗೆ ನಾವು ಹೆದರುವುದಿಲ್ಲ': ಕೇರಳದಲ್ಲಿ ಮೋದಿ ಹೇಳಿಕೆ
"ತಮಿಳುನಾಡಿನ ಸಂಸ್ಕೃತಿ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ"
ತಮಿಳುನಾಡಿನಲ್ಲಿ ಸಂಪರ್ಕವನ್ನು ಉತ್ತಮಗೊಳಿಸುವ ಹಾಗೂ ಅವಕಾಶಗಳನ್ನು ಸೃಷ್ಟಿಸುವ ಕೆಲಸವನ್ನು ಎಐಎಡಿಎಂಕೆ ಹಾಗೂ ಬಿಜೆಪಿ ಸರ್ಕಾರ ಮಾಡುತ್ತದೆ ಎಂದು ಹೇಳಿದರು. ತಮಿಳುನಾಡಿನ ಸಂಸ್ಕೃತಿ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ವಿಶ್ವ ಸಂಸ್ಥೆಯಲ್ಲಿ ಅತ್ಯಂತ ಪುರಾತನ ಭಾಷೆ ತಮಿಳಿನ ಕೆಲವು ಪದಗಳನ್ನು ಮಾತನಾಡುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಒಂದು ಸಂತೋಷದ ಕ್ಷಣ ಎಂದು ಹೇಳಿದರು.
Recommended Video
ಏಪ್ರಿಲ್ 6ರಿಂದ ಚುನಾವಣೆ
ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಹಾಗೂ ಡಿಎಂಕೆ ಕಾಂಗ್ರೆಸ್ ಮೈತ್ರಿಕೂಟದ ನಡುವೆ ಜಿದ್ದಿನ ಹಣಾಹಣಿ ಇದೆ. ಬಿಜೆಪಿ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎಐಎಡಿಎಂಕೆ 178 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ.