50 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಶೇ. 50 ಮೀಸಲಾತಿ; ಕಮಲ್ ಹಾಸನ್ ಭರವಸೆ
ಚೆನ್ನೈ, ಮಾರ್ಚ್ 03: ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಪ್ರಚಾರ ಕಾರ್ಯ ಬಿರುಸು ಪಡೆದುಕೊಂಡಿದೆ. ಎಐಎಡಿಎಂಕೆ -ಬಿಜೆಪಿ ಮೈತ್ರಿಕೂಟ ಹಾಗೂ ಡಿಎಂಕೆ -ಕಾಂಗ್ರೆಸ್ ಮೈತ್ರಿಕೂಟಗಳು ಸೆಣಸಾಟದಲ್ಲಿದ್ದು, ನಟ ಕಮಲ್ ಹಾಸನ್ ಅವರ ಮಕ್ಕಳ ನೀದಿಮಯ್ಯಂ ಪಕ್ಷವೂ ಹಲವು ಘೋಷಣೆಯೊಂದಿಗೆ ಕಣಕ್ಕಿಳಿದಿದೆ.
ಬುಧವಾರ ಮಕ್ಕಳನೀದಿ ಮಯ್ಯಂ ಪಕ್ಷದ ಮುಖಂಡ ಕಮಲ್ ಹಾಸನ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಏನೆಲ್ಲಾ ಕಾರ್ಯಗಳನ್ನು ನಡೆಸುವ ಯೋಜನೆ ಹೊಂದಿದೆ ಎಂಬುದರ ಕುರಿತು ವಿವರಣೆ ನೀಡಿದ್ದಾರೆ.
ಕಮಲ ಹಾಸನ್ ಮಕ್ಕಳನೀದಿಮಯ್ಯಂ ಪಕ್ಷದ "ಕಾಯಂ ಅಧ್ಯಕ್ಷ"
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರು ಹಾಗೂ ಯುವಜನತೆಯ ಕಲ್ಯಾಣಕ್ಕೆ ಬದ್ಧವಾಗಿ ಯೋಜನೆಗಳನ್ನು ತರುವ ಭರವಸೆ ನೀಡಿದ್ದಾರೆ.
ತಮಿಳು ನಾಡಿನಲ್ಲಿ ಸರ್ಕಾರ ರಚಿಸಲು ತಮ್ಮ ಪಕ್ಷಕ್ಕೆ ಒಂದು ಅವಕಾಶ ನೀಡಿದ್ದೇ ಆದರೆ, ರಾಜ್ಯದ ಎಲ್ಲಾ ವಲಯಗಳಲ್ಲಿಯೂ ಮಹಿಳೆಯರಿಗೆ 50% ಮೀಸಲಾತಿ ನೀಡುವುದಾಗಿ ತಿಳಿಸಿದ್ದಾರೆ. ಸ್ಯಾನಿಟರಿ ನ್ಯಾಪ್ಕಿನ್ ಗಳ ವಿತರಣೆ, ಮಹಿಳೆಯರ ಸುರಕ್ಷತೆಗೆ ಆದ್ಯತೆ, ಮಹಿಳೆಯರಿಗೆ ಆರೋಗ್ಯ ತಪಾಸಣೆಯಂಥ ಹಲವು ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಯುವ ಜನಾಂಗಕ್ಕೆ 50 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ತಿಳಿಸಿದ್ದು, ನಿರುದ್ಯೋಗ ಭತ್ಯೆ ನೀಡುವ ಭರವಸೆ ಕೊಟ್ಟಿದ್ದಾರೆ.
ಇದೇ ಸಂದರ್ಭ ಎಪಿಜೆ ಅಬ್ದುಲ್ ಕಲಾಂ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ವಿ. ಪೊನ್ರಾಜ್ ಅವರನ್ನು ಮಕ್ಕಳನೀದಿ ಮಯ್ಯಂ ಪಕ್ಷದ ಉಪಾಧ್ಯಕ್ಷರಾಗಿ ನೇಮಿಸಿಕೊಳ್ಳಲಾಯಿತು.
ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 7ರಂದು ಮಕ್ಕಳನೀದಿ ಮಯ್ಯಂ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.