ತಮಿಳುನಾಡಿನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ
ತಮಿಳುನಾಡಿನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ ಬಾರಿಸಲಾಗುತ್ತದೆ. ಚೆನ್ನೈನಲ್ಲಿ ವ್ಯಾಸೋತ್ಸವ ಆಚರಿಸಲಾಗುತ್ತಿದ್ದು, ಮುಳಬಾಗಿಲು ಶ್ರೀಪಾದರಾಜರ ಮಠ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಟ್ರಸ್ಟ್ ನಿಂದ ಆಯೋಜನೆ
ಚೆನ್ನೈ, ಮಾರ್ಚ್ 18: ಮುಳಬಾಗಿಲು ಶ್ರೀಪಾದರಾಜರ ಮಠ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸೈನ್ಸ್ ಟ್ರಸ್ಟ್ ನಿಂದ ಆಯೋಜನೆಯಲ್ಲಿ ತಮಿಳುನಾಡಿನಲ್ಲಿ ಕನ್ನಡ ಹರಿದಾಸ ಸಾಹಿತ್ಯದ ಡಿಂಡಿಮ ಬಾರಿಸಲಾಗುತ್ತದೆ. ಚೆನ್ನೈನಲ್ಲಿ ವ್ಯಾಸೋತ್ಸವ ಆಚರಿಸಲಾಗುತ್ತಿದ್ದು, ಮಾರ್ಚ್ 21, 22ರಂದು ದಾಸ ಸಾಹಿತ್ಯದ ಅನುಭವ ಪಡೆದುಕೊಳ್ಳಬಹುದು.
ತಮಿಳುನಾಡಿನ ಶ್ರೀರಂಗಂನ ವ್ಯಾಸರಾಜ ಮಠದ ಚಂದ್ರಿಕಾ ಸಭಾಮಂಟಪದಲ್ಲಿ ಮಧ್ವರ ಬದರಿ ಪ್ರವೇಶ ಸಪ್ತಶತಮಾನೋತ್ಸವ ಹಾಗೂ ದ್ವೈತ ವಾಙ್ಮಯದ ಮೇರು ಕೃತಿ ಶ್ರೀ ಚಂದ್ರಿಕಾ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುತ್ತದೆ.
ವ್ಯಾಸರಾಜ ಗುರುಸಾರ್ವಭೌಮರು ಶ್ರೀರಂಗಂನಲ್ಲಿ ರಚಿಸಿ ಸಮರ್ಪಿಸಿದ ಸ್ಮರಣಾರ್ಥ ಮತ್ತು ಶ್ರೀಪಾದರಾಜ ಮಠದಿಂದ ಪ್ರಕಾಶನಗೊಂಡಿರುವ ಪರಿಪೂರ್ಣ ಚಂದ್ರಿಕಾ ಗ್ರಂಥದ ಕೊನೆಯ ಸಂಪುಟದ ಲೋಕಾರ್ಪಣೆಯ ಅಂಗವಾಗಿ ಮಾ. 21, 22 ಮತ್ತು 23ರಂದು ರಾಷ್ಟ್ರೀಯ ವ್ಯಾಸೋತ್ಸವ' ಆಯೋಜಿಸಿದೆ.
ಸಂಜೆ 5.00 ಗಂಟೆಗೆ ಶ್ರೀವ್ಯಾಸರಾಜ ಗ್ರಂಥ ಮತ್ತು ಚಿತ್ರಪಟವನ್ನು ಆನೆಯ ಮೇಲಿಟ್ಟು ರಂಗನಾಥಸ್ವಾಮಿ ದೇವಾಲಯದ ಮಹಾದ್ವಾರದಿಂದ ನಾಲ್ಕು ಚಿತ್ತರೈ ಬೀದಿಗಳ ಮೂಲಕ ವ್ಯಾಸರಾಜ ಮಠದವರೆಗೆ ಅದ್ದೂರಿ ಮೆರವಣಿಗೆ, ನಂತರ ಕೊವಿಲಡಿ ಮಧ್ವಪ್ರಸಾದ್ ಮತ್ತು ಶ್ರೀಮತಿ ಸರಸ್ವತಿ ಶ್ರೀಪತಿ ರವರಿಂದ ದಾಸ ಸಾಹಿತ್ಯ ಸಿರಿ - ಸಂಗೀತ ಝರಿ ಏರ್ಪಡಿಸಲಾಗಿದೆ.
ವಿದ್ವಾಂಸರಾದ ಪ್ರೊ. ವಿ.ಆರ್. ಪಂಚಮುಖಿ, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಡಾ.ಎ.ವಿ ನಾಗಸಂಪಿಗೆ ಅಧ್ಯಕ್ಷತೆಯಲ್ಲಿ ವ್ಯಾಸ ದಾಸ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ವಿವಿಧ ಗೋಷ್ಠಿ ನಡೆಯಲಿದೆ, ಮೂರು ದಿನವೂ ಸಂಜೆ ಸಂಗೀತ ವಿದ್ವಾಂಸರಿಂದ ದಾಸ ಸಾಹಿತ್ಯ ಸಂಗೀತ ಝರಿ ( ವ್ಯಾಸರಾಜರು ಮತ್ತು ಶ್ರೀಪಾದರಾಜರ ರಚನೆ ಆಧಾರಿತ ಕೃತಿ) ಆಯೋಜನೆಗೊಂಡಿದೆ.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಡಾ. ಎಚ್.ಸತ್ಯನಾರಾಯಣಾಚಾರ್, ಉತ್ತರಾದಿಮಠದ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ, ಮಂತ್ರಾಲಯ ಗುರುಸಾರ್ವಭೌಮ ಸಂಸ್ಕೃತಿ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ವಾದಿರಾಜಾಚಾರ್ಯ, ಮೈಸೂರಿನ ವಿದ್ವಾಂಸ ಡಾ.ಎನ್.ಕೆ.ರಾಮಶೇಷನ್, ಡಾ.ಅನಂತಪದ್ಮನಾಭರಾವ್, ಚತುರ್ವೇದಿ ವೇದವ್ಯಾಸಾಚಾರ್ಯ ಮತ್ತಿತರರು ಭಾಗವಹಿಸಲಿದ್ದಾರೆ. ರಾಜಲಕ್ಷ್ಮೀ ಪಾರ್ಥಸಾರಥಿ ಅಧ್ಯಕ್ಷತೆಯಲ್ಲಿ ಮಹಿಳಾ ಗೋಷ್ಠಿಯೂ ನಡೆಯಲಿದೆ.
ಭಾಗವಹಿಸಬಯಸುವ ಆಸಕ್ತರು ಹೆಚ್ಚಿನ ವಿವರಗಳಿಗೆ 9945781401 ಸಂಪರ್ಕಿಸಬಹುದು ಎಂದು ಆಯೋಜಕರಾದ ವಿದ್ವಾನ್ ಲಕ್ಷ್ಮೀನಾರಾಯಣಾಚಾರ್ಯರವರು ತಿಳಿಸಿದರು.