ಹಿಂದಿ ಹೇರಿಕೆ ಒಪ್ಪಲ್ಲ: ಸೂಪರ್ ಸ್ಟಾರ್ ರಜನಿಕಾಂತ್ ಖಡಕ್ ಮಾತು
ಚೆನ್ನೈ, ಸೆಪ್ಟೆಂಬರ್ 18: ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಕ್ರೋಶ ಹುಟ್ಟಿಸಿರುವ ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.
"ಯಾವ ಭಾಷೆಯನ್ನೂ ಒತ್ತಾಯದಿಂದ ಹೇರುವುದಕ್ಕೆ ಸಾಧ್ಯವಿಲ್ಲ. ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳು ದೇಶದಲ್ಲಿ ಒಂದೇ ಭಾಷೆ ಇರಬೇಕು ಎಂಬ ಸಿದ್ಧಾಂತವನ್ನು ಒಪ್ಪುವುದಿಲ್ಲ" ಎಂದು ರಜನಿಕಾಂತ್ ಹೇಳಿದ್ದಾರೆ.
ದೇಶವನ್ನು ಪ್ರೀತಿಸಿದವರು ಹಿಂದಿ ವಿರೋಧಿಸುತ್ತಾರೆ: ಬಿಜೆಪಿ ಸಿಎಂ ವಿವಾದ
"ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಯೋಚಿಸಿದರೆ ಒಂದು ಸಾರ್ವತ್ರಿಕ ಭಾಶಃಎ ಒಳ್ಳೆಯದು. ಆದರೆ ಭಾರತದಲ್ಲಿ ಹಾಗೆ ಮಾಡುವುದಕ್ಕಾಗುವುದಿಲ್ಲ. ಇಲ್ಲಿ ಬೇರೆ ಬೇರೆ ರಾಜ್ಯಗಳು ತಮ್ಮದೇ ಆದ ಭಾಷೆಯನ್ನು ಹೊಂದಿವೆ" ಎಂದು ರಜನೀಕಾಂತ್ ಹೇಳಿದ್ದಾರೆ.
ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಆಚರಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, "ಒಂದು ದೇಶ, ಒಂದೇ ಭಾಷೆ" ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. ದಕ್ಷಿಣ ಭಾರತದ ಕೆಲವು ರಾಜ್ಯಗಳು ಹಿಂದಿ ಹೇರಿಕೆಯನ್ನು ಕಟುವಾಗಿ ವಿರೋಧಿಸಿದ್ದವು.
ಹಿಂದಿ ಹೇರಿಕೆ: ಯಡಿಯೂರಪ್ಪ ಹೇಳಿಕೆಗೆ ಅಮಿತ್ ಶಾ ಚೆಕ್ ಮೇಟ್!
ಹಿಂದಿ ಹೇರಿಕೆಯನ್ನು ಇತ್ತೀಚೆಗೆ ವಿರೋಧಿಸಿದ್ದ ತಮಿಳು ನಟ, ಎಂಎನ್ ಎಂ ಪಕ್ಷದ ಮುಖಂಡ ಕಮಲ್ ಹಾಸನ್, 'ವಿವಿಧತೆಯಲ್ಲಿ ಏಕತೆ ಎಂಬ ಪ್ರಮಾಣವನ್ನು ನಾವು ಭಾರತ ಸ್ವಾತಂತ್ರ್ಯ ದೇಶವಾದಾಗ ಮಾಡಿದ್ದೆವು, ಅದನ್ನು ಯಾವ ಶಾ, ಸುಲ್ತಾನನೂ ಬದಲಾಯಿಸಲು ಸಾಧ್ಯವಿಲ್ಲ' ಎಂಬ ಹೇಳಿಕೆ ನೀಡಿದ್ದರು.