ಸರ್ಕಾರಿ ಬಸ್ಸಿಗೆ ಕಲ್ಲೆಸೆತ, ಜೈಲು ಶಿಕ್ಷೆ ಪಡೆದಿದ್ದಕ್ಕೆ, ಸಚಿವ ಸ್ಥಾನಕ್ಕೆ ರಾಜೀನಾಮೆ
ಚೆನ್ನೈ, ಜನವರಿ 08: 1998ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಜೈಲು ಶಿಕ್ಷೆ ಪಡೆದಿರುವ ತಮಿಳುನಾಡಿನ ಯುವ ಜನ ಕಲ್ಯಾಣ ಮತ್ತು ಕ್ರೀಡಾಖಾತೆ ಸಚಿವ ಪಿ ಬಾಲಕೃಷ್ಣ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಚೆನ್ನೈನ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ(ಜನವರಿ 07)ದಂದು ಎರಡು ದಶಕಗಳ ಬಳಿಕ ಗಲಭೆ ಪ್ರಕರಣವೊಂದರ ತೀರ್ಪು ಹೊರ ಬಂದಿತ್ತು. ಹೊಸೂರಿನಲ್ಲಿ ನಡೆದಿದ್ದ ಈ ಗಲಭೆ ಪ್ರಕರಣದಲ್ಲಿ ಸರ್ಕಾರಿ ಬಸ್ ಗಳಿಗೆ ಕಲ್ಲೆಸೆತ, ದೊಂಬಿ, ಗಲಭೆಗೆ ಪ್ರಚೋದನೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದ ಬಾಲಕೃಷ್ಣ ರೆಡ್ಡಿ ಅವರ ಮೇಲಿನ ಆರೋಪಗಳು ಸಾಬೀತಾಯಿತು.
ಬಾಲಕೃಷ್ಣ ರೆಡ್ಡಿ ಅವರಿಗೆ 3 ವರ್ಷ ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡವನ್ನು ವಿಧಿಸಲಾಗಿದೆ. ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಸಚಿವ ಬಾಲಕೃಷ್ಣ ಅವರ ರಾಜೀನಾಮೆಗೆ ಆಗ್ರಹಿಸಿದರು.
ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವುದಾಗಿ ಪ್ರತಿಕ್ರಿಯಿಸಿದ್ದ ಸಚಿವ ಬಾಲಕೃಷ್ಣ ಅವರು ಸೋಮವಾರ ರಾತ್ರಿ ವೇಳೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಬಾಲಕೃಷ್ಣ ಅವರ ಬಳಿ ಇದ್ದ ಖಾತೆಯನ್ನು ಪ್ರಾಥಮಿಕ ಶಿಕ್ಷಣ ಸಚಿವ ಕೆಎ ಸೆಂಗೊಟ್ಟೈಯನ್ ಅವರಿಗೆ ನೀಡಲಾಗಿದೆ. ಬಾಲಕೃಷ್ಣ ಅವರ ರಾಜೀನಾಮೆಯನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಅಂಗೀಕರಿಸಿದ್ದಾರೆ.