"ನನಗಷ್ಟೇ ಈ ನೋವು ಗೊತ್ತು"; ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್
ಚೆನ್ನೈ, ಡಿಸೆಂಬರ್ 29: ಕೆಲವೇ ದಿನಗಳಲ್ಲಿ ತಮ್ಮ ಪಕ್ಷದ ಹೆಸರು, ಚಿಹ್ನೆ ಘೋಷಿಸುವ ತಯಾರಿಯಲ್ಲಿದ್ದ ನಟ ರಜನಿಕಾಂತ್, ತಮ್ಮ ರಾಜಕೀಯ ಪ್ರವೇಶದ ಕುರಿತು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಆರೋಗ್ಯದ ಹಿತದೃಷ್ಟಿಯಿಂದ ತಾವು ರಾಜಕೀಯದಿಂದ ಹಿಂದೆ ಸರಿಯುತ್ತಿರುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ.
ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಡಿಸೆಂಬರ್ 31ರಂದು ಅಧೀಕೃತವಾಗಿ ಘೋಷಿಸುವುದಾಗಿ ಟ್ವೀಟ್ ಮೂಲಕವೇ ತಿಳಿಸಿದ್ದಾರೆ. ಇದೇ ಜನವರಿಯಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸುವುದಾಗಿ ಈ ಹಿಂದೆ ರಜನಿಕಾಂತ್ ತಿಳಿಸಿದ್ದು, ಈಗ ಹಿಂದೆ ಸರಿದಿರುವುದು ಅಭಿಮಾನಿಗಳಲ್ಲಿ ನಿರಾಸೆ ತಂದಿದೆ. ಮುಂದೆ ಓದಿ...
"ದೇವರಿಂದ ಬಂದ ಎಚ್ಚರಿಕೆ"
ರಾಜಕೀಯದಿಂದ ತಾವು ಹಿಂದೆ ಸರಿಯುತ್ತಿರುವುದರ ಕುರಿತು ಮಂಗಳವಾರ ಬೆಳಿಗ್ಗೆ ಮೂರು ಪುಟಗಳ ಸುದೀರ್ಘ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಕುರಿತು ಕ್ಷಮೆಯನ್ನೂ ಕೇಳಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಎಂಟ್ರಿ ಇಲ್ಲ
"ಈ ನೋವು ನನಗೆ ಮಾತ್ರ ಗೊತ್ತು"
ತಮ್ಮ ರಾಜಕೀಯ ಪ್ರವೇಶ ಹಿಂಪಡೆಯುವ ಕುರಿತ ಘೋಷಣೆ ಮಾಡಿದ್ದು, "ನನ್ನ ಈ ನಿರ್ಧಾರವನ್ನು ಘೋಷಿಸುವಾಗಿನ ನೋವು ನನಗೆ ಮಾತ್ರ ಗೊತ್ತು" ಎಂದು ಭಾವುಕರಾಗಿ ಮಾತನಾಡಿದ್ದಾರೆ. ಆದರೆ, ಚುನಾವಣೆ, ರಾಜಕೀಯದ ಹೊರತಾಗಿಯೂ ನನ್ನ ಜನರ ಸೇವೆಯನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಜನವರಿಯಲ್ಲಿ ಪಕ್ಷದ ಹೆಸರು ಘೋಷಣೆಯಾಗಬೇಕಿತ್ತು
ಈಚೆಗೆ ತಮ್ಮ ರಾಜಕೀಯ ಪ್ರವೇಶದ ಕುರಿತು ಘೋಷಣೆ ಮಾಡಿದ್ದ ನಟ ರಜನಿಕಾಂತ್, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಇದೇ ಜನವರಿ 2021ಕ್ಕೆ ತಮ್ಮ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಘೋಷಿಸುವುದಾಗಿ ತಿಳಿಸಿದ್ದರು. ಈ ನಡುವೆ ನಟ ಕಮಲ್ ಹಾಸನ್ ಹಾಗೂ ರಜನಿಕಾಂತ್ ಮೈತ್ರಿ ಸುದ್ದಿಯೂ ಕೇಳಿಬಂದಿತ್ತು.
ಕೊರೊನಾ ಸಾಧ್ಯತೆಯಿಂದ ದೂರವುಳಿಯಲು ಸಲಹೆ
ಅಣ್ಣಾತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ಅವರಲ್ಲಿ ಇದ್ದಕ್ಕಿದ್ದಂತೆ ರಕ್ತದೊತ್ತಡ ಏರಿಳಿತವಾದ ಹಿನ್ನೆಲೆ ಕಳೆದ ಶುಕ್ರವಾರ ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಡಿ. 27ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಅವರ ಆರೋಗ್ಯ ಸ್ಥಿರವಾಗಿರುವ ಕುರಿತು ವೈದ್ಯರು ಹೇಳಿಕೆ ನೀಡಿದ್ದು, ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದರು. ರಕ್ತದೊತ್ತಡದ ಕುರಿತು ನಿಗಾ ಇಡಲು ಆಗೂ ಕೊರೊನಾ ಸೋಂಕು ತಗುಲುವ ಸಾಧ್ಯತೆಯಿರುವ ಚಟುವಟಿಕೆಗಳಿಂದ ದೂರವುಳಿಯುವಂತೆ ಸಲಹೆ ನೀಡಿದ್ದರು.
ಕ್ಷಮೆ ಕೇಳಿದ ನಟ
ತಮಗೆ ಆರೋಗ್ಯ ಸಮಸ್ಯೆಯಿದ್ದರೂ ತಮಿಳುನಾಡಿನ ಜನರಿಗಾಗಿ ತಾವು ರಾಜಕೀಯ ಪ್ರವೇಶಿಸುವುದಾಗಿ ಈ ಹಿಂದೆ ರಜನಿಕಾಂತ್ ಹೇಳಿದ್ದರು. ತಮಿಳುನಾಡಿನಲ್ಲಿ ಬದಲಾವಣೆ ತರುತ್ತೇನೆ. ಜನರು ನನ್ನ ಜತೆ ನಿಲ್ಲಬೇಕು ಎಂದು ರಜನಿಕಾಂತ್ ಮನವಿ ಮಾಡಿದ್ದರು. ಈಗ ತಾವು ಈ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದು, ಈ ನಿರ್ಧಾರಕ್ಕೆ ಜನರು ಹಾಗೂ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.