ಬಿಜೆಪಿ ನಾಯಕರೊಂದಿಗೆ ಸ್ಟಾಲಿನ್ ಮಾತುಕತೆ: ಬಾಂಬ್ ಸಿಡಿಸಿದ ಪಕ್ಷಾಧ್ಯಕ್ಷೆ!
ಚೆನ್ನೈ, ಮೇ 14: ಚೆನ್ನೈಯಲ್ಲಿ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಮತ್ತು ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ಮುಖಂಡ ಕೆ ಚಂದ್ರಶೇಖರ್ ರಾವ್ ಅವರ ಭೇಟಿಯ ನಂತರ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಘಟನೆಯೊಂದು ನಡೆಯಲಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳುಸಾಯಿ ಸೌಂದರರಾಜನ್ ಹೊಸ ಬಾಂಬ್ ಸಿಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗ ನಿರ್ಮಿಸುವ ಬಗ್ಗೆ ಕೆಸಿಆರ್ ಅವರು ಸ್ಟಾಲಿನ್ ಅವರ ಬಳಿ ಪ್ರಸ್ತಾಪಿಸಿದ್ದರು. ಆದರೆ ಆ ಪ್ರಸ್ತಾಪವನ್ನು ತಿರಸ್ಕರಿಸಿದ ಸ್ಟಾಲಿನ್ ತಮ್ಮ ಬೆಂಬಲ ತೃತೀಯ ರಂಗಕ್ಕಿಲ್ಲ ಎಂದಿದ್ದರು. ಆದರೆ ಇದಾಗಿ ಒಂದೇ ದಿನದಲ್ಲಿ ಸ್ಟಾಲಿನ್ ತಮಿಳುನಾಡಿನ ಬಿಜೆಪಿ ಮುಖಂಡರೊದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡಿದ್ದಾರೆ ಎಂದು ತಮಿಳುಸಾಯಿ ಹೇಳಿದ್ದಾರೆ.
ಕೆಸಿಆರ್ ಪ್ರಧಾನಿ ಪಟ್ಟದ ಕನಸಿಗೆ ಅದೊಂದು ಮಾತಿಂದ ಕೊಳ್ಳಿ ಇಟ್ಟ ಸ್ಟಾಲಿನ್!
ಮೇ 13 ರಂದು ಸೋಮವಾರ ಕೆಸಿಆರ್ ಮತ್ತು ಸ್ಟಾಲಿನ್ ಭೇಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಇಬ್ಬರದೂ ''ಸೌಜನ್ಯ"ದ ಭೇಟಿ ಎನ್ನಲಾಗಿತ್ತಾದರೂ ಅವರು ತೃತೀಯ ರಂಗ ಮತ್ತು ರಾಷ್ಟ್ರ ರಾಜಕಾರಣದ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ನಾಯಕರೊಂದಿಗೆ ಮಾತುಕತೆ
ಟ್ಯುಟಿಕಾರ್ನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತಮಿಳುಸಾಯಿ ಸೌಂದರರಾಜನ್ ಪತ್ರಕರ್ತರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು. "ಒಂದೆಡೆ ರಾಹುಲ್ ಗಾಂಧಿ, ಒಂದು ಕಡೆ ಕೆಸಿಆರ್ ಮತ್ತೊಂದೆಡೆ ಮೋದಿ. ಎಲ್ಲರಿಗೂ ಡಿಎಂಕೆ ಬಣ್ಣ ಬದಲಾಯಿಸುವ ಪಕ್ಷ ಎಂಬುದು ಗೊತ್ತಿದೆ. ಆದ್ದರಿಂದ ಈಗಾಗಲೇ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಲು ಆರಂಭಿಸಿದ್ದಾರೆ. ಈ ಬಗ್ಗೆ ತೆರೆಮರೆಯ ಯತ್ನ ನಡೆಯುತ್ತಿದ್ದು, ನಾನು ಹೇಳುತ್ತಿರುವ ಮಾತು ನೂರಕ್ಕೆ ನೂರು ಸತ್ಯ" ಎಂದಿದ್ದಾರೆ.
ಕೆಸಿಆರ್ ಗೆ ಸ್ಟಾಲಿನ್ ರಿಂದ ಮತ್ತೆ ಮುಖಭಂಗ: ಹೋದ ದಾರಿಗೆ ಸುಂಕವಿಲ್ಲ!
ತೃತೀಯ ರಂಗದಿಂದ ಬಿಜೆಪಿಗೇ ಲಾಭ!
"ಕೆಸಿಆರ್ ಸ್ಟಾಲಿನ್ ಭೇಟಿಯ ಬಗ್ಗೆ ಕೇಳಿದೆ. ಆದರೆ ಇಂಥ ಮತ್ತಷ್ಟು ಪಕ್ಷಗಳು ತೃತೀಯ ರಂಗ ಎನ್ನುತ್ತ ಹೊರಟಷ್ಟೂ ಬಿಜೆಪಿಗೇ ಲಾಭ. ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗುತ್ತಾರೆ" ಎಂದು ಅವರು ಹೇಳಿದರು.
ಹಲವು ಅನುಮಾನ, ಊಹಾಪೋಹಗಳಿಗೆ ಕಾರಣವಾದ ಕೆಸಿಆರ್-ಸ್ಟಾಲಿನ್ ಭೇಟಿ
ಡಿಎಂಕೆ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಎಂಕೆ ವಕ್ತಾರ ಮನುರಾಜ್, "ತಮಿಳುಸಾಯಿ ಅವರ ಹೇಳಲಿಕೆಗೆ ಯಾವ ಸಾಕ್ಷಿ ಇದೆ? ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ಅವರು ಇಂಥ ಹೇಳಿಕೆಗಳನ್ನು ನೀಡುವಾಗ ಯೋಚಿಸಬೇಕು" ಎಂದಿದ್ದಾರೆ.
ಕಾಂಗ್ರೆಸ್-ಡಿಎಂಕೆ ಮೈತ್ರಿ
ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ತಮ್ಮ ಬೆಂಬಲ ಏನಿದ್ದರೂ ಕಾಂಗ್ರೆಸ್ ನೇತೃತ್ವದ ಎನ್ ಡಿಎ ಗೆ ಎಂದು ಈಗಾಗಲೇ ಸ್ಟಾಲಿನ್ ಹೇಳಿದ್ದಾರೆ. ಕೆಸಿಆರ್ ಭೇಟಿಯ ಸಂದರ್ಭದಲ್ಲೂ ಅವರು ಅದನ್ನೇ ಪುನರುಚ್ಚರಿಸಿದ್ದು, ರಾಹುಲ್ ಗಾಂಧಿ ಅವರ ಹೆಸರನ್ನೇ ನಾನು ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.