ತಮಿಳುನಾಡಿಗೆ ಲಂಕಾ ಬಾಂಬ್ ದಾಳಿಕೋರ ಉಗ್ರರ ನಂಟು?
ಚೆನ್ನೈ, ಜೂನ್ 13: ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನದಂದು ಚರ್ಚ್ ಹಾಗೂ ಹೋಟೆಲ್ಗಳಲ್ಲಿ ದಾಳಿ ನಡೆಸಿ 250ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣರಾದ ಆತ್ಮಾಹುತಿ ಬಾಂಬ್ ದಾಳಿಕೋರರೊಂದಿಗೆ ನಂಟು ಹೊಂದಿದ್ದ ಶಂಕಿತರು ತಮಿಳುನಾಡಿನಲ್ಲಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ವಿವಿಧೆಡೆ ಪತ್ತೆ ಕಾರ್ಯಾಚರಣೆ ನಡೆಸಿದರು.
ಕೊಯಮತ್ತೂರು ನಗರದ ಏಳು ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳ ತಂಡ ದಾಳಿಗಳನ್ನು ನಡೆಸಿ ಪರಿಶೀಲನೆ ಮಾಡಿತು. ಈಸ್ಟರ್ ಭಾನುವಾರ ದಾಳಿ ಮಾಡಿದ ಉಗ್ರರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಹೊಂದಿದ್ದ ಕೆಲವರು ನಗರದಲ್ಲಿ ಇದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಯಿತು.
ಈಸ್ಟರ್ ಸ್ಫೋಟ ನಂತರ ಶ್ರೀಲಂಕಾಗೆ ಭೇಟಿ ನೀಡಿದ ವಿಶ್ವದ ಮೊದಲ ನಾಯಕ ಮೋದಿ
ಐಸಿಸ್ ಭಯೋತ್ಪಾದನಾ ಸಂಘಟನೆಯೊಂದಿಗೆ ನಂಟು ಹೊಂದಿರುವ ವಿಚಾರವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಪರಿಶೀಲನೆ ಮುಂದುವರಿಸಲಾಗಿದೆ. ಎನ್ಐಎ ವಶಪಡಿಸಿಕೊಂಡ ದಾಖಲೆಗಳು ಮತ್ತು ಉಪಕರಣಗಳ ಕುರಿತು ವಿವರ ಲಭ್ಯವಾಗಿಲ್ಲ.
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ತಾನೇ ಹೊಣೆ ಎಂದು ಐಸಿಸ್ ಹೇಳಿಕೊಂಡಿತ್ತು. ಈ ದಾಳಿಯಲ್ಲಿ ಸುಮಾರು ಒಂಬತ್ತು ಆತ್ಮಾಹುತಿ ಬಾಂಬರ್ಗಳು ಕೃತ್ಯ ಎಸಗಿದ್ದರು.