ಮೋದಿ ಪ್ರಧಾನಿಯಾಗಲು ಹಲವು ಬಿಜೆಪಿ ನಾಯಕರನ್ನು ಕಡೆಗಣಿಸಿದ್ದಾರೆ: ಸ್ಟಾಲಿನ್
ಚೆನ್ನೈ, ಮಾರ್ಚ್ 31: ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗುವ ಸಂದರ್ಭದಲ್ಲಿ ಸಾಕಷ್ಟು ಬಿಜೆಪಿ ನಾಯಕರುಗಳನ್ನು ಕಡೆಗಣಿಸಿದ್ದರು ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಪಕ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಪಕ್ಷದಲ್ಲಿದ್ದ ಹಲವು ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಮಹಿಳೆಯರನ್ನು ಅವಮಾನಿಸುವುದು ಕಾಂಗ್ರೆಸ್, ಡಿಎಂಕೆ ಸಂಸ್ಕೃತಿ: ಮೋದಿ
ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟಾಲಿನ್ ಮೋದಿ ಪ್ರಧಾನಿಯಾಗುವಾಗ ಎಲ್ಕೆ ಅಡ್ವಾಣಿ, ವೆಂಕಯ್ಯ ನಾಯ್ಡು, ಯಶ್ವಂತ್ ಸಿನ್ಹಾ ಅವರನ್ನು ಕಡೆಗಣಿಸಿ ತಾವು ಹುದ್ದೆಗೇರಿದ್ದರು. ಹಾಗೆಯೇ ನನಗೇನು ಮೋದಿಯ ಭಯವಿಲ್ಲ ಎಂದರು.
ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಹಾಗೂ ಡಿಎಂಕೆ ಕಾಂಗ್ರೆಸ್ ಮೈತ್ರಿಕೂಟದ ನಡುವೆ ಜಿದ್ದಿನ ಹಣಾಹಣಿ ಇದೆ. ಬಿಜೆಪಿ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎಐಎಡಿಎಂಕೆ 178 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ.
ನರೇದ್ರ ಮೋದಿ ಎನ್ಆರ್ಐ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಓರ್ವ ಎನ್ಆರ್ಐ ಪ್ರಧಾನಿ ಎಂದು ಉದಯನಿಧಿ ಜರಿದಿದ್ದಾರೆ, ಪಳನಿಸ್ವಾಮಿ ಹಾಗೂ ಪನ್ನೀರ್ಸೆಲ್ವಮ್ ಪ್ರಧಾನಿಯ ಸಹಾಯಕರಂತೆ ವರ್ತಿಸುತ್ತಿದ್ದಾರೆ ಎಂದರು.
ಉದಯನಿಧಿ ಸ್ಪರ್ಧಿಸುತ್ತಿರುವ ಕ್ಷೇತ್ರ
ಡಿಎಂಕೆ ಯೂಥ್ ವಿಂಗ್ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಚೆಪಾಕ್-ತಿರುವಳ್ಳಿಕೇನಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಡಿಎಂಕೆ ಹಿಡಿತವಿದೆ.
ಮಹಿಳೆಯರನ್ನು ಅವಮಾನಿಸುವುದು ಡಿಎಂಕೆ ಸಂಸ್ಕೃತಿ
ಮಹಿಳೆಯರನ್ನು ಅವಮಾನಿಸುವುದು ಕಾಂಗ್ರೆಸ್, ಡಿಎಂಕೆ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳೆಯರಿಗೆ ಅವಮಾನ ಮಾಡುವುದು, ಅಗೌರವದಿಂದ ವರ್ತಿಸುವುದು ಕಾಂಗ್ರೆಸ್ ಹಾಗೂ ಡಿಎಂಕೆ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಶಾಸಕ ಹಾಗೂ ಡಿಎಂಕೆ ಅಭ್ಯರ್ಥಿ ದಿಂಡಿಗುಲ್ ಲಿಯೋನಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು, ಆದರೂ ಡಿಎಂಕೆ ಅದನ್ನು ನಿಲ್ಲಿಸುವ ಯಾವುದೇ ಪ್ರಯತ್ನ ಮಾಡಿಲ್ಲ.
ಮಹಿಳಾ ಸಬಲೀಕರಣ ಬಿಜೆಪಿ ಆದ್ಯತೆ
ತಮಿಳುನಾಡಿನ ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಸಬಲೀಕರಣವನ್ನು ಬಿಜೆಪಿ ಬಯಸುತ್ತಿದೆ. ಎನ್ಡಿಎಗೆ ಮತ ನೀಡುವುದೆಂದರೆ ದೀರ್ಘಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಮುಂದಡಿಯಿಟ್ಟಂತೆ ಎಂದು ಹೇಳಿದ್ದಾರೆ. ತಮಿಳುನಾಡಿನ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ನಾವು ಬಯಸುತ್ತೇವೆ, ಅದಕ್ಕಾಗಿಯೇ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ.