Video: ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ
ಚೆನ್ನೈ, ಮೇ 8: ಇಂದು ವಿಶ್ವ ತಾಯಂದಿರ ದಿನ. ತಮ್ಮ ಬಡತನದ ಮಧ್ಯೆಯೂ ಹಸಿದವರ ಹೊಟ್ಟೆಗೆ ಕಡಿಮೆ ಬೆಲೆಯಲ್ಲೇ ಇಡ್ಲಿ ನೀಡುತ್ತಿದ್ದ ತಮಿಳುನಾಡಿನ ಇಡ್ಲಿ ಅಮ್ಮ ಕಮಲಾತ್ತಾಳ್ರಿಗೆ ಉದ್ಯಮಿ ಆನಂದ್ ಮಹೀಂದ್ರಾ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.
ದೇಶದಲ್ಲಿ ಉದ್ದಿನ ಬೇಳೆ, ಅಕ್ಕಿ ಬೆಲೆ ದುಬಾರಿ ಆಗಿದೆ. ಸಿಲಿಂಡರ್ ದರವನ್ನು ಆಕಾಶಕ್ಕೇರಿದೆ. ಇಂಥದರ ಮಧ್ಯೆಯೂ ಪ್ರತಿನಿತ್ಯ ಸೌದೆಯಲ್ಲಿ ಸಾವಿರಾರು ಇಡ್ಲಿಯನ್ನು ಮಾಡುವ ತಮಿಳುನಾಡಿನ ಕಮಲಾತ್ತಾಳ್ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಸರಿ. ಏಕೆಂದರೆ ಈ ಅಮ್ಮ ನೀಡುವ ಇಡ್ಲಿಯ ಬೆಲೆ ಕೇವಲ 1 ರೂಪಾಯಿ ಮಾತ್ರ.
1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್
85ರ ವಯಸ್ಸಿನಲ್ಲೂ ಪ್ರತಿನಿತ್ಯ ಬೆಳಗ್ಗೆ ಹೊತ್ತಿನಲ್ಲಿ ತಮಿಳುನಾಡಿನ ಕಮಲಾತ್ತಾಳ್ ಅವರು ಮಾಡುವ ಇಡ್ಲಿಯು ಸಾವಿರಾರು ಬಡವರ ಹಸಿವು ನೀಗಿಸುತ್ತಿದೆ. ಇಂಥ ಅನ್ನಪೂರ್ಣೇಶ್ವರಿಗೆ ಉದ್ಯಮಿ ಆನಂದ್ ಮಹೀಂದ್ರಾ ಹೊಸ ಮನೆಯೊಂದನ್ನು ನಿರ್ಮಿಸಿ ಕೊಟ್ಟಿದ್ದಾರೆ. ಆ ಮೂಲಕ ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.
|
ಇಡ್ಲಿ ಅಮ್ಮನಿಗೆ ವಿಶೇಷ ಮನೆಯ ಉಡುಗೊರೆ
ಉದ್ಯಮಿ ಆನಂದ್ ಮಹೀಂದ್ರಾ ಉಡುಗೊರೆಯಾಗಿ ನೀಡಿರುವ ಮನೆಯನ್ನು ತಮಿಳುನಾಡಿನ ಇಡ್ಲಿ ಅಮ್ಮ ಕಮಲಾತ್ತಾಳ್ ಪ್ರವೇಶಿಸುತ್ತಿರುವ ವಿಡಿಯೋವನ್ನು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಮನೆ ನಿರ್ಮಾಣವನ್ನು ಮಾಡಲು ಶ್ರಮಿಸಿದ ತಂಡದ ಎಲ್ಲಾ ಕಾರ್ಮಿಕರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಅವರಿಂದಾಗಿಯೇ ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡುವುದಕ್ಕೆ ಸಾಧ್ಯವಾಯಿತು. ಅವರು ಆರೈಕೆ, ಕಾಳಜಿ ಮತ್ತು ನಿಸ್ವಾರ್ಥ ಗುಣಗಳ ಸಮ್ಮಿಲನ. ಅವರ ಇಂಥ ಕಾರ್ಯಕ್ಕೆ ಬೆಂಬಲ ನೀಡಲು ತಮಗೂ ಒಂದು ಅವಕಾಶ ಸಿಕ್ಕಿರುವುದಾಗಿ ಅವರು ಬರೆದುಕೊಂಡಿದ್ದಾರೆ.
ಕಳೆದ 30 ವರ್ಷಗಳಿಂದ ನಿಸ್ವಾರ್ಥ ಕಾಯಕ
ತಮಿಳುನಾಡು ಕೊಯಮತ್ತೂರು ಹೊರವಲಯದ ವಡಿವೇಳಂಪಾಳಯಂನಲ್ಲಿ ಕಮಲಾತ್ತಾಳ್ ಅಮ್ಮನವರು 30 ವರ್ಷಕ್ಕೂ ಹೆಚ್ಚು ಕಾಲ ಈ ಕಾಯಕವನ್ನು ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಅಂಗಡಿಗೆ ಬರುವ ಬಡ ಕಾರ್ಮಿಕರು, ಕೂಲಿ ಆಳುಗಳು ಮತ್ತು ಬಡವರಿಗಾಗಿ ಕೇವಲ 1 ರೂಪಾಯಿ ದರದಲ್ಲಿ ರುಚಿಕರ ಇಡ್ಲಿಯನ್ನು ಮಾಡಿ ಬಡಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಶುರುವಾಗುವ ಇವರ ಇಡ್ಲಿ ಹೋಟೆಲ್ ನಲ್ಲಿ ಮಧ್ಯಾಹ್ನದವರೆಗೂ ಇಡ್ಲಿ ಮಾರಾಟ ಮಾಡಲಾಗುತ್ತದೆ.
|
ಇಡ್ಲಿ ಅಮ್ಮನಿಗೆ ಸ್ಟವ್ ಉಡುಗೊರೆ ನೀಡಿದ್ದ ಆನಂದ್ ಮಹೀಂದ್ರಾ
ಈ ಹಿಂದೆಯೇ ಕಟ್ಟಿಗೆ ಬಳಸಿ ಅಡುಗೆ ಮಾಡುವ ಅಜ್ಜಿ ಕಮಲಾತ್ತಾಳ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದ ಪರಿಚಯಾತ್ಮಕ ವಿಡಿಯೋವೊಂದನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದರು. ಅದರ ಜೊತೆಗೆ ಆಕೆ ಬಳಸುವ ಕಟ್ಟಿಗೆ ಅಡುಗೆ ವಿಧಾನ ಬದಲಾಯಿಸಬೇಕಿದೆ. ಯಾರಾದರೂ ಆಕೆಯ ಬಗ್ಗೆ ತಿಳಿದಿದ್ದರೆ, ನನಗೆ ತಿಳಿಸಿ, ನಾನು ಆಕೆಯ ಉದ್ಯಮದಲ್ಲಿ ಹೂಡಿಕೆ ಮಾಡಲು ಉತ್ಸುಕನಾಗಿದ್ದೇನೆ. ಆಕೆಗೆ ಎಲ್ ಪಿಜಿ ಸ್ಟವ್ ನೀಡಬೇಕಿದೆ ಎಂದು ಕಳೆದ ಸೆಪ್ಟೆಂಬರ್ 10ರಂದು ಟ್ವೀಟ್ ಮಾಡಿದ್ದರು.
ಆನಂದ್ ಮಹೀಂದ್ರಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಅಜ್ಜಿಯನ್ನು ಭೇಟಿ ಮಾಡಿ ಎಲ್ ಪಿ ಜಿ ಸಿಲಿಂಡರ್ ಸ್ಟವ್ ನೀಡಿರುವುದಾಗಿ ಪ್ರತಿಕ್ರಿಯೆ ನೀಡಿತ್ತು.
|
ಉದ್ಯಮಿ ಆನಂದ್ ಮಹೀಂದ್ರಾ ಕಾರ್ಯಕ್ಕೆ ಮೆಚ್ಚುಗೆ
"ಈ ಜಗತ್ತಿನಲ್ಲಿ ಕೆಲವೇ ಕೆಲವು ಒಳ್ಳೆಯ ಜನರನ್ನು ಹೊಂದಿದೆ, ಅದಕ್ಕಾಗಿಯೇ ನಮ್ಮಲ್ಲಿ ಇನ್ನೂ ಮಳೆಬೆಳೆ ಆಗುತ್ತಿದೆ. ಯಾಕೆ ಅಂತ ಗೊತ್ತಿಲ್ಲ, ಆನಂದ್ ಜೀ ಅವರೇ ಯಾಕೋ ಗೊತ್ತಿಲ್ಲ, ನೀವು ನನ್ನ ಮನಸ್ಸು ಮುಟ್ಟಿದ್ದು, ಸಂತೋಷಕ್ಕೆ ಕಣ್ಣೀರು ಬರುತ್ತಿದೆ, ಧನ್ಯವಾದಗಳು, ಆನಂದಜೀ," ಎಂದು ತಿರುವಂಚಿಯಂ ಎಂಬುವವರು ಟ್ವೀಟ್ ಮಾಡಿದ್ದಾರೆ.