ಕರುಣಾನಿಧಿ ಸಾವಿನ ಬೆನ್ನಲ್ಲೇ ಕುಟುಂಬದಲ್ಲಿ ಶುರುವಾಯಿತು ತಿಕ್ಕಾಟ
ಚೆನ್ನೈ ಆಗಸ್ಟ್ 13: ಡಿಎಂಕೆ ಮುಖ್ಯಸ್ಥರಾಗಿದ್ದ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ನಿಧನದ ಬೆನ್ನಲ್ಲೇ ಕುಟುಂಬದಲ್ಲಿನ ಒಡಕು ಭುಗಿಲೇಳುವ ಸೂಚನೆ ದೊರೆತಿದೆ.
ಕರುಣಾನಿಧಿ ಮೃತಪಟ್ಟು ಒಂದು ವಾರ ಕೂಡ ಕಳೆಯುವ ಮುನ್ನವೇ ಉತ್ತರಾಧಿಕಾರಿ ಪಟ್ಟಕ್ಕಾಗಿ ಅವರ ಮಕ್ಕಳಾದ ಎಂ.ಕೆ. ಸ್ಟಾಲಿನ್ ಮತ್ತು ಎಂ.ಕೆ. ಅಳಗಿರಿ ರಾಜಕೀಯ ಸಮರ ಬೀದಿಗೆ ಬಂದಿದೆ.
ಚಿತ್ರದಲ್ಲಿ ಎಂ ಕರುಣಾನಿಧಿ ವಂಶವೃಕ್ಷದ ಮಾಹಿತಿ
'ನಿಜವಾದ ಡಿಎಂಕೆ ಅನುಯಾಯಿಗಳು ನನ್ನನ್ನು ಬೆಂಬಲಿಸುತ್ತಾರೆ. ಪಕ್ಷದ ಎಲ್ಲ ನಾಯಕರು ನನ್ನ ಜತೆಗಿದ್ದಾರೆ ಎಂದು ಎಂ.ಕೆ. ಅಳಗಿರಿ ಹೇಳಿಕೆ ನೀಡಿದ್ದಾರೆ.
ಮರೀನಾ ಬೀಚ್ನಲ್ಲಿನ ಕರುಣಾನಿಧಿ ಅವರ ಸಮಾಧಿಗೆ ಸೋಮವಾರ ಕುಟುಂಬದವರ ಜತೆ ಗೌರವ ಸಲ್ಲಿಸಿದ ಅಳಗಿರಿ, ಕುಟುಂಬ ರಾಜಕಾರಣದ ಜಿದ್ದಾಜಿದ್ದಿಯ ಸುಳಿವು ನೀಡಿದ್ದಾರೆ.
ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ಪಕ್ಷದಲ್ಲಿ ಏನು ನಡೆಯುತ್ತಿದೆಯೋ ಅದು ನನಗೆ ತೀವ್ರ ನೋವುಂಟುಮಾಡಿದೆ. ನಾನು ಡಿಎಂಕೆಯ ಭಾಗವಲ್ಲ ಎಂದು ಅಳಗಿರಿ ಹೇಳಿದ್ದಾರೆ.
'ಕೊನೆಯ ಬಾರಿ ಅಪ್ಪ ಎಂದು ಕರೆಯಲೇ?' ಕರುಣಾನಿಧಿಗೆ ಸ್ಟಾಲಿನ್ ಭಾವುಕ ಪತ್ರ!
ಅತ್ತ ಡಿಎಂಕೆಯ ಮುಖ್ಯಸ್ಥ ಸ್ಥಾನಕ್ಕೆ ಸ್ಟಾಲಿನ್ ಅವರನ್ನು ನೇಮಿಸುವ ಚರ್ಚೆ ತೀವ್ರಗೊಂಡಿರುವಂತೆಯೇ ಅಳಗಿರಿ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯಗಳು ಕೇಳಿಬರುತ್ತಿವೆ.
ಡಿಎಂಕೆಯ ಸಾಮಾನ್ಯ ಸಭೆ ಮುಂದಿನ ತಿಂಗಳು ನಡೆಯುವ ಸಾಧ್ಯತೆಯಿದ್ದು, ಹಾಲಿ ಕಾರ್ಯಾಧ್ಯಕ್ಷರಾಗಿರುವ ಸ್ಟಾಲಿನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಉದ್ದೇಶ ಹೊಂದಲಾಗಿದೆ. ಆದರೆ, ಅದಕ್ಕೆ ಮುನ್ನವೇ ಡಿಎಂಕೆಯಲ್ಲಿ ಒಡಕು ಮೂಡುವ ಲಕ್ಷಣಗಳು ಕಾಣಿಸಿವೆ.
ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!
ಅಳಗಿರಿ ಮತ್ತು ಸ್ಟಾಲಿನ್ ನಡುವಣ ಕದನ ಹಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಪಕ್ಷದ ಹಿರಿಯ ನಾಯಕರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪದಲ್ಲಿ ಅಳಗಿರಿ ಅವರನ್ನು ಕರುಣಾನಿಧಿ 2014ರಲ್ಲಿ ಪಕ್ಷದಿಂದ ಉಚ್ಚಾಟಿಸಿದ್ದರು.
ಜಯಲಲಿತಾ, ಕರುಣಾನಿಧಿ ಪರಸ್ಪರ ಅಷ್ಟು ದ್ವೇಷಿಸುತ್ತಿದ್ದುದು ಏಕೆ?
ಈ ಸಂದರ್ಭದಲ್ಲಿ ಪಕ್ಷ ಹಾಗೂ ಸ್ಟಾಲಿನ್ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಕರುಣಾನಿಧಿ, ಅಳಗಿರಿ ಅವರಿಗೆ ಸೂಚಿಸಿದ್ದರು. ಅಂದಿನಿಂದ ಯಾವುದೇ ಹೇಳಿಕೆ ನೀಡದೆ ಮೌನವಹಿಸಿದ್ದ ಅಳಗಿರಿ, ಈಗ ಮತ್ತೆ ಬಹಿರಂಗವಾಗಿ ಸಹೋದರನೊಂದಿಗಿನ ಕದನದ ಸೂಚನೆ ನೀಡಿದ್ದಾರೆ.