ಟಿಟಿವಿ ದಿನಕರನ್ ಗೆ ಹಿನ್ನಡೆ, ವಿಶ್ವಾಸಮತ ಯಾಚನೆಗೆ ಹೈಕೋರ್ಟ್ ನಕಾರ
ಚೆನ್ನೈ, ಸೆಪ್ಟೆಂಬರ್ 14: ಸೆಪ್ಟೆಂಬರ್ 20ರವರಗೆ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಟಿಟಿವಿ ದಿನಕರನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ. ಇದರಿಂದ ಪಳನಿಸ್ವಾಮಿ ಸರಕಾರ ಕೆಳಗಿಳಲು ಕಾಯುತ್ತಿರುವ ಶಶಿಕಲಾ ಬಣದ ಟಿಟಿವಿ ದಿನಕರನ್ ಮತ್ತು ಡಿಎಂಕೆಗೆ ಮುಖಭಂಗವಾಗಿದೆ. ಹಾಗಂಥ ಇದೇ ಅಂತಿಮ ತೀರ್ಪಲ್ಲ.
ಬುಧವಾರವಷ್ಟೇ ಎಐಎಡಿಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಹಾಗೂ ಶಶಿಕಲಾರನ್ನು ಮುಖ್ಯಮಂಂತ್ರಿ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ಒಟ್ಟಾಗಿ ವಜಾ ಮಾಡಿದ್ದರು. ಇದೀಗ ಹೈಕೋರ್ಟ್ ಈ ಆದೇಶ ನೀಡಿದ್ದು ಇಬ್ಬರಿಗೂ ಮತ್ತೆ ಹಿನ್ನಡೆಯಾಗಿದೆ.
ದಿನಕರನ್ ತಮ್ಮ ಬಳಿ 20 ಶಾಸಕರಿದ್ದು ಸರಕಾರ ಇಳಿಸುವಷ್ಟು ಸಂಖ್ಯಾ ಬಲ ಇದೆ ಎಂದು ಹೇಳಿದ್ದಾರೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 117 ಶಾಸಕರ ಬೆಂಬಲ ಅಗತ್ಯವಾಗಿದೆ. ಎಐಎಡಿಎಂಕೆ ಬಳಿ 134 ಶಾಸಕರಿದ್ದಾರೆ. ಆದರೆ ತಮ್ಮ ಬಳಿ 20 ಶಾಸಕರಿದ್ದಾರೆ ಎಂದು ಟಿಟಿವಿ ಹೇಳಿರುವುದರಿಂದ ಸರಕಾರದ ಭವಿಷ್ಯ ಅತಂತ್ರವಾಗಿದೆ.