ಕಮಲ ಹಾಸನ್ ಮಕ್ಕಳನೀದಿಮಯ್ಯಂ ಪಕ್ಷದ "ಕಾಯಂ ಅಧ್ಯಕ್ಷ"
ಚೆನ್ನೈ, ಫೆಬ್ರುವರಿ 11: ಕಮಲ್ ಹಾಸನ್ ಅವರನ್ನು ಗುರುವಾರ ಮಕ್ಕಳ ನೀದಿಮಯ್ಯಂ (ಎಂಎನ್ಎಂ) ಪಕ್ಷದ "ಕಾಯಂ ಅಧ್ಯಕ್ಷ" ಎಂದು ಘೋಷಣೆ ಮಾಡಲಾಗಿದ್ದು, ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಸಂಪೂರ್ಣ ಜವಾಬ್ದಾರಿ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರದ್ದಾಗಿರುತ್ತದೆ ಎಂದು ಪಕ್ಷ ಘೋಷಣೆ ಮಾಡಿದೆ.
ನಟ ಹಾಗೂ ರಾಜಕಾರಣಿ ಕಮಲ ಹಾಸನ್ ತಮ್ಮ ಪ್ರತಿಭೆ, ವೃತ್ತಿ, ಸಂಪತ್ತು ಹಾಗೂ ಜನಪ್ರಿಯತೆಯನ್ನು ತಮಿಳುನಾಡು ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಿದ್ದಾರೆ ಎಂದು ಪಕ್ಷದ ಸದಸ್ಯರು ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದು, ಈ ಎಲ್ಲಾ ಅಂಶಗಳಿಂದ ಅವರನ್ನು ಕಾಯಂ ಅಧ್ಯಕ್ಷರನ್ನಾಗಿ ಒಮ್ಮತದಿಂದ ನಿರ್ಧರಿಸಲಾಗಿದೆ ಎಂದಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ 2021; ಕಮಲ ಹಾಸನ್ ಪಕ್ಷದಿಂದ "ಉದ್ಯಮಕೆ ಕಾರ್ಯಸೂಚಿ" ಬಿಡುಗಡೆ
ಗುರುವಾರದಿಂದ ಕಮಲ ಹಾಸನ್ ಅವರು ಪಕ್ಷದ ಕಾಯಂ ಅಧ್ಯಕ್ಷರಾಗಿರುವರು ಎಂಬ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಪಕ್ಷಗಳ ಮೈತ್ರಿ, ಚುನಾವಣಾ ಕಾರ್ಯತಂತ್ರ ಹಾಗೂ ಸದಸ್ಯರ ಆಯ್ಕೆ ಹೀಗೆ ಪಕ್ಷ ಸಂಬಂಧಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿರಲಿದ್ದಾರೆ.
ಇದರೊಂದಿಗೆ ತಮಿಳುನಾಡಿನ ಜನರ ಮೇಲೆ ಬಿಜೆಪಿ ಸರ್ಕಾರದ ಹಿಂದಿ ಹಾಗೂ ಸಂಸ್ಕೃತ ಭಾಷಾ ಹೇರಿಕೆ ವಿರೋಧಿ ನಿರ್ಣಯ ಸೇರಿದಂತೆ ಹಲವು ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಇನ್ನೆರಡು ತಿಂಗಳುಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಾಮಾಣಿಕವಾಗಿ ಚುನಾವಣೆ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಚುನಾವಣಾ ಆಯೋಗಕ್ಕೆ ಪಕ್ಷ ಮನವಿ ಮಾಡಿಕೊಟ್ಟಿದೆ.
2018ರಲ್ಲಿ ರಚನೆಯಾದ ಎಂಎನ್ಎಂ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ 3.7% ಮತ ಗಳಿಸಿತ್ತು.