ಊರಿಗೆ ಹೋಗ್ತೀನಿ ಎಂದ ಕಾರ್ಮಿಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಾಲೀಕ
ಚೆನ್ನೈ, ಮೇ 19: ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ತಮಿಳುನಾಡಿನಲ್ಲಿ ಊರಿಗೆ ಹೋಗ್ತೀನಿ ಎಂದ ಕಾರ್ಮಿಕನಿಗೆ ಮಾಲೀಕ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವರದಿಯಾಗಿದೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಮುನುಸ್ವಾಮಿ ಎಂಬುವರ ಬಳಿ ಕೆಲಸ ಮಾಡುತ್ತಿದ್ದ ದಂಪತಿಗಳು, ಊರಿಗೆ ಹೋಗುತ್ತೇವೆ ಎಂದು ಮಾಲೀಕನ ಬಳಿ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿದ ಮಾಲೀಕ ಇಬ್ಬರಿಗೂ ರಕ್ತ ಬರುವ ರೀತಿ ಹಲ್ಲೆ ಮಾಡಿದ್ದಾರೆ.
ಗುಜರಾತ್ನಲ್ಲಿ 'ಶ್ರಮಿಕ್ ರೈಲು' ರದ್ದುಗೊಳಿಸಿದ್ದಕ್ಕೆ ಕಾರ್ಮಿಕರಿಂದ ಗಲಾಟೆ
ಮಾಲೀಕನಿಂದ ಹಲ್ಲೆಗೊಳಗಾದ ಕಾರ್ಮಿಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್ಪಿ ಪಿ ಅರವಿಂದನ್ ''ವಿಷಯ ತಿಳಿಯುತ್ತಿದ್ದಂತೆ ಕಾರ್ಮಿಕರನ್ನು ರಕ್ಷಿಸಲಾಗಿದೆ ಹಾಗು ಮಾಲೀಕನ ವಿರುದ್ಧ ಸೆಕ್ಷನ್ 294, ಸೆಕ್ಷನ್ 324, ಸೆಕ್ಷನ್ 506 ಹಾಗೂ ಐಪಿಸಿ ಸೆಕ್ಷನ್ 341 ಅಡಿಯಲ್ಲಿ ಕೇಸ್ ಹಾಕಲಾಗಿದೆ' ಎಂದು ತಿಳಿಸಿದ್ದಾರೆ.
ಸುಮಾರು 300 ಜನ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಒಡಿಶಾ, ಉತ್ತರ ಪ್ರದೇಶ, ಚಂಡೀಗಢ ಮೂಲದವರು ಹೆಚ್ಚಿನವರು ಇದ್ದರು. ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳಲ್ಲಿ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮಾಲೀಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.