ಪರಿಸರವಾದಿಗಳಿಗೆ ಹಿನ್ನಡೆ, ತೂತ್ತುಕುಡಿ ತಾಮ್ರ ಘಟಕಕ್ಕೆ ಗ್ರೀನ್ ಸಿಗ್ನಲ್
ನವದೆಹಲಿ/ಚೆನ್ನೈ, ಡಿಸೆಂಬರ್ 16: ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿದ್ದ ವೇದಾಂತ ಸಮೂಹಕ್ಕೆ ಸೇರಿದ ತೂತ್ತುಕುಡಿ ಸ್ಟರ್ಲೈಟ್ ಕಾಪರ್ ಕಾರ್ಖಾನೆ ಘಟಕಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ ಜಿಟಿ)ದಿಂದ ಹಸಿರು ನಿಶಾನೆ ಸಿಕ್ಕಿದೆ.
ತಾಮ್ರ ಘಟಕದಿಂದ ಪರಿಸರಕ್ಕೆ ಹಾನಿ ಎಂಬ ವಾದದಲ್ಲಿ ಹುರುಳಿಲ್ಲ ಎಂದು ಎನ್ ಜಿಟಿ ಮುಖ್ಯಸ್ಥ ಎಕೆ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ. ವೇದಾಂತ ಸಮೂಹ ಸಂಸ್ಥೆಗೆ ಮೂರು ವಾರದೊಳಗೆ ಹೊಸ ಲೈಸನ್ಸ್ ನವೀಕರಣ ನೀಡಬೇಕೆಂದು ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿಗೆ ಸೂಚಿಸಿದ್ದಾರೆ.
ಘಟಕವಿರುವ ಪ್ರದೇಶದಲ್ಲಿ ಅಭಿವೃದ್ಧಿಗಾಗಿ 100 ಕೋಟಿ ರುಗಳಿಗೂ ಅಧಿಕ ಮೊತ್ತವನ್ನು ವೇದಾಂತ ಸಂಸ್ಥೆ ವ್ಯಯಿಸಿದೆ. ಆಸ್ಪತ್ರೆ, ನೀರು ಪೂರೈಕೆ, ಆರೋಗ್ಯ ಕೇಂದ್ರ, ಕೌಶಲ್ಯ ಕೇಂದ್ರಗಳನ್ನು ನಡೆಸಲಾಗುತ್ತಿದೆ ಎಂದು ಎನ್ ಜಿಟಿ ತಿಳಿಸಿದೆ.
13 ರೈತರನ್ನು ಬಲಿ ಪಡೆದಿದ್ದ ತಾಮ್ರ ಘಟಕ ಬಂದ್ : ಇಪಿಎಸ್
ತಾಮ್ರ ಘಟಕದಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಘಟಕದ ಸುತ್ತಮುತ್ತ ವಾಸಿಸುವ ಗ್ರಾಮಗಳು ಜನರು ನಿರಂತರವಾಗಿ ಅನಾರೋಗ್ಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಘಟಕವನ್ನು ಸ್ಥಗಿತಗೊಳಿಸುವಂತೆ ಕಾನೂನು ಸಮರ ಮತ್ತು ಪ್ರತಿಭಟನೆಗಳು ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಲ್ಲಿನ ಜನತೆ, ತಾಮ್ರ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಯಿತು. ಪೊಲೀಸರ ಗುಂಡಿಗೆ 12 ಮಂದಿ ಬಲಿಯಾದ ಬಳಿಕ ರಾಷ್ಟ್ರೀಯ ಮಾಧ್ಯಮಗಳು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಾಧ್ಯಮಗಳೂ ಇತ್ತ ಗಮನ ಹರಿಸಿದ್ದವು.
ದೇಶದಾದ್ಯಂತ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತವಾಗುತ್ತಿದ್ದಂತೆಯೇ ತಮಿಳುನಾಡು ಸರ್ಕಾರ ಕೂಡ ಎಚ್ಚೆತ್ತುಕೊಂಡಿತು. ತಾಮ್ರ ಘಟಕ ವಿಸ್ತರಣೆಗೆ ಹೈಕೋರ್ಟಿನಿಂದ ಮಧ್ಯಂತರ ತಡೆ ಸಿಕ್ಕಿತ್ತು. ಇದಾದ ಬಳಿಕ ಸ್ಟರ್ಲೈಟ್ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರವು ಟಿಎನ್ ಪಿ ಸಿಬಿಗೆ ಆದೇಶ ನೀಡಿತ್ತು.