ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ ಸ್ಟಾಲಿನ್ ಪೊಲೀಸ್ ವಶಕ್ಕೆ
ಚೆನ್ನೈ, ಜೂನ್ 23: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ರಾಜ್ಯಪಾಲ ಬನ್ವಾರಿಲಾಲ್, ಸಂಯುಕ್ತ ವ್ಯವಸ್ಥೆಯ ತತ್ತ್ವದ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಹಲವು ಮುಖಂಡರನ್ನು ನಿನ್ನೆ ಬಂಧಿಸಲಾಗಿತ್ತು. ಈ ಕ್ರಮವನ್ನು ವಿರೋಧಿಸಿ ಎಂಕೆ ಸ್ಟಾಲಿನ್ ಇಂದು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೂತುಕುಡಿ ಹಿಂಸಾಚಾರ: ಪ್ರತಿಭಟನಾ ನಿರತ ಸ್ಟಾಲಿನ್ ಬಂಧನ
ಈ ಸಂದರ್ಭದಲ್ಲಿ ಮಾತನಾಡಿದ ಸ್ಟಾಲಿನ್, "ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಮ್ ಇಬ್ಬರೂ ರಾಜ್ಯಪಾಲರನ್ನು ವಿರೋಧಿಸುವುದಿಲ್ಲ. ಅವರಿಗೆ ಅಧಿಕಾರ ಕಳೆದುಕೊಳ್ಳುವ ಭಯ. ಅಷ್ಟೇ ಅಲ್ಲ, ರಾಜ್ಯಪಾಲರನ್ನು ವಿರೋಧಿಸಿದರೆ ಎಲ್ಲಿ ತಮ್ಮ ಭ್ರಷ್ಟಾಚಾರ ಬಯಲಿಗೆ ಬಂದೀತೋ ಎಂಬ ಆತಂಕ" ಎಂದು ಗೇಲಿಮಾಡಿದ್ದಾರೆ.
"ಹಲವು ಮುಖಂಡರಿಗೆ ಕಪ್ಪು ಬಾವುಟ ತೋರಿದ ಇತಿಹಾಸ ಡಿಎಂಕೆಯದು. ನಾವು ಪ್ರಧಾನಿ ಇಂದಿರಾ ಗಾಂಧಿಯವರಿಗೂ ಕಪ್ಪು ಬಾವುಟ ತೋರಿಸಿದ್ದೆವು. ಆದರೆ ಬಂಧನಕ್ಕೊಳಗಾಗಿರಲಿಲ್ಲ. ಅಂತೆಯೇ ಈಗಲೂ ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದೇವೆ. ಆದರೆ ಇದೀಗ ನಮ್ಮ ಮುಖಂಡರನ್ನು ಬಂಧಿಸಿದ್ದು ಯಾವ ನ್ಯಾಯ?" ಎಂದು ಅವರು ಪ್ರಶ್ನಿಸಿದ್ದಾರೆ.